ಟೊಮೊಟೊ ಆಯ್ತು, ಈಗ ಬೆಳ್ಳುಳ್ಳಿ ಕಿಲೋಗೆ ₹ 200!

KannadaprabhaNewsNetwork |  
Published : Oct 09, 2023, 12:46 AM IST
ಫೋಟೊ ಶೀರ್ಷಿಕೆ: 8ಆರ್‌ಎನ್‌ಆರ್4ರಾಣಿಬೆನ್ನೂರು ತಾಲೂಕಿನ ಮಣಕೂರ ಗ್ರಾಮದ ಬಳಿ ಬೆಳ್ಳುಳ್ಳಿ ಬೆಳೆಯನ್ನು ಕೀಳುತ್ತಿರುವ ರೈತರು.  | Kannada Prabha

ಸಾರಾಂಶ

ಎರಡ್ಮೂರು ತಿಂಗಳ ಹಿಂದೆ ಟೊಮೆಟೊ ಬೆಲೆ ಮುಗಿಲೆತ್ತರಕ್ಕೇರಿ ಗ್ರಾಹಕರಲ್ಲಿ ಆಹಾಕಾರ ಉಂಟು ಮಾಡಿತ್ತು, ಇದೀಗ ಬೆಳ್ಳುಳ್ಳಿ ಸರದಿ. 1 ಕೇಜಿ ಬಳ್ಳೊಳ್ಳಿ ಬರೋಬ್ಬರಿ ₹ 200!

ಬಸವರಾಜ ಸರೂರ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಎರಡ್ಮೂರು ತಿಂಗಳ ಹಿಂದೆ ಟೊಮೆಟೊ ಬೆಲೆ ಮುಗಿಲೆತ್ತರಕ್ಕೇರಿ ಗ್ರಾಹಕರಲ್ಲಿ ಆಹಾಕಾರ ಉಂಟು ಮಾಡಿತ್ತು, ಇದೀಗ ಬೆಳ್ಳುಳ್ಳಿ ಸರದಿ. 1 ಕೇಜಿ ಬಳ್ಳೊಳ್ಳಿ ದರ ಬರೋಬ್ಬರಿ ₹ 200!

ದಪ್ಪ ಬೆಳ್ಳುಳ್ಳಿ ಒಂದು ಕ್ವಿಂಟಲ್‌ಗೆ ₹18 ಸಾವಿರಗಳಿಂದ 20 ಸಾವಿರದ ವರೆಗೆ ಮಾರಾಟವಾಗುತ್ತಿದೆ. ಸಣ್ಣ ಬೆಳ್ಳುಳ್ಳಿಗೆ ₹15 ಸಾವಿರ ವರೆಗೆ ಬೆಲೆಯಿದೆ. ಇತ್ತೀಚೆಗೆ ದಪ್ಪ ಬೆಳ್ಳುಳ್ಳಿ ₹10 ಸಾವಿರದಿಂದ 12 ಸಾವಿರ ವರೆಗೆ ಮಾರಾಟವಾಗಿತ್ತು. ಆದರೀಗ ಬೆಳ್ಳುಳ್ಳಿ ಖರೀದಿಸಲು ದೂರದ ಬಳ್ಳಾರಿ, ಶಿವಮೊಗ್ಗ, ಕೊಪ್ಪಳ, ವಿಜಯಪುರ, ಬೆಳಗಾವಿ, ಬಾಗಲಕೋಟೆ, ದಾವಣಗೆರೆ ಜಿಲ್ಲೆಗಳಿಂದ ವ್ಯಾಪಾರಸ್ಥರು ಬರುತ್ತಿರುವ ಕಾರಣ ಕ್ವಿಂಟಲ್‌ಗೆ ₹10 ಸಾವಿರ ಹೆಚ್ಚಳವಾಗಿದೆ.

ಹಿಂದೆ ಮಾರುಕಟ್ಟೆಯಲ್ಲಿ ಕೇಜಿಗಟ್ಟಲೇ ಬೆಳ್ಳುಳ್ಳಿ ಖರೀದಿಸುತ್ತಿದ್ದ ಗ್ರಾಹಕರು ಇದೀಗ 100, 200 ಗ್ರಾಂ ಎನ್ನುತ್ತಿದ್ದಾರೆ. ಇದ್ದಕ್ಕಿದ್ದಂತೆ ದ್ವೀಗುಣ ಆಗಿರುವ ಬಳ್ಳೊಳ್ಳಿ ದರ ಕಂಡು ಗ್ರಾಹಕರು ಹೌಹಾರಿದ್ದಾರೆ.

ರೈತರ ಮೊಗದಲ್ಲಿ ನಗು:

ರಾಣಿಬೆನ್ನೂರು, ಹಿರೇಕೆರೂರು, ಬ್ಯಾಡಗಿ ಹಾಗೂ ಗುತ್ತಲ ಭಾಗದ ರೈತರು ಅಲ್ಪಸ್ವಲ್ಪವಾಗಿ ಬೆಳೆದ ಬೆಳ್ಳುಳ್ಳಿ ಬೆಳೆಯನ್ನು ರಕ್ಷಿಸಿ ಗೋದಾಮು, ಮನೆಗಳಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಆ ರೈತರು ಸದ್ಯ ಮಾರುಕಟ್ಟೆಗೆ ತಮ್ಮ ಉತ್ಪನ್ನಗಳನ್ನು ತರುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿಗೆ ಉತ್ತಮ ದರ ಲಭಿಸುತ್ತಿದೆ. ಮಾರುಕಟ್ಟೆಯಲ್ಲಿ ಗಾತ್ರದ ಆಧಾರದ ಮೇಲೆ ಬೆಲೆ ದರ ನಿಗದಿಯಾಗಿದೆ.

ಮಳೆ ಕೊರತೆ, ಬೆಳೆ ಕುಸಿತ:

ಬೆಳ್ಳುಳ್ಳಿ ಮಳೆಯಾಶ್ರಿತ ಬೆಳೆ. ಮಳೆಯನ್ನು ನಂಬಿ ಬಿತ್ತನೆ ಮಾಡುತ್ತಾರೆ. ಈ ಬಾರಿ ಮಳೆ ಕೊರತೆಯಿಂದ ಬಹುತೇಕ ರೈತರ ಬೆಳ್ಳುಳ್ಳಿ ಸರಿಯಾಗಿ ಬೆಳೆದಿಲ್ಲ. ನೀರಾವರಿ ಹಾಗೂ ಟ್ರ್ಯಾಕ್ಟರ್ ಮೂಲಕ ನೀರು ಹಾಯಿಸಿ ಬೆಳೆಸಿದ ಬೆಳ್ಳುಳ್ಳಿ ಅಲ್ಪಸ್ವಲ್ಪ ರೈತರ ಕೈಗೆ ದೊರೆತಿದೆ. ಅವರು ಅದನ್ನು ಮಾರುಕಟ್ಟೆಗೆ ತರಲು ಶುರು ಮಾಡಿದ್ದಾರೆ. ಅಲ್ಲದೆ ಮಳೆ ಕೊರತೆಯಿಂದ ಈ ಬಾರಿ ಬೆಳ್ಳುಳ್ಳಿಗೆ ಬೇಡಿಕೆ ಹೆಚ್ಚಾಗಿದೆ. ಅಕ್ಕಪಕ್ಕದ ಹಾಗೂ ಬೇರೆ ಜಿಲ್ಲೆಯಲ್ಲೂ ಮಳೆ ಕೊರತೆ ಪರಿಣಾಮ ಅಲ್ಲಿಯ ರೈತರ ಬಳಿಯೂ ಬೆಳ್ಳುಳ್ಳಿ ಸಿಗುತ್ತಿಲ್ಲ.

ಬೆಳೆಯಿಂದ ವಿಮುಖ:

ತಾಲೂಕಿನಲ್ಲಿ ಕಳೆದ ವರ್ಷ ಸುಮಾರು 600 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದ ಬೆಳ್ಳುಳ್ಳಿಯ ಕ್ಷೇತ್ರ ಈ ಬಾರಿ 300 ಹೆಕ್ಟೇರಿಗೆ ಕುಸಿದಿದೆ.

ಹಲಗೇರಿ, ಇಟಗಿ, ಮಾಗೋಡ, ಯರೇಕುಪ್ಪಿ, ಸುಣಕಲ್ಲ ಬಿದರಿ, ಬೆನಕನಕೊಂಡ, ಮುಷ್ಟೂರ, ಮಣಕೂರ ಗ್ರಾಮಗಳು ಬೆಳ್ಳುಳ್ಳಿ ಬೆಳೆಯುವ ಪ್ರಮುಖ ಪ್ರದೇಶ. ಆದರೆ ಹಲವಾರು ಕಾರಣಗಳಿಂದ ರೈತರು ಈ ಬೆಳೆಯಿಂದ ವಿಮುಖರಾಗುತ್ತಿದ್ದಾರೆ.

ನಮ್ಮ ಭಾಗದಲ್ಲಿ ಬೆಳ್ಳುಳ್ಳಿ ಬೆಳೆಯುವುದು ಕಡಿಮೆಯಾಗಿದೆ. ಈ ವರ್ಷ ಬೆಳೆಗಾಗಿ ಸಾಕಷ್ಟು ಖರ್ಚು ಮಾಡಲಾಗಿದೆ. ಆದರೆ ಮಳೆಯಾಗಲಿಲ್ಲ. ನಾವು ಬೋರ್‌ವೆಲ್ ನೀರು ಹಾಯಿಸಿ ಅಲ್ಪ ಬೆಳೆ ತೆಗೆದಿದ್ದು ಉತ್ತಮ ಬೆಲೆ ಲಭಿಸುತ್ತಿರುವುದು ಸಮಾಧಾನ ತಂದಿದೆ ಎನ್ನುತ್ತಾರೆ ಬೆಳ್ಳುಳ್ಳಿ ಬೆಳೆದ ಮಣಕೂರ ಗ್ರಾಮದ ರೈತ ಗೋವಿಂದಪ್ಪ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

8ನೇ ಸೆಮಿಸ್ಟರ್‌ನಲ್ಲಿ 6 ತಿಂಗಳು ಕಡ್ಡಾಯ ಇಂಟರ್ನ್ ಶಿಪ್
ಕ್ರೀಡೆಯಲ್ಲಿ ಸೋಲು, ಗೆಲುವು ಸಮಾನವಾಗಿ ಸ್ವೀಕರಿಸಿ: ಆರ್ ಟಿಒ ಮಲ್ಲಿಕಾರ್ಜುನ್ ಕಿವಿಮಾತು