ಗೋಕರ್ಣ: ಸಂಸ್ಕಾರಯುತ ಶಿಕ್ಷಣ ಮೂಲಕ ಬುಡಕಟ್ಟು ಜನಾಂಗದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯವನ್ನು ಕಳೆದ ೭೦ ವರ್ಷದಿಂದ ವನವಾಸಿ ಕಲ್ಯಾಣ ಸಂಸ್ಥೆ ಮಾಡುತ್ತಿದೆ ಎಂದು ವಿಪ ಸದಸ್ಯ, ವನವಾಸಿ ಕಲ್ಯಾಣದ ರಾಜ್ಯ ಕಾರ್ಯದರ್ಶಿ ಶಾಂತಾರಾಮ ಸಿದ್ದಿ ಹೇಳಿದರು.
ವನವಾಸಿಗಳಲ್ಲಿರುವ ಪ್ರತಿಭೆಯನ್ನು ವಿಕಾಸ ಮಾಡಿಕೊಡುವ ಕೆಲಸ ಸಂಸ್ಥೆ ಮಾಡುತ್ತಿದೆ. ಅನೇಕರು ಇಂದು ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿದ್ದಾರೆ ಎಂದು ವಿವರಿಸಿ, ಜಮ್ಮು-ಕಾಶ್ಮೀರದಿಂದ ದೇಶದ ಎಲ್ಲೆಡೆ ವನವಾಸಿ ಕೆಂದ್ರಗಳಿದ್ದು, ಶಿಕ್ಷಣದ ಜೊತೆ ಆರೋಗ್ಯ ಶಿಬಿರ ಮತ್ತಿತರ ಸಾಮಾಜಿಕ ಕಾರ್ಯವನ್ನು ಮಾಡುತ್ತಿದೆ ಎಂದರು.
ಅಶೋಕೆಯ ಪಂತಂಚಲಿ ಪಂಚಕರ್ಮ ಚಿಕಿತ್ಸಾ ಕೇಂದ್ರದ ಡಾ. ಪಂತಂಜಲಿ ಶರ್ಮಾ ಮಾತನಾಡಿ, ಪುಟ್ಟ ಗ್ರಾಮದಲ್ಲಿ ಉಪಯುಕ್ತ ಕಾರ್ಯಕ್ರಮ ಅದ್ಧೂರಿಯಾಗಿ ಸಂಘಟಿಸಿದ ಶ್ರಮಿಕವರ್ಗದರ ಕಾರ್ಯವನ್ನು ಪ್ರಶಂಸಿಸಿ, ಅಂಗನವಾಡಿಯಿಂದ ತಾನು ಶಿಕ್ಷಣ ಪಡೆದ ಈ ಸ್ಥಳದ ಅಭಿವೃದ್ಧಿಯತ್ತ ಸಾಗುತ್ತಿರುವುದು ಹೆಮ್ಮೆ ಎಂದರು.ಉದ್ಯಮಿ ಗೋವಿಂದ ಗೌಡ ಮಾತನಾಡಿ, ಹಿಂದುಳಿದ ಗ್ರಾಮೀಣ ಜನರಿಗೆ ಶಿಕ್ಷಣ, ಆರೋಗ್ಯ ಮತ್ತಿತರ ಸೇವೆ ನೀಡುತ್ತಾ ಬಂದಿರುವ ಸಂಸ್ಥೆಯ ಕಾರ್ಯ ಪ್ರಶಂಸಿ, ತಮ್ಮ ಸಹಕಾರ ನಿರಂತರವಾಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಊರ ಗೌಡರಾದ ಮಾಹಬಲೇಶ್ವರ ಗೌಡ, ಶಾಲಾ ಮುಖ್ಯಾಧ್ಯಾಪಕ ನಾರಾಯಣ ಯು. ನಾಯಕ, ಗ್ರಾಮ ಸೇವಾ ಸಮಿತಿ ಅಧ್ಯಕ್ಷೆ ದುರ್ಗಿ ಗೌಡ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀಧರ ಸಾಲಿಹಕ್ಕಲ್, ಎಸ್ಡಿಎಂಸಿ ಅಧ್ಯಕ್ಷ ಮಾಣೇಶ್ವರ ಗೌಡ, ಅಶೋಕೆ ಯುವಕ ಸಂಘದ ಅಧ್ಯಕ್ಷ ಗಣಪತಿ ಗೌಡ, ಉಪಾಧ್ಯಕ್ಷ ಗೋವಿಂದ ಗೌಡ, ಗ್ರಾಪಂ ಸದಸ್ಯರಾದ ಸಂದೇಶ ಗೌಡ, ಶಾರದಾ ಮೂಡಂಗಿ, ಮೋಹನ ಮೂಡಂಗಿ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳು, ಊರ ನಾಗರಿಕರು ಪಾಲ್ಗೊಂಡಿದ್ದರು. ಇದೇ ವೇಳೆ ವಿಶೇಷ ಸಾಧನೆಗೈದ ಸಾಧಕರಿಸಿಗೆ ಸನ್ಮಾನಿಸಿ ಗೌರವಿಸಲಾಯಿತು. ದರ್ಗಿ ಕೃಷ್ಣ ಗೌಡ ಸ್ವಾಗತಿಸಿದರು. ಮಂಗಲಾ ರಮೇಶ ಗೌಡ ವಂದಿಸಿದರು. ನಾಗರತ್ನ ಬಾಲಚಂದ್ರ ಗೌಡ ಕಾರ್ಯಕ್ರಮ ನಿರ್ವಹಿಸಿದರು.