ಕೊಲ್ಹಾರ ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ನೂತನ ನಿರ್ದೇಶಕರಾಗಿ ನೇಮಕಗೊಂಡ ಪಟ್ಟಣದ ಗಣ್ಯ ವ್ಯಾಪಾರಸ್ಥರು ಹಾಗೂ ಶಿಕ್ಷಣ ಪ್ರೇಮಿಗಳಾದಂತಹ ಶಿವಾನಂದ ಮುರಿಗೆಪ್ಪ ಶೀಲವಂತ ಅವರನ್ನು ಸಂಸ್ಥೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು ಸನ್ಮಾನಿಸಿದರು.
ಕನ್ನಡಪ್ರಭ ವಾರ್ತೆ ಕೊಲ್ಹಾರ
ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ನೂತನ ನಿರ್ದೇಶಕರಾಗಿ ನೇಮಕಗೊಂಡ ಪಟ್ಟಣದ ಗಣ್ಯ ವ್ಯಾಪಾರಸ್ಥರು ಹಾಗೂ ಶಿಕ್ಷಣ ಪ್ರೇಮಿಗಳಾದಂತಹ ಶಿವಾನಂದ ಮುರಿಗೆಪ್ಪ ಶೀಲವಂತ ಅವರನ್ನು ಸಂಸ್ಥೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು ಸನ್ಮಾನಿಸಿದರು.ಪಟ್ಟಣದ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ವತಿಯಿಂದ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ನೂತನ ನಿರ್ದೇಶಕರ ಸ್ವಾಗತ ಕೋರುವ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಬಿ.ಯು.ಗಿಡ್ಡಪ್ಪಗೋಳ, ಕಾರ್ಯದರ್ಶಿ ಎಸ್.ಬಿ.ಪತಂಗಿ ಹಾಗೂ ನಿರ್ದೇಶಕ ಮಂಡಳಿಯ ಸದಸ್ಯರು ನೂತನ ನಿರ್ದೇಶಕ ಶಿವಾನಂದ ಮುರಗೆಪ್ಪ ಶೀಲವಂತರವರನ್ನು ಸಂಸ್ಥೆಗೆ ಬರಮಾಡಿಕೊಂಡು ಸನ್ಮಾನಿಸಿ, ಗೌರವಿಸಿದರು.ಸಂಸ್ಥೆಯ ಕಾರ್ಯದರ್ಶಿ ಎಸ್.ಬಿ.ಪತಂಗಿ ನೂತನ ನಿರ್ದೇಶಕರನ್ನು ಸನ್ಮಾನಿಸಿ ಮಾತನಾಡಿ, ದಿ.ಮುರಿಗೆಪ್ಪ ಶೀಲವಂತರವರು 1962ರಲ್ಲಿ ಹಳೆಕೊಲ್ಹಾರದಲ್ಲಿ ಈ ಭಾಗದ ಪ್ರೌಢಶಾಲೆಯ ಮಕ್ಕಳಿಗಾಗಿ ಶಿಕ್ಷಣವನ್ನು ನೀಡಲು ದಿ.ಎಸ್.ಎಲ್.ಪಾಟೀಲ ಸೇರಿದಂತೆ ಅನೇಕರ ಜೊತೆಗೂಡಿ ಮೊಟ್ಟ ಮೊದಲ ಬಾರಿಗೆ ಸಂಗಮೇಶ್ವರ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಿದರು. ಅವರು ಕಟ್ಟಿದಂತಹ ಶಿಕ್ಷಣ ಸಂಸ್ಥೆ ಇಂದು ಕೊಲ್ಹಾರ ಪಟ್ಟಣದಲ್ಲಿ ಹೆಮ್ಮರವಾಗಿ ಬೆಳೆದಿದೆ. ಇದಕ್ಕೆ ಅವರ ತಂದೆಯವರ ಕೊಡುಗೆ ಬಹಳಷ್ಟಿದೆ. ಹೀಗಾಗಿ ನಾವು ಆಡಳಿತ ಮಂಡಳಿಯವರು ಅವರ ಹಿರಿಯ ಮಗ ಶಿವಾನಂದ ಶೀಲವಂತರವರನ್ನು ಗುರ್ತಿಸಿ ನಮ್ಮ ಸಂಸ್ಥೆಯ ನಿರ್ದೇಶಕರನ್ನಾಗಿ ನೇಮಕ ಮಾಡಿಕೊಂಡಿದ್ದೇವೆ. ಶಿವಾನಂದರವರು ಪಟ್ಟಣದ ಸುಸಂಸ್ಕೃತ ಮನೆತನದವರು ಹಾಗೂ ಗಣ್ಯ ವ್ಯಾಪಾರಸ್ಥರಾಗಿದ್ದಾರೆ. ಇವರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದರ ಮೂಲಕ ಶೈಕ್ಷಣಿಕ ಪ್ರಗತಿಯ ದ್ಯೂತಿಕವಾಗಿದ್ದಾರೆ ಎಂದರು.ಸಂಸ್ಥೆಯ ನಿರ್ದೇಶಕ ಟಿ.ಟಿ.ಹಗೇದಾಳ ಮಾತನಾಡಿ, ಈ ಸಂಸ್ಥೆಯನ್ನು ಹುಟ್ಟುಹಾಕಿ ಇದರ ಮೇಲೆ ಅಪಾರವಾದ ಪ್ರೀತಿಯನ್ನು ಇಟ್ಟುಕೊಂಡ ಕುಟುಂಬದವರು ಈ ಸಂಸ್ಥೆಯ ನಿರ್ದೇಶಕರಾದರೇ ಇನ್ನಷ್ಟು ಈ ಸಂಸ್ಥೆಗೆ ಮೆರಗು ಬರುತ್ತದೆ ಎಂಬ ವಿಚಾರವಿಟ್ಟುಕೊಂಡು ನಮ್ಮ ಸಂಸ್ಥೆಯ ಆಡಳಿತ ಮಂಡಳಿಯವರು ಎಲ್ಲರೂ ಸೇರಿ ನಮ್ಮ ಸಂಸ್ಥೆಯ ನಿರ್ದೇಶಕರಾಗಬೇಕೆಂದು ವಿನಂತಿಸಿದಾಗ ಅವರು ಬಹಳ ಸಂತೋಷದಿಂದ ಒಪ್ಪಿಕೊಂಡು ಇವತ್ತು ನೂತನ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಇವರ ಆಗಮನದಿಂದ ಸಂಸ್ಥೆ ಇನ್ನೂ ಉತ್ತರೋತ್ತರವಾಗಿ ಬೆಳೆಯಲಿ ಎಂದು ಆಶಿಸಿದರು.ಸಂಸ್ಥೆಯ ಅಧ್ಯಕ್ಷ ಬಿ.ಯು.ಗಿಡ್ಡಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕಾರ್ಯದರ್ಶಿ ಎಸ್.ಬಿ.ಪತಂಗಿ, ನಿರ್ದೇಶಕರಾದ ಎನ್.ಕೆ.ಮೇಲಗಿರಿ, ಎಸ್.ಸಿ.ಕುಂಬಾರ, ಸುನಂದಾಬಾಯಿ ಗಿಡ್ಡಪ್ಪಗೋಳ, ಚನಮಲ್ಲಪ್ಪ ಗಿಡ್ಡಪ್ಪಗೋಳ, ಟಿ.ಟಿ.ಹಗೇದಾಳ, ಶಿವಾನಂದ ಶೀಲವಂತ ಉಪಸ್ಥಿತರಿದ್ದರು.ಈ ವೇಳೆ ಸಂಸ್ಥೆಯ ಎಲ್ಲ ವಿಭಾಗದ ಮುಖ್ಯಸ್ಥರು ಹಾಗೂ ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಉಪನ್ಯಾಸಕ ಮಂಜುನಾಥ ಮಟ್ಯಾಳ ಕಾರ್ಯಕ್ರಮ ನಡೆಸಿಕೊಟ್ಟರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.