ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕಳೆದ 2019ರ ಕೊವಿಡ್ ವೇಳೆ ಗ್ರಾಮದ ಮುಖಾಂತರ ಸಂಚರಿಸುವ ಬಸ್ ವ್ಯವಸ್ಥೆ ಸ್ಥಗಿತಗೊಂಡಿತ್ತು. 5 ವರ್ಷಗಳ ನಂತರ ಮತ್ತೆ ಪ್ರಾರಂಭವಾಗಿರುವುದರಿಂದ ಈ ಮಾರ್ಗಗಳ ಪ್ರಯಾಣಿಕರು ಹಾಗೂ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.
ಶ್ರೀರಂಗಪಟ್ಟಣ ಬಸ್ ನಿಲ್ದಾಣದಿಂದ ಪ್ರತಿ ನಿತ್ಯ ರಾತ್ರಿ 8.30ಕ್ಕೆ ಹೊರಡುವ ಬಸ್ ಕಿರಂಗೂರು, ಗಣಪತಿ ದೇವಸ್ಥಾನದ ಅಡ್ಡರಸ್ತೆ, ಕೂಡಲಕುಪ್ಪೆ, ಹನುಮಂತನಗರ ಗೇಟ್, ಬಲ್ಲೇನಹಳ್ಳಿ, ಚಂದ್ರಗಿರಿಕೊಪ್ಪಲು, ಸಬ್ಬನಕುಪ್ಪೆ, ಮಲ್ಲೇಗೌಡನಕೊಪ್ಪಲು ಗ್ರಾಮಗಳ ಮೂಲಕ ಹಾದುಹೋಗಿ ನಂತರ ಚಿನ್ನೇನಹಳ್ಳಿ ಗ್ರಾಮದಲ್ಲಿ ರಾತ್ರಿ ವೇಳೆ ತಂಗಲಿದೆ. ನಂತರ ಮಾರನೇ ದಿನ ಬೆಳಗ್ಗೆ 6:15ಕ್ಕೆ ಚಿನ್ನೇನಹಳ್ಳಿ ಗ್ರಾಮದಿಂದ ಅದೇ ಮಾರ್ಗವಾಗಿ ಶ್ರೀರಂಗಪಟ್ಟಣ ಬಸ್ ನಿಲ್ದಾಣ ತಲುಪಲಿದೆ.5 ವರ್ಷಗಳ ಬಳಿಕ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಿದ್ದರಿಂದ ಬಲ್ಲೇನಹಳ್ಳಿಯಲ್ಲಿ ಪ್ರಯಾಣಿಕರು ಹಾಗೂ ಗ್ರಾಮಸ್ಥರು ಬಸ್ಗೆ ಪೂಜೆ ಸಲ್ಲಿಸಿ, ಬಸ್ ಚಾಲಕ ಮತ್ತು ನಿರ್ವಾಹಕನನ್ನು ಸನ್ಮಾನಿಸಿದರು. ನಂತರ ನೆರೆದಿದ್ದವರಿಗೆ ಸಿಹಿ ಹಂಚಿ ಸಂಭ್ರಮಿಸಿದರು.
6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ಮಂಡ್ಯ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕೆ.ಆರ್.ಪೇಟೆ ತಾಲೂಕಿನ ಆದಿಹಳ್ಳಿಯ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ ಮತ್ತು ಶ್ರೀರಂಗಪಟ್ಟಣದ ಸರ್ಕಾರಿ ಮುಸ್ಲಿಂ ವಸತಿ ಶಾಲೆಗಳಲ್ಲಿ 2025-26ನೇ ಶೈಕ್ಷಣಿಕ ಸಾಲಿನಲ್ಲಿ 6ನೇ ತರಗತಿ ಪ್ರವೇಶಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗಗಳ ಅರ್ಹ ವಿದ್ಯಾರ್ಥಿಗಳು ಆನ್ಲೈನ್ ಪೋರ್ಟಲ್ https://sevasindhuservices.karnataka.gov.in ಮೂಲಕ ಮಾರ್ಚ್ 10 ರೊಳಗೆ ಅರ್ಜಿ ಸಲ್ಲಿಸಬಹುದು. ಏಪ್ರಿಲ್ 13 ರಂದು ಪ್ರವೇಶ ಪರೀಕ್ಷೆ ನಡೆಯುವ ತಾತ್ಕಾಲಿಕ ದಿನವಾಗಿದೆ. ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಮೇ 10 ರಂದು ಪ್ರಕಟಿಸಲಾಗುವುದು, ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಸಹಾಯವಾಣಿ ದೂ.ಸಂ. 8277799990/080-22535902/08232-29232-297240 ಅನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.