ಕನ್ನಡಪ್ರಭ ವಾರ್ತೆ,ರಬಕವಿ-ಬನಹಟ್ಟಿ
ಶುಕ್ರವಾರ ತಾಲೂಕಿನ ನಾವಲಗಿ ಗ್ರಾಮದ ಹತ್ತಿರ ಇರುವ ಕಾಲುವೆಗೆ ನೀರು ಹರಿಯುತ್ತಿರುವುದನ್ನು ವೀಕ್ಷಣೆ ಮಾಡಿ ಮಾತನಾಡಿ, ವೆಂಕಟೇಶ್ವರ ಏತ ನೀರಾವರಿ ಯೋಜನೆ ಹಾಗೂ ಕುಲಹಳ್ಳಿ ಹುನ್ನೂರು ಏತ ನೀರಾವರಿ ಯೋಜನೆಗಳು ಆರು ತಿಂಗಳ ಹಿಂದೆಯೇ ಮುಕ್ತಾಯಗೊಂಡಿದ್ದವು. ಕೆಲವು ಕಾರಣಗಳಿಂದ ವಿಳಂಬವಾಗಿದ್ದವು. ಕುಲಹಳ್ಳಿ ಹನ್ನೂರು ಏತ ನೀರಾವರಿ ಯೋಜನೆಯಿಂದಾಗಿ ರಬಕವಿ ಬನಹಟ್ಟಿ, ಜಮಖಂಡಿ ಹಾಗೂ ಮುಧೋಳದ 14 ಹಳ್ಳಿಗಳ ನೂರಾರು ಜನ ರೈತರ ಸಾವಿರಾರು ಎಕರೆ ಭೂ ಪ್ರದೇಶಕ್ಕೆ ಅನುಕೂಲವಾಗಲಿದೆ. ರೈತರ ಹಿತದೃಷ್ಟಿಯಿಂದ ಮತ್ತು ಈ ಭಾಗದಲ್ಲಿ ಬೆಳೆಗಳು ಒಣಗುತ್ತಿರುವುದರಿಂದ ನಾಲ್ಕಾರು ದಿನಗಳ ಕಾಲ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಮತ್ತು ಎಂಜಿನಿಯರ್ಗಳಿಗೆ ತಿಳಿಸಲಾಗಿದೆ.
ಕುಲಹಳ್ಳಿ ಹುನ್ನೂರು ಏತ ನೀರಾವರಿ ಯೋಜನೆಯ ಪಂಪಹೌಸ್ ನಲ್ಲಿ ಮೋಟರ್ ದುರಸ್ತಿ ಇರುವುದರಿಂದ ವಿಳಂಬವಾಗಿದೆ. ಕೇವಲ ನಾಲ್ಕೈದು ದಿನಗಳಲ್ಲಿ ಅದಕ್ಕೂ ಕೂಡ ಪ್ರಾಯೋಗಿಕವಾಗಿ ಚಾಲನೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಇಲಾಖೆಯ ಸಚಿವರನ್ನು, ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಅಧಿಕೃತ ಚಾಲನೆಗೆ ದಿನಾಂಕ ನಿರ್ಧರಿಸಲಾಗುವುದು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.ಎರಡು ಯೋಜನೆಗಳನ್ನು ಆರಂಭಿಸುವಂತೆ ಇಲಾಖೆಯ ಅಧಿಕಾರಗಳಿಗೆ ಸಾಕಷ್ಟು ಬಾರಿ ತಿಳಿಸಲಾಗಿತ್ತು. ಸಭೆಗಳನ್ನು ಕೂಡ ಮಾಡಲಾಗಿತ್ತು. ಆರು ತಿಂಗಳ ಹಿಂದೆಯೇ ನೀರು ಹರಿಸುವಂತೆ ಒತ್ತಾಯ ಮಾಡಲಾಗಿತ್ತು. ಬರಗಾಲ ಇರುವುದರಿಂದ ರೈತರ ಜಮೀನುಗಳಿಗೆ, ಕೆರೆಗಳನ್ನು ತುಂಬಿಸಿಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ ಎಂದು ಹೇಳಿದರು.
- ಗುರು ಮರಡಿಮ ನಾವಲಗಿ ಗ್ರಾಮದ ರೈತ