ಶೈಕ್ಷಣಿಕ ಕ್ಷೇತ್ರದಲ್ಲಿ ಪರಿವರ್ತನ ಕಲಿಕಾ ಕೇಂದ್ರ ಮಾದರಿ

KannadaprabhaNewsNetwork |  
Published : May 09, 2026, 02:15 AM IST
ಕಳೆದ ವರ್ಷ ಪ್ರಶಸ್ತಿ  ಪಡೆದ ವಿದ್ಯಾರ್ಥಿಗಳೊಂದಿಗೆ ಶಾಸಕ ಶ್ರೀನಿವಾಸ ಮಾನೆ. (ಸಂಗ್ರಹ ಚಿತ್ರ) ಕಳೆದ ವರ್ಷ ಪ್ರಶಸ್ತಿ  ಪಡೆದ ವಿದ್ಯಾರ್ಥಿಗಳೊಂದಿಗೆ ಶಾಸಕ ಶ್ರೀನಿವಾಸ ಮಾನೆ. (ಸಂಗ್ರಹ ಚಿತ್ರ) | Kannada Prabha

ಸಾರಾಂಶ

ಗ್ರಾಮೀಣ ಮಕ್ಕಳ ಶೈಕ್ಷಣಿಕ ಉನ್ನತಿಗೆ ಸಂಕಲ್ಪಿಸಿ ಶೈಕ್ಷಣಿಕ, ಔದ್ಯೋಗಿಕ ತರಬೇತಿ ಒಳಗೊಂಡು, ಶಾಲಾ ಮಟ್ಟದಿಂದ ವಿಶ್ವವಿದ್ಯಾಲಯದ ವರೆಗಿನ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಗದು ಪ್ರೋತ್ಸಾಹದೊಂದಿಗೆ ಹೃದಯಸ್ಪರ್ಶಿ ಸಮಾರಂಭಕ್ಕೆ ಶಾಸಕ ಶ್ರೀನಿವಾಸ ಮಾನೆ ಅವರ ಮಹಾಪೋಷಕತ್ವದ ಪರಿವರ್ತನ ಕಲಿಕಾ ಕೇಂದ್ರ ಸಾಕ್ಷಿಯಾಗುತ್ತಿದೆ.

ಹಾನಗಲ್ಲ: ಗ್ರಾಮೀಣ ಮಕ್ಕಳ ಶೈಕ್ಷಣಿಕ ಉನ್ನತಿಗೆ ಸಂಕಲ್ಪಿಸಿ ಶೈಕ್ಷಣಿಕ, ಔದ್ಯೋಗಿಕ ತರಬೇತಿ ಒಳಗೊಂಡು, ಶಾಲಾ ಮಟ್ಟದಿಂದ ವಿಶ್ವವಿದ್ಯಾಲಯದ ವರೆಗಿನ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಗದು ಪ್ರೋತ್ಸಾಹದೊಂದಿಗೆ ಹೃದಯಸ್ಪರ್ಶಿ ಸಮಾರಂಭಕ್ಕೆ ಶಾಸಕ ಶ್ರೀನಿವಾಸ ಮಾನೆ ಅವರ ಮಹಾಪೋಷಕತ್ವದ ಪರಿವರ್ತನ ಕಲಿಕಾ ಕೇಂದ್ರ ಸಾಕ್ಷಿಯಾಗುತ್ತಿದೆ.ಸಂಸ್ಥೆ ವಿದ್ಯಾರ್ಥಿಗಳ ಜ್ಞಾನದಾಹಕ್ಕೆ ನೀರೆರೆದು ಪೋಷಿಸುವ ಸಂಕಲ್ಪ ಕೈಗೂಡಿದ್ದು, ಶೈಕ್ಷಣಿಕವಾಗಿ ಬೆಂಬಲಿಸಿ, ಪ್ರೋತ್ಸಾಹಿಸಿ ಭೇಷ್ ಎಂದು ಹುರಿದುಂಬಿಸುವ ಕೆಲಸ ಸದ್ದಿಲ್ಲದೆ ನಡೆದಿದೆ. ೨೦೨೨ರಲ್ಲಿ ಧಾರವಾಡದ ಕೆಸಿಎಸ್ ಅಕಾಡೆಮಿಯಲ್ಲಿ ಹಾನಗಲ್ಲ ತಾಲೂಕಿನ ೭೦ ವಿದ್ಯಾರ್ಥಿಗಳಿಗೆ ಐಎಎಸ್, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಊಟ, ವಸತಿ ಸಹಿತ ಎಲ್ಲ ಅನುಕೂಲ ಕಲ್ಪಿಸಿ, ಪರಿಣತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ದೊರಕಿಸಿದ ಶಾಸಕ ಶ್ರೀನಿವಾಸ ಮಾನೆ, ಹಾನಗಲ್ಲಿನಲ್ಲಿಯೇ ಇಂತಹ ಶಿಕ್ಷಣಕ್ಕೆ ಅವಕಾಶವಾಗಬೇಕು ಎಂಬ ಮಹದಾಸೆ ಹೊಂದಿದ್ದರು. ೨೦೨೩ರ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಹಾನಗಲ್ಲಿನಲ್ಲಿ ಉಚಿತ ತರಬೇತಿ ಕೇಂದ್ರ ಆರಂಭಿಸುವ ಭರವಸೆ ನೀಡಿದ್ದರು.ಚುನಾವಣೆಯಲ್ಲಿ ಜಯಶೀಲರಾದ ಕೆಲದಿನಗಳಲ್ಲಿ ಶ್ರೀನಿವಾಸ ಮಾನೆ ಅವರ ಮಹಾಪೋಷಕತ್ವದ ಬೆಂಬಲದೊಂದಿಗೆ ನ್ಯಾಯವಾದಿ ಸ್ವಾತಿ ಮಾಳಗಿ ಅವರ ಅಧ್ಯಕ್ಷತೆಯಲ್ಲಿ ೨೦೨೩ರಲ್ಲಿ ಹಾನಗಲ್ಲಿನಲ್ಲಿ ಆರಂಭವಾದ ಹ್ಯುಮ್ಯಾನಿಟಿ ಫೌಂಡೇಶನ್‌ನ ಪರಿವರ್ತನ ಕಲಿಕಾ ಕೇಂದ್ರ ಈ ವರೆಗೆ ೫ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಐಎಎಸ್, ಕೆಎಎಸ್, ಸಿಇಟಿ, ನೀಟ್, ಸ್ಪೋಕನ್ ಇಂಗ್ಲಿಷ್, ಎನ್‌ಎಂಎಂಎಸ್, ಎಸ್‌ಎಸ್‌ಎಲ್‌ಸಿ ವರ್ಗ ಪೂರ್ವ ತರಬೇತಿ, ಸೈನ್ಯ ಸೇರುವ ಯುವಕರಿಗೆ ತರಬೇತಿ, ಹದಿಹರೆಯದ ಮಕ್ಕಳಿಗೆ ಮಾರ್ಗದರ್ಶನ ಶಿಬಿರಗಳನ್ನು ನಡೆಸುತ್ತ ಬಂದಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಫಲಿತಾಂಶ ಸುಧಾರಣೆಗಾಗಿ ತಾಲೂಕಿನ ಎಲ್ಲ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢಶಾಲೆಗಳ ಕನ್ನಡ, ಆಂಗ್ಲ ಉರ್ದು ಮಾಧ್ಯಮದ ವಿದ್ಯಾರ್ಥಿಗಳಿಗೆ ೬ ಸಾವಿರಕ್ಕೂ ಅಧಿಕ ಮಾರ್ಕ್ಸ್ ಸ್ಕೋರರ್ ಪುಸ್ತಕಗಳನ್ನು ನೀಡಿ ಅತ್ಯುತ್ತಮ ಪರೀಕ್ಷಾ ಸಿದ್ಧತೆಗೆ ಅನುಕೂಲ ಕಲ್ಪಿಸಿ, ಫಲಿತಾಂಶ ಸುಧಾರಣೆಗೆ ಕೈ ಜೋಡಿಸಲಾಗಿದೆ. ತಾಲೂಕಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕಳೆದ ಮೂರು ವರ್ಷಗಳಿಂದ ಏರಿಕೆ ಕಾಣುತ್ತಿರುವುದು ವಿಶೇಷ. ಉದ್ಯೋಗ ಸಮೃದ್ಧಿ ಕೇಂದ್ರದ ಮೂಲಕ ೧೦ ಸಾವಿರಕ್ಕೂ ಅಧಿಕ ಉದ್ಯೋಗಾಕಾಂಕ್ಷಿ ಯುವಕ ಯುವತಿಯರಿಗೆ ಮಾಹಿತಿ ಮಾರ್ಗದರ್ಶನ ನೀಡಿದ್ದಲ್ಲದೇ, ೩೨೦೦ಕ್ಕೂ ಅಧಿಕ ಉದ್ಯೋಗಾಕಾಂಕ್ಷಿ ಯುವಕ, ಯುವತಿಯರಿಗೆ ವಿವಿಧ ಉದ್ಯಮಗಳಲ್ಲಿ ಉದ್ಯೋಗ ಕಲ್ಪಿಸಿರುವುದು ಹೆಮ್ಮೆಯ ಸಂಗತಿ. ಮೇ ೯ರಂದು ಇಲ್ಲಿನ ಪಿಎಂಶ್ರೀ ಶಾಸಕರ ಮಾದರಿ ಶಾಲೆಯ ಮೈದಾನದಲ್ಲಿ ತಾಲೂಕಿನ ಕಳೆದ ಶೈಕ್ಷಣಿಕ ವರ್ಷದ ಫಲಿತಾಂಶವನ್ನಾಧರಿಸಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಎನ್‌ಎಂಎಂಎಸ್, ಬಿಇಡಿ, ಸ್ನಾತಕೋತ್ತರ ಶಿಕ್ಷಣದಲ್ಲಿ ಅತ್ಯುತ್ತಮ ಸಾಧನೆ ತೋರಿದ ೩೭೫ ವಿದ್ಯಾರ್ಥಿಗಳನ್ನು ಗೌರವಿಸುವ ೩ನೇ ವರ್ಷದ ಸಾಧನೆ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದೆ. ಸನ್ಮಾನ, ಪ್ರಶಸ್ತಿ ಫಲಕ, ಪುಸ್ತಕ ಕೊಡುಗೆ, ಒಟ್ಟು ₹೫ ಲಕ್ಷಕ್ಕೂ ಅಧಿಕ ನಗದು ಬಹುಮಾನವೂ ಸೇರಿ ವಿದ್ಯಾರ್ಥಿಗಳನ್ನು ಹುರಿದುಂಬಿಸುವ ಕಾರ್ಯ ಆಗಲಿದೆ.

ಗ್ರಾಮೀಣ ಮಕ್ಕಳಲ್ಲಿ ಪ್ರತಿಭಾನ್ವಿತ ಶೈಕ್ಷಣಿಕ ಆಸಕ್ತಿ ಅಭಿಮಾನ ಪಡುವಂತಹದ್ದಾಗಿದೆ. ಇದಕ್ಕೆ ನೀರೆರೆಯಬೇಕಷ್ಟೇ. ನಮ್ಮ ಹಾನಗಲ್ಲಿನ ವಿದ್ಯಾರ್ಥಿಗಳು ಎಲ್ಲ ಪರೀಕ್ಷೆಗಳಲ್ಲಿ ಯಶಕ್ಕೆ ನಮ್ಮಿಂದಲೂ ಪ್ರಾಮಾಣಿಕ ಯತ್ನ ನಡೆದೇ ಇದೆ. ಪರೀಕ್ಷೆ ಯುದ್ಧವಾಗುವುದು ಬೇಡ, ವಿದ್ಯೆ ಸಂಪಾದನೆ ಹಬ್ಬವಾಗಬೇಕು. ಅದಕ್ಕೆ ಪಾಲಕ ಶಿಕ್ಷಕ ವಿದ್ಯಾರ್ಥಿ ಯತ್ನದ ಜತೆಗೆ ಸಾಮಾಜಿಕ ಸಂಘಟನೆಗಳು ಕೈಜೋಡಿಸಬೇಕು. ಮಕ್ಕಳನ್ನು ಪ್ರೋತ್ಸಾಹಿಸಿ ಹುರಿದುಂಬಿಸಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೆಡ್ ಕ್ರಾಸ್ ಮಾನವೀಯ ಸೇವೆಯ ಪ್ರತೀಕ
ಮುರುಡೇಶ್ವರದಲ್ಲಿ ಕಾರು ಅಪಘಾತ: ಒಬ್ಬ ಸಾವು, ಮೂವರಿಗೆ ಗಾಯ