ಗದಗ: ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳ ೭೫ನೇ ಜಯಂತಿ ಅಂಗವಾಗಿ ಭಾವೈಕ್ಯತಾ ದಿನಾಚರಣೆ ಕಾರ್ಯಕ್ರಮ ಫೆ.೨೧ರಂದು ಬೆಳಗ್ಗೆ ೧೦.೩೦ಕ್ಕೆ ನಗರದ ತೋಂಟದಾರ್ಯ ಮಠದಲ್ಲಿ ಜರುಗಲಿದೆ.
ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳ ಕುರಿತು ಸಾಹಿತಿ ಬಿ.ಆರ್. ಪೊಲೀಸಪಾಟೀಲ ರಚಿಸಿದ ಉರಿಯ ಗದ್ದುಗೆ ಕಾದಂಬರಿ ಹಾಗೂ ಭೋಜರಾಜ ಸೊಪ್ಪಿಮಠ ಸಂಪಾದಿಸಿದ ಕರುಣಾಮಯಿ ಭಾಗ-೨ ಕೃತಿಗಳು ಬಿಡುಗಡೆಗೊಳ್ಳುವವು. ಕರ್ನಾಟಕ ಸರಕಾರದ ಬಸವ ಪುರಸ್ಕಾರ ಪ್ರಶಸ್ತಿಗೆ ಭಾಜನರಾದ ಡಾ. ವೀರಣ್ಣ ರಾಜೂರ ಹಾಗೂ ಡಾ. ಎನ್.ಜಿ. ಮಹಾದೇವಪ್ಪ ಅವರನ್ನು ಸನ್ಮಾನಿಸಲಾಗುವುದು.
ಅತಿಥಿಗಳಾಗಿ ನ್ಯೂಜಿಲೆಂಡ್ನ ಬಸವ ಸಮಿತಿಯ ಸಂಸ್ಥಾಪಕ ಲಿಂಗಣ್ಣ ಕಲಬುರ್ಗಿ, ಪತ್ರಕರ್ತ ಸನತ್ಕುಮಾರ ಬೆಳಗಲಿ, ಸಾಹಿತಿ ಅಕ್ಬರ ಕಾಲಿಮಿರ್ಚಿ ಆಗಮಿಸುವರು. ಜ. ತೋಂಟದಾರ್ಯ ವಿದ್ಯಾಪೀಠದ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಂಜೆ ೬-೩೦ಕ್ಕೆ ಸಾಣೇಹಳ್ಳಿ ಶಿವ ಸಂಚಾರ ನಾಟಕ ಕಲಾತಂಡದ ಕಲ್ಯಾಣದ ಬಾಗಿಲು ನಾಟಕ ಪ್ರದರ್ಶನ ಜರುಗುವುದು. ಕಾರಣ ತೋಂಟದಾರ್ಯ ಮಠದ ಸದ್ಭಕ್ತರು, ಬಸವಾಭಿಮಾನಿಗಳು ಕಾರ್ಯಕ್ರಮಕ್ಕೆ ಆಗಮಿಸಲು ಶ್ರೀಮಠ ಪ್ರಕಟಣೆಯಲ್ಲಿ ತಿಳಿಸಿದೆ.ಭಾವೈಕ್ಯತಾ ಯಾತ್ರೆ: ಭಾವೈಕ್ಯತೆಯ ಹರಿಕಾರರಾಗಿದ್ದ ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳ ೭೫ನೇ ಜಯಂತಿ ಅಂಗವಾಗಿ ಬೆಳಗ್ಗೆ ೮-೩೦ಕ್ಕೆ ಭೀಷ್ಮ ಕೆರೆಯ ಬಸವೇಶ್ವರ ಪುತ್ಥಳಿಯಿಂದ ಶ್ರೀ ತೋಂಟದಾರ್ಯ ಮಠದವರೆಗೆ ಭಾವೈಕ್ಯತಾ ಯಾತ್ರೆ ಜರುಗುವುದು.