ಕಾರವಾರ: ಕಾಳಿ ನದಿ ಹೊಸ ಸೇತುವೆ ಮೇಲೆ ಭಾರಿ ವಾಹನಗಳು ಸಂಚರಿಸಬಹುದು ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಪರಿಶೀಲಿಸಿ, ಲಿಖಿತವಾಗಿ ವರದಿ ನೀಡಿದ ಆಧಾರದ ಮೇಲೆ ಭಾರಿ ವಾಹನಗಳ ಸಂಚಾರ ಆರಂಭಗೊಂಡಿದೆ. ಹಳೆಯ ಸೇತುವೆ ಕುಸಿದ ಹಿನ್ನೆಲೆಯಲ್ಲಿ ಆ ಸೇತುವೆಯ ಅವಶೇಷಗಳಿಂದ ಪಕ್ಕದಲ್ಲೇ ಇರುವ ಹೊಸ ಸೇತುವೆಗೆ ಹಾನಿ ಆಗಿರಬಹುದೆ ಎಂಬ ಶಂಕೆ ಹಿನ್ನೆಲೆಯಲ್ಲಿ ಹೊಸ ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರವನ್ನು ಬುಧವಾರ ನಿರ್ಬಂಧಿಸಲಾಗಿತ್ತು.
ಹೆದ್ದಾರಿ ಪ್ರಾಧಿಕಾರದ ತಜ್ಞರು ಸ್ಥಳಕ್ಕೆ ಆಗಮಿಸಿ ಸೇತುವೆಯನ್ನು ಪರಿಶೀಲಿಸಿ ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರ ನಡೆಸಬಹುದು ಎಂದು ವರದಿ ನೀಡಿದ್ದರಿಂದ ಜಿಲ್ಲಾಧಿಕಾರಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡಿದ್ದಾರೆ. ಸಂಚಾರಕ್ಕೆ ಅವಕಾಶ ಇಲ್ಲದೆ ಬುಧವಾರದಿಂದ ಭಾರಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಹೊಸ ಸೇತುವೆ ಮೇಲೆ ಈ ಹಿಂದೆ ಏಕಮುಕ ಸಂಚಾರ ಇತ್ತು. ಈಗ ಒಂದೇ ಸೇತುವೆ ಮೇಲೆ ದ್ವಿಮುಖ ಸಂಚಾರ ಆರಂಭವಾಗಿದೆ. ಎರಡೂ ಕಡೆಯಿಂದ ಒಂದೆ ಸೇತುವೆ ಮೇಲೆ ವಾಹನಗಳು ಸಂಚರಿಸುವುದರಿಂದ ಸೇತುವೆ ಮೇಲೆ ವಾಹನಗಳ ದಟ್ಟಣೆ ಉಂಟಾಗುತ್ತಿದೆ. ಭಾರಿ ವಾಹನಗಳ ಓಡಾಟಕ್ಕೆ ಅವಕಾಶ ಇಲ್ಲದೆ ಇದ್ದುದರಿಂದ ಬುಧವಾರ ಸದಾಶಿವಗಡದಲ್ಲಿ ಇರುವ ಶಾಲಾ- ಕಾಲೇಜುಗಳಿಗೆ ತೆರಳುವ ಶಾಲಾ ವಾಹನಗಳು ಬರದೆ ವಿದ್ಯಾರ್ಥಿಗಳು ಮನೆಯಲ್ಲಿಯೇ ಇರುವಂತಾಯಿತು. ಸದ್ಯಕ್ಕೆ ಹೊಸ ಸೇತುವೆ ಭಾರಿ ವಾಹನಗಳ ಸಂಚಾರಕ್ಕೆ ಸಮರ್ಥವಾಗಿದೆ ಎಂದು ವರದಿ ಬಂದಿದ್ದರೂ ವಾಹನಗಳ ದಟ್ಟಣೆ ಹೆಚ್ಚುತ್ತಿರುವುದರಿಂದ ಇನ್ನೊಂದು ಸೇತುವೆಯನ್ನು ಶೀಘ್ರದಲ್ಲಿ ನಿರ್ಮಿಸಬೇಕೆಂಬ ಆಗ್ರಹ ಕೇಳಿಬರುತ್ತಿದೆ.ವೀಕ್ಷಣೆಗೆ ಜನರ ದಂಡು: ಕಾಳಿ ನದಿಗೆ ನಿರ್ಮಿಸಿದ್ದ ಹಳೆ ಸೇತುವೆ ಕುಸಿದು ಬಿದ್ದಿರುವುದನ್ನು ನೋಡಲು ಗುರುವಾರವೂ ಜನರು ಆಗಮಿಸುತ್ತಿದ್ದರು. ಬೆಳಗ್ಗೆ ನೂರಾರು ಜನರು ಆಗಮಿಸಿ ವೀಕ್ಷಿಸುತ್ತಿದ್ದುದು ಕಂಡುಬಂತು. ಕಾಳಿ ನದಿಯಲ್ಲಿ ನೀರಿನ ಹರಿವು ಹೆಚ್ಚಿರುವುದರಿಂದ ಸೇತುವೆಯ ಅವಶೇಷಗಳನ್ನು ತೆಗೆಯಲು ಸಾಧ್ಯವಾಗಿಲ್ಲ.
ಸಂಚಾರಕ್ಕೆ ಅವಕಾಶ: ಕಾಳಿ ನದಿ ಹೊಸ ಸೇತುವೆ ಮೇಲೆ ಭಾರಿ ವಾಹನಗಳು ಸಂಚರಿಸಬಹುದು ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಲಿಖಿತವಾಗಿ ವರದಿ ನೀಡಿದ ಹಿನ್ನೆಲೆಯಲ್ಲಿ ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ತಿಳಿಸಿದರು.