ಧಾರವಾಡ:
ಹಿರಿಯ ಕವಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಮೊದಲ ಕವನ ಸಂಕಲನ ನೀನಾ ಪ್ರಕಟವಾಗಿ ಇದೀಗ 60 ವರ್ಷಗಳಾದ ಹಿನ್ನೆಲೆಯಲ್ಲಿ ಅನನ್ಯ ಪ್ರಕಾಶನವು ಡಿ. 25ರಂದು ಬೆಳಗ್ಗೆ 10.30ಕ್ಕೆ ರಂಗಾಯಣ ಸಾಂಸ್ಕೃತಿಕ ಭವನದಲ್ಲಿ ನೀನಾ 60ರ ಸಂಭ್ರಮ ಆಯೋಜಿಸಿದೆ.ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅನನ್ಯ ಪ್ರಕಾಶನದ ಹೇಮಾ ಪಟ್ಟಣಶೆಟ್ಟಿ, ನೀನಾ ಪ್ರಕಟಗೊಂಡಿದ್ದು ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ 24ನೇ ವಯಸ್ಸಿನಲ್ಲಿ. ಆ ತಲೆಮಾರಿಗೆ ಹೊಸ ಮಾರ್ಗ ಹಾಕಿಕೊಟ್ಟ ನೀನಾ ಕೃತಿ ಹೊಸ ನುಡಿಗಟ್ಟು ಹಾಗೂ ವಿಭಿನ್ನ ಸೃಜನಶೀಲ ವಿನ್ಯಾಸವನ್ನು ನೀಡಿದ ಶ್ರೇಯಸ್ಸು ಸಹ ಪಡೆಯುತ್ತದೆ. 60 ವರ್ಷಗಳ ನಂತರ ಇಂದಿಗೂ ಈ ಸಂಕಲನ ತನ್ನ ಅರ್ಥವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತ ಪ್ರಸ್ತುತವಾಗಿದೆ ಎಂದರು.
ಹೊಸ ರೂಪದಲ್ಲಿ ನೀನಾ ಮತ್ತೆ ಪ್ರಕಟಗೊಂಡಿದ್ದು, 1964ರಲ್ಲಿ ಪ್ರಕಟಗೊಂಡಾಗ ಓದಿದ ತಲೆಮಾರಿನವರು, ನಂತರ 1988ರಲ್ಲಿ ಅದರ ಓದಿಗೆ ತೆರೆದುಕೊಂಡವರು ಮತ್ತು ಈಗ ನೀನಾ-60ಕ್ಕೆ ಸ್ಪಂದನೆ ಬರೆಯುವ ಸಂದರ್ಭದಲ್ಲಿ ಓದಿದವರು....ಹೀಗೆ ಮೂರು ವಿಭಿನ್ನ ಕಾಲಘಟ್ಟದ ಓದು ಕೂತೂಹಲಕಾರವಾಗಿವೆ. ಈ ಕೃತಿಯ ಮೂರನೇ ಭಾಗದಲ್ಲಿ ಸಂಕಲಿಸಿದ ವಿಮರ್ಶೆ ಹಾಗೂ ಪತ್ರಗಳು ಕೃತಿಯ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿವೆ. ಖ್ಯಾತನಾಮರ ಪತ್ರಗಳು ಹಾಗೂ ಮೊದಲ ಅವೃತ್ತಿಗೆ ಚಂದ್ರಶೇಖರ ಪಾಟೀಲರು ಬರೆದ ಬ್ಲರ್ಬಗಳನ್ನು ಇಲ್ಲಿ ಸೇರಿಸಿದ್ದೇನೆ ಎಂದರು.ಈ ಕೃತಿಯೊಂದಿಗೆ ಅಂದು ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಹೊಸ ಕವನ ಸಂಕಲನ ಹೊಳೆಗೆ ಹೊಳೆದರ್ಥ, ಲೇಖನಗಳಾದ ಸಖ್ಯದ ಆಖ್ಯಾನ, ನುಡಿ ಸೊಗಡು ಹಾಗೂ ಮುಗಿಯದ ಮಾತು ಕೃತಿಗಳು ಸಹ ಬಿಡುಗಡೆಯಾಗಿಲಿವೆ. ಈ ಪುಸ್ತಕಗಳನ್ನು ಸಾಹಿತಿ ರಘುನಾಥ ಚ.ಹ. ಲೋಕಾರ್ಪಣೆ ಮಾಡಲಿದ್ದು, ದೇವು ಪತ್ತಾರ ಹಾಗೂ ಕಥೆಗಾರ್ತಿ ರೂಪಾ ಜೋಶಿ ಪುಸ್ತಕಗಳ ಕುರಿತು ಮಾತನಾಡುತ್ತಾರೆ ಎಂದು ಹೇಮಾ ಪಟ್ಟಣಶೆಟ್ಟಿ ಮಾಹಿತಿ ನೀಡಿದರು.