ಕನ್ನಡಪ್ರಭ ವಾರ್ತೆ ಮೇಲುಕೋಟೆ
ಹತ್ತು ದಿನಗಳ ಧಾರ್ಮಿಕ ಕೈಂಕರ್ಯಗಳು ರಾತ್ರಿ ನಡೆದ ಚೆಲುವನಾರಾಯಣ ಸ್ವಾಮಿಯವರ ಉತ್ಸವದೊಂದಿಗೆ ಮುಕ್ತಾಯವಾಯಿತು. ಮನವಾಳ ಮಾಮುನಿ ಜೀಯರ್ ತಿರುನಕ್ಷತ್ರ ಮಹೋತ್ಸವದಂದು ಕಲ್ಯಾಣಿಯಿಂದ ಭವ್ಯ ಮೆರವಣಿಗೆಯಲ್ಲಿ ಪವಿತ್ರವಾದ ತೀರ್ಥತಂದು ದ್ವಾದಶಾರಾಧನೆಯೊಂದಿಗೆ ವೇದಮಂತ್ರ ಮತ್ತು ಮಂಗಳವಾದ್ಯದೊಂದಿಗೆ ಭವ್ಯವಾಗಿ ಮಹಾಭಿಷೇಕ ನೆರವೇರಿಸಲಾಯಿತು.
ನಂತರ ಭಗವದ್ ರಾಮಾನುಜರ ಸನ್ನಿಧಿಯಿಂದ ಶಠಾರಿ ಮರ್ಯಾದೆಗಳನ್ನು ಭಕ್ತಿಪೂರ್ವಕವಾಗಿ ಜೀಯರ್ಗೆ ನೆರವೇರಿಸಲಾಯಿತು. ವಿದ್ವಾನ್ ಶ್ರೀರಂಗಂ ಶಲ್ವನಾರಾಯಣನ್ ಬಿ.ವಿ. ಆನಂದಾಳ್ವಾರ್ ಸಾರಥ್ಯದಲ್ಲಿ ಜೀಯರ್ ಸನ್ನಿಧಿಯ ಅರ್ಚಕ ಸ್ಥಾನೀಕಂ ಶ್ರೀರಾಮನ್ ಶ್ರದ್ಧಾಭಕ್ತಿಯಿಂದ ಪೂಜಾ ಕೈಂಕರ್ಯ ನೆರವೇರಿಸಿದರು.ಸಂಜೆ ರಾಮಾನುಜರು, ಶ್ರೀದೇವಿ ಭೂದೇವಿ ಸಮೇತನಾದ ಚೆಲುವನಾರಾಯಣ ಸ್ವಾಮಿಯೊಂದಿಗೆ ಮನವಾಳ ಮಾಮುನಿ ಜೀಯರ್ಗೆ ಭವ್ಯವಾದ ಉತ್ಸವ ನೆರವೇರಿತು. ಉತ್ಸವದ ವೇಳೆ ಸಿಡಿಸಿದ ಸ್ಕೈಶಾಟ್ಗಳು ಆಕಾಶದಲ್ಲಿ ಮನಮೋಹಕ ಚಿತ್ತಾರ ಮೂಡಿಸಿ ಉತ್ಸವದ ವೈಭವಕ್ಕೆ ಮೆರಗು ನೀಡಿತು. ದೇಗುಲದ ಇಒ ಶೀಲ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.
ಕಿಕ್ಕೇರಿ:
ದೀಪಾವಳಿಯಿಂದ ವಾರದವರೆಗೆ ನಡೆದಸಿಡಿ ಹಬ್ಬದಲ್ಲಿ ಐಕನಾಳಮ್ಮ(ಲಕ್ಷ್ಮೀದೇವಿ) ಗ್ರಾಮದೇವಿಗೆ ವಿಶೇಷ ಪೂಜೆ ಸಲ್ಲಿಸಲು ಬುಡಿಯಪ್ಪನ ಬಳಗದೊಂದಿಗೆ ತೋಪಣ್ಣ, ಕೆಂಗಪ್ಪ, ಹುಚ್ಚಮ್ಮ, ಬುಡಿಯಪ್ಪನ ಬಳಗ ಸೇರಿದಂತೆ ಸುತ್ತಮುತ್ತಲ ಗ್ರಾಮದ ಭಕ್ತರು, ಹೊರಸ್ಥಳದಲ್ಲಿ ನೆಲೆಸಿರುವ ದೇವಿ ಭಕ್ತರು ಭಾಗಿಯಾಗಿದ್ದರು.
ವೀರಮಕ್ಕಳು ದೇವರಆರಾಧನೆಯ ಕೋಲನ್ನುಕೈಯಲ್ಲಿಡಿದುಕೊಂಡು ಬೀಸುಗತ್ತಿಯಂತೆ ಜಳಪಿಸಿದರು. ಸೋಮನ ಮುಖವಾಡ ಧರಿಸಿ ವೀರಮಕ್ಕಳು ನರ್ತಿಸಿ ದೇವಿಗೆತಮ್ಮ ಸೇವೆ ಒಪ್ಪಿಸಿದರು. ಸಿಡಿರಥಕ್ಕೆ ಹೂವು, ವಿವಿಧ ಬಗೆಯ ವಸ್ತ್ರಗಳಿಂದ ಅಲಂಕರಿಸಿದರು.
ಗ್ರಾಮದ ಸುತ್ತಮುತ್ತಲ ಹತ್ತಾರು ಹಳ್ಳಿಯ ಭಕ್ತರುಗುಡಿಗೆ ಆಗಮಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು.