ಬ್ರಹ್ಮಕುಮಾರೀಸ್ ಈಶ್ವರೀ ವಿಶ್ವವಿದ್ಯಾಲಯ ನೂತನವಾಗಿ ನಿರ್ಮಿಸಿರುವ ಶಿವದರ್ಶನ ಭವನ ಉದ್ಘಾಟನೆ
ಜೀವನದಲ್ಲಿ ನೆಮ್ಮದಿಯಾಗಿರಲು ಸರಳವಾಗಿ ಬದುಕಬೇಕು. ಸಂತೋಷವನ್ನು ನಾವು ಕಂಡುಕೊಳ್ಳಬೇಕು. ಸಂತೋಷ ಎನ್ನುವುದು ಕೊಳ್ಳಲು, ದುಖಃವನ್ನು ಮಾರಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.
ಸಖರಾಯಪಟ್ಟಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀ ವಿಶ್ವವಿದ್ಯಾಲಯ ನೂತನವಾಗಿ ನಿರ್ಮಿಸಿರುವ ಶಿವದರ್ಶನ ಭವನವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ಧರ್ಮದಲ್ಲೂ ದೇವರು ಕಾಣುತ್ತೇವೆ. ಸಂಸ್ಕೃತಿ ಎಲ್ಲದಕ್ಕಿಂತ ದೊಡ್ಡದು ಅದನ್ನು ಮರೆತರೆ ವಿಕೃತವಾಗುತ್ತದೆ. ಮನುಷ್ಯ ಜನ್ಮ ದೊಡ್ಡದು, ನಾವು ಕಟ್ಟುವ ಮನೆ ದೇಹಕ್ಕೆ, ನಮ್ಮ ಮನೆ ಭಗವಂತನ ಸಾನ್ನಿಧ್ಯದಲ್ಲಿದೆ. ಇವತ್ತಿನ ಸಂದರ್ಭದಲ್ಲಿ ಮನುಷ್ಯ ಮನಃಶಾಂತಿ ಕಳೆದುಕೊಂಡಿದ್ದಾನೆ. ಅದನ್ನು ಬ್ರಹ್ಮಕುಮಾರೀಸ್ ಸಂಸ್ಥೆ ಕೊಡುವ ಪ್ರಯತ್ನವನ್ನು ಮಾಡುತ್ತಿದೆ. ಶಿವದರ್ಶನ ಭವನ ಬರುವ ಭಕ್ತಾಧಿಗಳಿಗೆ ಶಿವದರ್ಶನ ನೀಡುವಂತಹ ಚಟುವಟಿಕೆ ಮಾಡಲಿ ಎಂದರು.ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ಏಕಾಗ್ರತೆ ಕಡಿಮೆಯಾಗಿ ಒತ್ತಡ ಜಾಸ್ತಿಯಾಗುತ್ತಿದೆ. ಆಧ್ಯಾತ್ಮದ ಕಡೆಗೆ ಒಲುವು ಮೂಡುತ್ತಿದೆ. ಒತ್ತಡ ಕಡಿಮೆ ಮಾಡಿಕೊಳ್ಳಲು ಈ ಬ್ರಹ್ಮಕುಮಾರೀಸ್ ಈಶ್ವರೀಯ ವಿದ್ಯಾಲಯ ಉತ್ತಮ. ರಾಜಕಾರಣಿಗಳಿಂದ ಹಿಡಿದು ಸಾಮಾನ್ಯ ಮನುಷ್ಯರೂ ಕೂಡ ಶಾಂತಿ ಅರಸಿ ಇಂತಹ ಕೇಂದ್ರಗಳಿಗೆ ಬರುತ್ತಿದ್ದಾರೆ. ನಮ್ಮ ಹೃದಯ ಮತ್ತು ಮನಸ್ಸು ಸಂತೃಪ್ತವಾಗಬೇಕಾದರೆ ಇಂತಹ ತಾಣಗಳು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಬೆಂಗಳೂರು ಉಪ ವಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಕುಮಾರಿ ಡಾ.ಅಂಬಿಕಾಜಿ ಮಾತನಾಡಿ, ಮನುಕುಲದ ಪರಿವರ್ತನೆಯೇ ನಮ್ಮ ಧ್ಯೇಯ. ಇಡೀ ಮನುಕುಲ ಶಾಂತಿ ನೆಮ್ಮದಿಯಿಂದ ನಡೆಯಬೇಕು. ಈ ನೂತನ ಕಟ್ಟಡ ಇನ್ನು ಹೆಚ್ಚಿನ ಶಾಂತಿ ನೆಮ್ಮದಿಯನ್ನು ಸಾರ್ವಜನಿಕರಿಗೆ ಕರುಣಿಸಲಿ ಎಂದರು.
ಚಿಕ್ಕಮಗಳೂರು ಬ್ರಹ್ಮಕುಮಾರೀಸ್ ರಾಜಯೋಗಿನಿ ಬ್ರಹ್ಮಕುಮಾರಿ ಭಾಗ್ಯಕ್ಕ ಕಾರ್ಯಕ್ರಮ ನಿರೂಪಿಸಿದರು, ಸಖರಾಯಪಟ್ಟಣದ ಬ್ರಹ್ಮಕುಮಾರೀಸ್ ಸಂಚಾಲಕಿ ಬಿ.ಕೆ. ಯಶೋಧಕ್ಕ ಸ್ವಾಗತಿಸಿ, ಈಶ್ವರಾಚಾರ್ ವಂದಿಸಿದರು. 25 ಕೆಸಿಕೆಎಂ 2