ಜನವರಿ 11ರಿಂದ ಭಟ್ಕಳದಲ್ಲಿ ಟ್ರೇಡ್ ಎಕ್ಸ್‌ಪೋ

KannadaprabhaNewsNetwork | Published : Dec 9, 2024 12:48 AM

ಎಕ್ಸ್‌ಪೋದಲ್ಲಿ ಸ್ಟಾಲ್‌ಗಳನ್ನು ಕಾಯ್ದಿರಿಸಲು ನೋಂದಣಿ ಫಾರ್ಮ್ ಮೂಲಕ ರಿಜಿಸ್ಟರ್ ಮಾಡಬಹುದು ಅಥವಾ ನೇರ ಐಎನ್ಎಫ್‌ ಕಚೇರಿಗೆ ಭೇಟಿ ನೀಡಬಹುದು.

ಭಟ್ಕಳ: ಇಂಡಿಯನ್ ನವಾಯತ್ ಫೋರಮ್(ಐಎನ್ ಎಪ್) ವತಿಯಿಂದ ಜ. 11ರಿಂದ 15ರ ವರೆಗೆ ಐದು ದಿನಗಳ ಕಾಲ ಪಟ್ಟಣದ ಐಸ್ ಫ್ಯಾಕ್ಟರಿ ಸನಿಹದ ಮೈದಾನದಲ್ಲಿ ಐಎನ್ಎಫ್‌ ಟ್ರೇಡ್ ಎಕ್ಸಪೋ 2025ನ್ನು ಆಯೋಜಿಸಲಾಗಿದೆ ಎಂದು ಇಂಡಿಯನ್ ನವಾಯತ್ ಫೋರಂ ಅಧ್ಯಕ್ಷ ಅರ್ಷದ್ ಮೊತೆಶ್ಯಾಂ ತಿಳಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಟ್ರೇಡ್‌ ಎಕ್ಸ್‌ಪೋ ವ್ಯಾಪಾರಸ್ಥರು ಮತ್ತು ಉದ್ಯಮಿಗಳಿಗೆ ಬೆಳವಣಿಗೆಯ ಹೊಸ ಮಾರ್ಗಗಳನ್ನು ತೆರೆಯುವ ಉದ್ದೇಶ ಹೊಂದಿದ್ದು, ಸ್ಥಳೀಯ ವ್ಯಾಪಾರಗಳಿಗೆ ಸಬಲೀಕರಣದ ನೂತನ ವೇದಿಕೆ ಒದಗಿಸಿಕೊಡಲಿದೆ. 2022ರಲ್ಲಿ ಜರುಗಿದ ಐಎನ್‌ಎಫ್‌ ಟ್ರೇಡ್ ಎಕ್ಸ್‌ಪೋ ಸ್ಥಳೀಯ ವ್ಯಾಪಾರಿಗಳಿಗೆ ಬಲವರ್ಧನೆಗೆ ಕಾರಣವಾಗಿತ್ತು.

ಅಂದು 180ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಿದ ಈ ಎಕ್ಸ್‌ಪೋ ವ್ಯಾಪಾರ ಕ್ಷೇತ್ರಕ್ಕೆ ಮಹತ್ತರ ಒತ್ತಾಸೆಯಾಗಿತ್ತು. 2025ರ ಈ ಟ್ರೇಡ್ ಎಕ್ಸ್‌ಪೋ ಮತ್ತಷ್ಟು ದೊಡ್ಡದಾಗಿ, ಉತ್ತಮವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಯಲಿದ್ದು, 200ಕ್ಕೂ ಹೆಚ್ಚು ಸ್ಟಾಲ್‌ಗಳು ಹಾಗೂ 20,000ಕ್ಕೂ ಅಧಿಕ ಸಂದರ್ಶಕರನ್ನು ಸೆಳೆಯಲಿದೆ ಎಂದರು.

2025ರ ಎಕ್ಸ್‌ಪೋದಲ್ಲಿ ಕಾರ್ಯಾಗಾರಗಳು ಮತ್ತು ನೆಟ್‌ವರ್ಕಿಂಗ್ ಅವಕಾಶಗಳಾದ ವ್ಯಾಪಾರ ನೋಂದಣಿ ಮಾರ್ಗದರ್ಶನ, ಆಹಾರ ಉದ್ಯಮದ ನಿಯಮಾವಳಿ ಮತ್ತು ಪ್ಯಾಕೇಜಿಂಗ್ ತಂತ್ರಗಳು, ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೇಲೆ ವ್ಯಾಪಾರ ಪ್ರಾರಂಭದ ಸಲಹೆಗಳು, ದಾಸ್ತಾನು ನಿರ್ವಹಣೆ ಮತ್ತು ಬಿಲ್ಲಿಂಗ್ ತಂತ್ರಜ್ಞಾನಗಳು ಒಳಗೊಂಡಿದ್ದು, ಈ ಕಾರ್ಯಾಗಾರಗಳನ್ನು ಚಾರ್ಟರ್ಡ್ ಅಕೌಂಟೆಂಟ್‌ಗಳು ಮತ್ತು ತಜ್ಞರು ನಡೆಸಿಕೊಡಲಿದ್ದು, ವ್ಯಾಪಾರಸ್ಥರು ಇದರ ಸದುಪಯೋಗ ಪಡೆಯಬೇಕು.

ಎಕ್ಸ್‌ಪೋದಲ್ಲಿ ಸ್ಟಾಲ್‌ಗಳನ್ನು ಕಾಯ್ದಿರಿಸಲು ನೋಂದಣಿ ಫಾರ್ಮ್ ಮೂಲಕ ರಿಜಿಸ್ಟರ್ ಮಾಡಬಹುದು ಅಥವಾ ನೇರ ಐಎನ್ಎಫ್‌ ಕಚೇರಿಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ಮೊ. 7022020454, 9353151493 ಸಂಪರ್ಕಿಸಬಹುದು ಎಂದರು.

ಈ ಸಂದರ್ಭದಲ್ಲಿ ಐಎನ್ಎಫ್‌ ಕಾರ್ಯದರ್ಶಿ ಮತ್ತು ಐಎನ್ಎಫ್‌ ಟ್ರೇಡ್ ಎಕ್ಸ್‌ಪೋ 2025ರ ಸಂಚಾಲಕ ಮಾಜ್ ಜುಕಾಕು, ಕಾರ್ಯಕಾರಿ ಸದಸ್ಯರಾದ ಫೈಜಾನ್ ಬರ್ಮಾವರ್, ಅಫ್ತಾಬ್ ಕೋಲಾ, ಇಮ್ತಿಯಾಜ್ ದಾಮ್ಡಾ, ತನ್ವೀರ್ ಮೋಟಿಯಾ, ಖಮರ್‌ ಉಝ್ಝಮಾ ಮೋಟಿಯಾ, ಹ್ಯಾರಿಸ್ ಶಾಬಂದ್ರಿ ಮುಂತಾದವರಿದ್ದರು.

11ರಂದು ಲೋಕಾಯುಕ್ತ ಅಧಿಕಾರಿಗಳ ದೂರು ಸ್ವೀಕಾರ

ಕಾರವಾರ: ಲೋಕಾಯುಕ್ತ ಅಧಿಕಾರಿಗಳ ತಾಲೂಕು ಭೇಟಿ ಕಾರ್ಯಕ್ರಮವು ಡಿ. 11ರಂದು ಬೆಳಗ್ಗೆ 11 ಗಂಟೆಗೆ ಸಿದ್ದಾಪುರ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ನಡೆಯಲಿದೆ.ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಭರ್ತಿ ಮಾಡಿದ ದೂರುಗಳನ್ನು ಸ್ವೀಕಾರ ಮಾಡಿ, ವಿಚಾರಣೆ ನಡೆಸುವರು. ಸರ್ಕಾರಿ ಕಚೇರಿಯಲ್ಲಿ ಸಾರ್ವಜನಿಕ ಕೆಲಸಗಳನ್ನು ನಿರ್ವಹಿಸಲು ಲಂಚಕ್ಕೆ ಬೇಡಿಕೆ ಮತ್ತು ಅರ್ಜಿಗಳ ವಿಲೇವಾರಿ ಮಾಡುವಲ್ಲಿ ಅನಗತ್ಯ ವಿಳಂಬ, ಸರ್ಕಾರಿ ಹಣ ದುರುಪಯೋಗ, ಕರ್ತವ್ಯಲೋಪ, ಕಳಪೆ ಕಾಮಗಾರಿ ಮಾಡುವ ಸರ್ಕಾರಿ ಅಧಿಕಾರಿ ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನಿಗದಿತ ನಮೂನೆ- 1 ಮತ್ತು 2ರಲ್ಲಿ ಭರ್ತಿಮಾಡಿ ನೀಡಬಹುದು.