ಜಿಲ್ಲೆಯಲ್ಲೂ ಶುರುವಾಯ್ತು ಟೋಲ್‌ ಪಾವತಿ ಸಂಚಾರ!

KannadaprabhaNewsNetwork |  
Published : Feb 26, 2024, 01:34 AM IST
ಪೋಟೋ: 25ಎಸ್‌ಎಂಜಿಕೆಪಿ02ಶಿವಮೊಗ್ಗ – ಸವಳಂಗ ನಡುವೆ ಟೋಲ್‌ ಗೇಟ್‌ ಸ್ಥಾಪಿಸಿರುವುದು. | Kannada Prabha

ಸಾರಾಂಶ

ರಾಜ್ಯ ಹೆದ್ದಾರಿಗಳಲ್ಲಿ ಟೋಲ್‌ ಗೇಟ್‌ ವಿರುದ್ಧ ಜನರ ಆಕ್ರೋಶದ ನಡುವೆಯೂ ಶಿವಮೊಗ್ಗದಲ್ಲಿ ರಾಜ್ಯ ಸರ್ಕಾರ ಹೊಸ ಟೋಲ್‌ ನಿರ್ಮಾಣಕ್ಕೆ ಮುಂದಾಗಿದೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ 2 ಟೋಲ್‌ ಗೇಟ್‌ ಸ್ಥಾಪಿಸಲಾಗಿದ್ದು, ಇನ್ಮುಂದೆ ಟೋಲ್‌ ಪಾವತಿಸಿ ಜನರು ಸಂಚರಿಸಬೇಕಾದ ಅನಿವಾರ್ಯತೆ ಇದೆ. ಶಿವಮೊಗ್ಗ – ಸವಳಂಗ ನಡುವೆ 1 ಟೋಲ್‌ ಗೇಟ್‌ ಸ್ಥಾಪಿಸಲಾಗಿದೆ. ಶಿಕಾರಿಪುರ– ಶಿರಾಳಕೊಪ್ಪ ನಡುವೆ ಇನ್ನೊಂದು ಟೋಲ್‌ ನಿರ್ಮಿಸಲಾಗಿದೆ. ಆದರೆ, ಈ ಭಾಗದ ರಸ್ತೆಯಲ್ಲಿ ಶಿಕಾರಿಪುರ, ಸೊರಬ ತಾಲೂಕಿನ ನೂರಾರು ಹಳ್ಳಿಯ ರೈತರು ಒಂದಿಲ್ಲೊಂದು ಕಾರಣಕ್ಕೆ ಶಿಕಾರಿಪುರ ಹಾಗೂ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ಇನ್ನು ಮುಂದೆ ಇವರೆಲ್ಲರು ಟೋಲ್‌ ಕಟ್ಟಿ ಮುಂದೆ ಸಾಗಬೇಕಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಜ್ಯ ಹೆದ್ದಾರಿಗಳಲ್ಲಿ ಟೋಲ್‌ ಗೇಟ್‌ ವಿರುದ್ಧ ಜನರ ಆಕ್ರೋಶದ ನಡುವೆಯೂ ಶಿವಮೊಗ್ಗದಲ್ಲಿ ರಾಜ್ಯ ಸರ್ಕಾರ ಹೊಸ ಟೋಲ್‌ ನಿರ್ಮಾಣಕ್ಕೆ ಮುಂದಾಗಿದೆ.

ಜಿಲ್ಲೆಯಲ್ಲಿ ಮೊದಲ ಬಾರಿಗೆ 2 ಟೋಲ್‌ ಗೇಟ್‌ ಸ್ಥಾಪಿಸಲಾಗಿದ್ದು, ಇನ್ಮುಂದೆ ಟೋಲ್‌ ಪಾವತಿಸಿ ಜನರು ಸಂಚರಿಸಬೇಕಾದ ಅನಿವಾರ್ಯತೆ ಇದೆ. ಶಿವಮೊಗ್ಗ – ಸವಳಂಗ ನಡುವೆ 1 ಟೋಲ್‌ ಗೇಟ್‌ ಸ್ಥಾಪಿಸಲಾಗಿದೆ. ಶಿಕಾರಿಪುರ– ಶಿರಾಳಕೊಪ್ಪ ನಡುವೆ ಇನ್ನೊಂದು ಟೋಲ್‌ ನಿರ್ಮಿಸಲಾಗಿದೆ. ಆದರೆ, ಈ ಭಾಗದ ರಸ್ತೆಯಲ್ಲಿ ಶಿಕಾರಿಪುರ, ಸೊರಬ ತಾಲೂಕಿನ ನೂರಾರು ಹಳ್ಳಿಯ ರೈತರು ಒಂದಿಲ್ಲೊಂದು ಕಾರಣಕ್ಕೆ ಶಿಕಾರಿಪುರ ಹಾಗೂ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ಇನ್ನು ಮುಂದೆ ಇವರೆಲ್ಲರು ಟೋಲ್‌ ಕಟ್ಟಿ ಮುಂದೆ ಸಾಗಬೇಕಿದೆ.

ರಾಜ್ಯ ಹೆದ್ದಾರಿಯನ್ನು ಹೊಸದಾಗಿ ನಿರ್ಮಿಸದೇ ಈ ಹಿಂದಿನಿಂದಲೂ ಇದ್ದ ರಸ್ತೆಗೆ ಟೋಲ್‌ ಕಟ್ಟಿಸಿಕೊಳ್ಳುತ್ತಿರುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಹೆದ್ದಾರಿಗೆ ಟೋಲ್‌ ಹಾಕಲಾಗಿದೆ. ಎರಡು ಪಥದ ರಸ್ತೆ ಇದು. ಇದನ್ನೇನು ಹೊಸದಾಗಿ ನಿರ್ಮಿಸಿಲ್ಲ. ಈ ಮೊದಲಿನಿಂದಲು ಇರುವ ರಸ್ತೆಗೆ ಟೋಲ್‌ ಕಟ್ಟಿಸಿಕೊಳ್ಳುವ ಸರ್ಕಾರದ ನಿರ್ಧಾರ ಸರಿಯಾದುದ್ದಲ್ಲ ಎಂಬುದು ಜನರ ವಾದ.

ಗಾರ್ಮೆಂಟ್‌ಗೆ ತೆರಳುವ ಕೆಲಸಗಾರರನ್ನು ಹಾಗೂ ವಿದ್ಯಾರ್ಥಿಗಳನ್ನು ಹೊತ್ತು ಸಾಗುವ ಹಲವು ವಾಹನಗಳು ಟೋಲ್‌ ಕಟ್ಟಿಬೇಕಿದೆ. ಇದರಿಂದ ಸಂಚಾರ ವೆಚ್ಚದ ಬರೆ ಜನರ ಮೇಲೆ ಬೀಳಲಿದೆ. ಇಂದು ವಿದ್ಯಾರ್ಥಿಗಳು, ರೈತರು, ಸಾರ್ವಜನಿಕರು ತೀವ್ರ ಅನುಭವಿಸಲಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಯಾವುದೇ ಟೋಲ್‌ ಸಂಗ್ರಹಕ್ಕೆ ಸರ್ಕಾರ ಅವಕಾಶ ಕೊಡದೇ, ಈಗ ನಿರ್ಮಿಸಿರುವ ಟೋಲ್‌ಗಳನ್ನು ರದ್ದುಪಡಿಸಬೇಕು ಎಂಬುದು ಜನರ ಒತ್ತಾಯ.

ಗೂಡ್ಸ್ ಆಟೋ ಚಾಲಕ ಜಬೀವುಲ್ಲಾ ಎಂಬುವರು ಈ ಕುರಿತು ಪ್ರತಿಕ್ರಿಯಿಸಿದ್ದು, ಟೋಲ್‌ಗಳ ಮೇಲೆ ಟೋಲ್ ಮಾಡಲಾಗುತ್ತಿದೆ‌. ಶಿವಮೊಗ್ಗದಿಂದ 18 ಕಿ.ಮೀ.ಗೆ 1 ಟೋಲ್ ನಿರ್ಮಿಸಲಾಗಿದೆ. ನಮಗೆ ಸಿಗುವ ಬಾಡಿಗೆಯಲ್ಲಿ ಡಿಸೇಲ್, ಆಟೋ ನಿರ್ವಹಣೆ ಅಂತಾ ಹಲವು ಖರ್ಚು ಇದೆ. ಇದರ ಮಧ್ಯೆ ಕುಟುಂಬ ನಿರ್ಹವಣೆಗೆ ಅಲ್ಪಸ್ವಲ್ಪ ದುಡ್ಡು ಉಳಿಸುವುದೆ ಕಷ್ಟ. ಅಂತಹ ಪರಿಸ್ಥಿತಿಯಲ್ಲಿ ಟೋಲ್‌ಗಳಿಗೆ ಹಣ ಸುರಿದರೆ ನಮ್ಮ ಕುಟುಂಬದ ಕಥೆ ಏನು ಎಂದು ಪ್ರಶ್ನಿಸಿದ್ದಾರೆ.

ತೀವ್ರ ವಿರೋಧದ ನಡುವೆ ಜಿಲ್ಲೆಯಲ್ಲಿ ಎರಡು ಟೋಲ್‌ ಸ್ಥಾಪನೆಯಾಗಿವೆ. ರಸ್ತೆ ನಿರ್ಮಾಣಕ್ಕೆ ಪಡೆದ ಸಾಲ ತೀರಿಸಲು ಸುಂಕ ಸಂಗ್ರಹಿಸಲಾಗುತ್ತಿದೆ ಎಂಬ ಆರೋಪವಿದೆ. ಕೋವಿಡ್‌ ಹಾವಳಿ ಕಾರಣಕ್ಕೆ ಟೋಲ್‌ ಗೇಟ್‌ ಸ್ಥಾಪನೆ ವಿಳಂಬವಾಗಿತ್ತು. ಈಗ ಜಿಲ್ಲೆಯಲ್ಲಿ ಮೊದಲ ಬಾರಿ ಟೋಲ್‌ ಗೇಟ್‌ಗಳನ್ನು ಸ್ಥಾಪಿಸಲಾಗಿದೆ.

ರಸ್ತೆ ನಿರ್ವಹಣೆಗೆ ಟೋಲ್‌ ನಿರ್ಮಿಸಬೇಕು ಎಂಬ ಪ್ರಸ್ತಾವನೆಗೆ ರಾಜ್ಯ ಸರ್ಕಾರ 2017ರಲ್ಲಿ ಒಪ್ಪಿಗೆ ನೀಡಿತ್ತು. ರಾಜ್ಯದ ಒಟ್ಟು 19 ರಸ್ತೆಯಲ್ಲಿ 43 ಕಡೆ ಟೋಲ್‌ ನಿರ್ಮಿಸಲು ಸರ್ಕಾರ ಅಸ್ತು ಎಂದಿತ್ತು. ಅಂತೆಯೇ ಶಿವಮೊಗ್ಗ – ಹಾನಗಲ್‌ ರಾಜ್ಯ ಹೆದ್ದಾರಿ- 57ರಲ್ಲಿ ಕೆಶಿಪ್‌ ವತಿಯಿಂದ ಎರಡು ಕಡೆ ಟೋಲ್‌ ನಿರ್ಮಿಸಲಾಗಿದೆ. ಹಾಗಾಗಿ, ಇನ್ಮುಂದೆ ಶಿವಮೊಗ್ಗ – ಸವಳಂಗ – ಶಿಕಾರಿಪುರ ಮಾರ್ಗದಲ್ಲಿ ಸಂಚರಿಸುವವರು, ಶಿರಾಳಕೊಪ್ಪ– ಶಿಕಾರಿಪುರ ನಡುವಿನ ಸಂಚರಿಸುವ ವಾಹನ ಸವಾರರು ಟೋಲ್‌ ಪಾವತಿಸಿ ಮುಂದೆ ಹೋಗುವುದು ಅನಿವಾರ್ಯವಾಗಿದೆ.

ಟೋಲ್‌ಗೇಟ್‌ ವ್ಯವಸ್ಥೆಗಳು ಹೇಗಿವೆ?:

ಶಿವಮೊಗ್ಗ– ಹಾನಗಲ್‌ ರಾಜ್ಯ ಹೆದ್ದಾರಿಯ ಸವಳಂಗ ಮತ್ತು ಸೀಗೆಕಣಿವೆಯಲ್ಲಿ ಟೋಲ್‌ಗಳನ್ನು ಸ್ಥಾಪಿಸಲಾಗಿದೆ. ಟೋಲ್‌ನಲ್ಲಿ ನಾಲ್ಕು ಪ್ರತ್ಯೇಕ ಗೇಟ್‌ಗಳನ್ನು ನಿರ್ಮಿಸಲಾಗಿದೆ. ಪ್ರತಿ ದಿಕ್ಕಿಗೂ ತಲಾ 2 ಗೇಟ್‌ಗಳು ಇರಲಿವೆ. ಟೋಲ್‌ ಹಣ ಸಂಗ್ರಹಿಸುವವರಿಗೆ ಚಿಕ್ಕ ಕ್ಯಾಬಿನ್‌ ನಿರ್ಮಿಸಲಾಗಿದೆ. ಟೋಲ್‌ ಪ್ಲಾಜಾದಲ್ಲಿ ಬೆಳಕಿಗೆ ಲೈಟ್‌ಗಳು, ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪಕ್ಕದಲ್ಲಿ ಚಿಕ್ಕದಾಗಿ ಕಚೇರಿ ನಿರ್ಮಾಣ ಮಾಡಲಾಗಿದೆ. ಟೋಲ್‌ ಗೇಟ್‌ನಲ್ಲಿ ಮಾತ್ರ ರಸ್ತೆ ಅಗಲ ಮಾಡಲಾಗಿದೆ.

- - -ಬಾಕ್ಸ್‌ ಟಿಕೆಟ್‌ ದರ, ಬಾಡಿಗೆ ಹೆಚ್ಚಳ ಆತಂಕ ಶಿವಮೊಗ್ಗ– ಶಿಕಾರಿಪುರ– ಶಿರಾಳಕೊಪ್ಪ ಮಧ್ಯೆ ಹತ್ತಾರು ಬಸ್ಸುಗಳು ನಿತ್ಯ ಸಂಚರಿಸುತ್ತಿವೆ. ಡಿಸೇಲ್‌ ದರ ಹೆಚ್ಚಳ, ಶಕ್ತಿ ಯೋಜನೆಯ ಪರಿಣಾಮ, ಟ್ಯಾಕ್ಸ್‌, ಬಸ್ಸುಗಳ ನಿರ್ವಹಣೆ ಖರ್ಚು ನಿಭಾಯಿಸಲು ಮಾಲೀಕರು ಹೆಣಗಾಡುತ್ತಿದ್ದಾರೆ. ಶಿವಮೊಗ್ಗ ಹಾನಗಲ್‌ ನಡುವೆ ಸಂಚರಿಸುವ ಬಸ್‌ಗೆ ಅಂದಾಜು ₹120 ಟಿಕೆಟ್‌ ದರ ಇದೆ. ಟೋಲ್‌ ಗೇಟ್‌ ನಿರ್ಮಾಣದ ನಂತರ ಬಸ್‌ ದರ ಹೆಚ್ಚಳ ಸಾಧ್ಯತೆ ಇದೆ. ಇನ್ನು, ಗೂಡ್ಸ್‌ ವಾಹನಗಳು ಕೂಡ ಟೋಲ್‌ ದರ ನಿಭಾಯಿಸಲು ಬಾಡಿಗೆ ಹೆಚ್ಚಳ ಮಾಡಬೇಕಾಗುತ್ತದೆ. ಇದರಿಂದ ಗ್ರಾಹಕರನ್ನು ಕಳೆದುಕೊಳ್ಳುವ ಭೀತಿಯೂ ಎದುರಾಗಿದೆ.

- - - ಕೋಟ್‌

ಶಿವಮೊಗ್ಗ– ಶಿಕಾರಿಪುರ ರಸ್ತೆಗಳಲ್ಲಿ 2 ಕಡೆ ಟೋಲ್‌ಗೇಟ್‌ಗಳು ನಿರ್ಮಿಸಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಟೋಲ್ ಹಾಕಿ ಹಣ ವಸೂಲಿ ಮಾಡಲು ಹೊರಟಿದೆ. ಟೋಲ್ ನೀತಿ ಜಾರಿ ಆಗುತ್ತಿರೋದನ್ನು ನಾವು ವಿರೋಧಿಸುತ್ತೇವೆ

- ಬಿ.ವೈ.ರಾಘವೇಂದ್ರ, ಸಂಸದ

- - - -25ಎಸ್‌ಎಂಜಿಕೆಪಿ02:

ಶಿವಮೊಗ್ಗ – ಸವಳಂಗ ನಡುವೆ ಟೋಲ್‌ ಗೇಟ್‌ ಸ್ಥಾಪಿಸಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ-30,000 ಕೋಟಿ ರು. ವಿತರಣೆಯ ಗುರಿ
ಏಪ್ರಿಲ್‌ನಿಂದ ಆಲ್ಕೋಹಾಲ್‌ ಪ್ರಮಾಣಕ್ಕೆ ತಕ್ಕಂತೆ ಮದ್ಯ ಸುಂಕ