ಇಂದು ಅರವಿಂದರಾವ್ ದೇಶಪಾಂಡೆ ಅಮೃತ ಮಹೋತ್ಸವ

KannadaprabhaNewsNetwork | Published : Apr 12, 2025 12:46 AM

ಸಾರಾಂಶ

ಅಥಣಿಯ ಸಮಾಜ ಸೇವಕರು, ಶಿಕ್ಷಣ ಪ್ರೇಮಿ, ಸಂಘಟನಾ ಚತುರರಾದ ಅರವಿಂದರಾವ್ ದೇಶಪಾಂಡೆ ಅವರ ಅಮೃತ ಮಹೋತ್ಸವ ಕಾರ್ಯಕ್ರಮ ಏ.12 ರಂದು ಸಂಜೆ 5 ಗಂಟೆಗೆ ಜೆ.ಎ.ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಹಿರಿಯ ನ್ಯಾಯವಾದಿ, ವಿಮೋಚನಾ ಸಂಸ್ಥೆಯ ಅಧ್ಯಕ್ಷ ಬಿ.ಎಲ್.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಅಥಣಿಯ ಸಮಾಜ ಸೇವಕರು, ಶಿಕ್ಷಣ ಪ್ರೇಮಿ, ಸಂಘಟನಾ ಚತುರರಾದ ಅರವಿಂದರಾವ್ ದೇಶಪಾಂಡೆ ಅವರ ಅಮೃತ ಮಹೋತ್ಸವ ಕಾರ್ಯಕ್ರಮ ಏ.12 ರಂದು ಸಂಜೆ 5 ಗಂಟೆಗೆ ಜೆ.ಎ.ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಹಿರಿಯ ನ್ಯಾಯವಾದಿ, ವಿಮೋಚನಾ ಸಂಸ್ಥೆಯ ಅಧ್ಯಕ್ಷ ಬಿ.ಎಲ್.ಪಾಟೀಲ ಹೇಳಿದರು.

ಪಟ್ಟಣದಲ್ಲಿ ಅಮೃತ್ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸವ್ಯಸಾಚಿ ಅಭಿನಂದನಾ ಸಮಿತಿಯಿಂದ ಅರವಿಂದರಾವ್ ಅಮೃತ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ. ಅರವಿಂದ್ ರಾವ್ ದೇಶಪಾಂಡೆ ಅವರು ಅಥಣಿಯಲ್ಲಿ ಪಕ್ಷಾತೀತ ಮತ್ತು ಜಾತ್ಯತೀತವಾಗಿ ಸಮಾಜಮುಖಿ ಸೇವೆ ಮಾಡಿದವರು. ಜಾಧವಜೀ ಶಿಕ್ಷಣ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಿ ಇತ್ತೀಚಿಗೆ ಶತಮಾನೋತ್ಸವದ ಕಾರ್ಯಕ್ರಮವನ್ನು ವರ್ಷವಿಡಿ ಆಚರಿಸಿದ್ದು ವಿಶೇಷ. ಶಿಕ್ಷಣ ಪ್ರೇಮಿ ಯಾಗಿರುವ ಅವರು ಸಂಸ್ಥೆಯ ಕಾರ್ಯಧ್ಯಕ್ಷರಾಗಿ ಸಂಸ್ಥೆಯ ಬೆಳವಣಿಗೆಗೆ ಹಗಲಿರುಳು ಶ್ರಮಿಸಿದವರು. ಅವರ 75ನೇ ವರ್ಷದ ಸವಿ ನೆನಪಿನಲ್ಲಿ ಜರುಗುವ ಅಮೃತ ಮಹೋತ್ಸವ ಹಾಗೂ ಸವ್ಯಸಾಚಿ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸೋಣ. ಈ ಸಮಾರಂಭದಲ್ಲಿ ಹಲವು ಗಣ್ಯಾತಿಗಣ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸ್ವಾಮೀಜಿಗಳು ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ, ಹಿರಿಯ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ, ಅರವಿಂದರಾವ ದೇಶಪಾಂಡೆಯವರು ಅಥಣಿಯ ಹಿರಿಯರು. ಅಲ್ಲದೆ ಸರ್ವರನ್ನು ಒಗ್ಗೂಡಿಸಿಕೊಂಡು ಹೋಗುವಂತಹ ಮುಖಂಡರಾಗಿದ್ದಾರೆ. ಅಥಣಿಯ ಸವ್ಯಸಾಚಿ ಅಭಿನಂದನಾ ಸಮಿತಿಯಿಂದ ಅಮೃತ ಮಹೋತ್ಸ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಸವ್ಯಸಾಚಿ ಗ್ರಂಥ ಬಿಡುಗಡೆ ಜರುಗಲಿದೆ. ಈ ಸಮಾರಂಭದಲ್ಲಿ ಕನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಿಲ್ಪಿ ಡಾ.ಅರುಣ ಯೋಗಿರಾಜ ಉಪಸ್ಥಿತರಿರುವರು. ಗೌರವ ಉಪಸ್ಥಿತಿಯಾಗಿ ಅರವಿಂದರಾವ್ ದೇಶಪಾಂಡೆ ದಂಪತಿಗಳು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಮೋಚನಾ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಬಿ.ಎಲ್.ಪಾಟೀಲ ವಹಿಸಲಿದ್ದಾರೆ. ಏ.12 ರಂದು ಸಂಜೆ 5 ಗಂಟೆಗೆ ಜೆ.ಎ .ಪೂ ಕಾಲೇಜು ಆವರಣದಲ್ಲಿ ನಡೆಯಲಿದ್ದು, ಅವರ ಎಲ್ಲ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೋರಿದರು.ಈ ಸಂದರ್ಭದಲ್ಲಿ ಜೆ.ಇ.ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ರಾಮ ಕುಲಕರ್ಣಿ, ಅನಿಲ ದೇಶಪಾಂಡೆ, ನ್ಯಾಯವಾದಿ ಎಸ್.ಎ.ದಾತಾರ, ಗೌರವ ಭಾಟೆ, ಪ್ರಾಚಾರ್ಯ ಆರ್‌.ಎಂ.ದೇವರೆಡ್ಡಿ, ಮಹಾಲಿಂಗ ಮೇತ್ರಿ, ಜಿ.ಎಂ.ಕುಲಕರ್ಣಿ, ಎನ್.ಬಿ.ಝರೆ, ಆರ್.ಎ.ಜೋಶಿ ಸೇರಿದಂತೆ ಸವ್ಯಸಾಚಿ ಅಭಿನಂದನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Share this article