ಕನ್ನಡಪ್ರಭ ವಾರ್ತೆ ಕುಷ್ಟಗಿ
ಮಾರ್ಚ್ ಮೊದಲ ವಾರದಲ್ಲಿ ಕುಷ್ಟಗಿಗೆ ರೈಲು ಸಂಚಾರ ಆರಂಭವಾಗಲಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ಕಾಮಗಾರಿಯ ಪರಿಶೀಲನೆ ಸಂದರ್ಭದಲ್ಲಿ ಅಧಿಕಾರಿಗಳಿಂದ ಕಾಮಗಾರಿಯ ಕುರಿತು ಸಮಗ್ರವಾದ ಮಾಹಿತಿ ಪಡೆದುಕೊಂಡ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ರೈಲ್ವೆ ಕಾಮಗಾರಿಯು ಈಗಾಗಲೇ ಮುಕ್ತಾಯಗೊಳ್ಳಬೇಕಿತ್ತು. ಕೆಲವು ತಾಂತ್ರಿಕ ಕಾರಣಗಳಿಂದ ಸ್ವಲ್ಪ ತಡವಾಗಿದೆ. ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಫೆಬ್ರುವರಿ ಅಂತ್ಯದಲ್ಲಿ ಎಲ್ಲಾ ಕಾಮಗಾರಿಗಳನ್ನು ಮುಕ್ತಾಯಗೊಳಿಸುವ ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ ಎಲ್ಲಾ ತರಹದ ಪ್ರಯತ್ನ ಮಾಡುವ ಮೂಲಕ ಮಾರ್ಚ್ ಮೊದಲ ವಾರದಲ್ಲಿ ಕುಷ್ಟಗಿಗೆ ರೈಲ್ವೆ ಸಂಚಾರ ಮಾಡಿಸಲಾಗುತ್ತದೆ ಎಂದರು.ಬಾಕಿ ಇರುವ ಕಾಮಗಾರಿಯನ್ನು ಶೀಘ್ರದಲ್ಲಿ ಮಾಡಿಕೊಡುವಂತೆ ಗುತ್ತಿಗೆದಾರರಿಗೆ ಸೂಚನೆ ಕೊಡಬೇಕು ಎಂದು ಎಇಇ ಅಶೋಕಗೆ ತಿಳಿಸಿದರು.
ಅಳಲು:ತಮ್ಮ ಒಂದು 30x40 ಸೈಜಿನ ಪ್ಲಾಟನ್ನು ರೈಲ್ವೆ ಇಲಾಖೆಯವರು ವಶಪಡಿಸಿಕೊಂಡು ಅದರಲ್ಲಿ ಕಾಮಗಾರಿ ಮಾಡುತ್ತಿದ್ದು, ಈ ಪ್ಲಾಟಿನಲ್ಲಿ ಕಾಮಗಾರಿಯ ಮಾಡುವ ಮೊದಲಿಗೆ ನನ್ನ ಗಮನಕ್ಕೆ ತಂದಿಲ್ಲ. ಒಂದು ನೋಟಿಸು ಸಹಿತವೂ ಕೊಟ್ಟಿಲ್ಲ. ಅದಕ್ಕೆ ಸರ್ಕಾರದಿಂದ ಬರಬೇಕಾದ ಪರಿಹಾರವನ್ನು ದೊರಕಿಸಿಕೊಡುವಂತೆ ಸಂಸದರ ಮುಂದೆ ಕಂದಕೂರು ನಿವಾಸಿ ಹಾಲಪ್ಪ ಹೂಗಾರ ಅಳಲು ತೊಡಿಕೊಂಡರು. ಇದಕ್ಕೆ ಉತ್ತರಿಸಿದ ಸಂಸದರು, ಇವರಿಗೆ ಸರಿಯಾದ ನ್ಯಾಯ ಒದಗಿಸಕೊಡುವಂತೆ ಸ್ಥಳದಲ್ಲಿಯೇ ಇದ್ದ ಎಇಇಗೆ ಸೂಚಿಸಿದರು. ಈ ಕುರಿತು ಜಿಲ್ಲಾಧಿಕಾರಿ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.
ಷರೀಫ ನಗರದ ಕಾಲನಿಯ ನಿವಾಸಿಗಳು ರೈಲ್ವೆ ಹಳಿಯ ಪಕ್ಕದಲ್ಲಿರುವ ಶಾಲೆಯ ಬಗ್ಗೆ ವಿಚಾರಿಸಿದಾಗ ಸಂಸದರು, ರೈಲ್ವೆ ಸಂಚಾರವಾಗುವತನಕ ಶಾಲೆಯನ್ನು ಇಲ್ಲಿಯೆ ನಡೆಸಿ ನಂತರ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.ಈ ಸಂದರ್ಭ ದೊಡ್ಡಬಸನಗೌಡ ಬಯ್ಯಾಪೂರ, ಚಂದ್ರಕಾಂತ ನಾಲತವಾಡ ಸೇರಿದಂತೆ ಅನೇಕರು ಇದ್ದರು.