ಅರಣ್ಯ ಭೂಮಿಯ ಕಗ್ಗಂಟು ಸರಿಪಡಿಸಲು ಪ್ರಯತ್ನಿಸಿ

KannadaprabhaNewsNetwork |  
Published : Dec 31, 2025, 01:45 AM IST
30ಕೆಕೆಡಿಯು1 | Kannada Prabha

ಸಾರಾಂಶ

ಜನವಸತಿ ಪ್ರದೇಶಗಳನ್ನೂ ಅರಣ್ಯ ಭೂಮಿ ಎಂದು ಗುರುತಿಸಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಕಂಡುಕೊಳ್ಳಲು ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಯತ್ನಿಸಬೇಕು ಎಂದು ಶಾಸಕ ಕೆ.ಎಸ್.ಆನಂದ್ ಸೂಚಿಸಿದರು.

ಕಡೂರು: ಜನವಸತಿ ಪ್ರದೇಶಗಳನ್ನೂ ಅರಣ್ಯ ಭೂಮಿ ಎಂದು ಗುರುತಿಸಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಕಂಡುಕೊಳ್ಳಲು ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಯತ್ನಿಸಬೇಕು ಎಂದು ಶಾಸಕ ಕೆ.ಎಸ್.ಆನಂದ್ ಸೂಚಿಸಿದರು.

ಮಂಗಳವಾರ ತಾಲೂಕಿನ ಬಾಸೂರು ಗ್ರಾಮದಲ್ಲಿ ಶಾಸಕರ ನಡೆ-ಗ್ರಾಮ ಪಂಚಾಯಿತಿ ಕಡೆ ಕಾರ್ಯಕ್ರಮದ ಜನ ಸಂಪರ್ಕಸಭೆಯ ನೇತೃತ್ವ ವಹಿಸಿ ಮಾತನಾಡಿದರು. ಬಾಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌಡನಕಟ್ಟೆ ಹಳ್ಳಿಯ ಸ.ನಂ.42 ರಲ್ಲಿ 1.18 ಎಕರೆ ಕಂದಾಯ ಭೂಮಿಯಲ್ಲಿ ವಾಸದ ಮನೆಗಳು, ಬಾವಿ ಹಾಗೂ ಜನವಸತಿಯೂ ಇದೆ. ಈ ಭೂಮಿಯನ್ನು ಅರಣ್ಯ ಭೂಮಿ ಎಂದು ಗುರುತಿಸಲಾಗಿದೆ. ಇದರಿಂದ ನಮಗೆ ಇ-ಸ್ವತ್ತು , ಹಕ್ಕುಪತ್ರ ಸಿಗುತ್ತಿಲ್ಲ. ಈ ಭೂಮಿಯನ್ನು ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ವರ್ಗಾಯಿಸುವ ಸಂದರ್ಭದಲ್ಲಿ 1988-89ರಲ್ಲಿ ಜಿಲ್ಲಾಧಿಕಾರಿ ಒಂದು ಆದೇಶ ಮಾಡಿದ್ದಾರೆ. ಸ.ನಂ 28ರಲ್ಲಿ ಅದೇ ಅವಧಿಯಲ್ಲಿ 90 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಅರಣ್ಯ ಇಲಾಖೆಯವರು ಈ ಭೂಮಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳುವ ಮುಂಚೆ ಊರಿಗೆ ಬಂದು ಜನರ ದಿಕ್ಕು ತಪ್ಪಿಸಿ ಸ್ಪಷ್ಟ ಮಾಹಿತಿ ನೀಡದೆ ಗ್ರಾಮಸ್ಥರಿಂದ ಸಹಿ ಪಡೆದು, 5 ವರ್ಷಗಳ ಬಳಿಕ ಮತ್ತೆ ಭೂಮಿಯನ್ನು ಮೂಲ ಅರಣ್ಯ ಇಲಾಖೆಗೆ ಅಥವಾ ಗ್ರಾಮಕ್ಕೆ ವಾಪಸ್ ಮಾಡುವುದಾಗಿ ತಿಳಿಸಿ. ಈಗ ಅಡ್ಡಿಪಡಿಸುತ್ತಿದ್ದಾರೆ ಎಂದು ದೂರಿ ನಿಜಗುಣಪ್ಪ ನೇತೃತ್ವದಲ್ಲಿ ಗ್ರಾಮಸ್ಥರು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಉತ್ತರಿಸಿದ ತಾಲೂಕು ವಲಯ ಅರಣ್ಯಾಧಿಕಾರಿ ಹರೀಶ್, ಅರಣ್ಯ ಭೂಮಿಯನ್ನು ವಾಪಸ್ ನೀಡಲು ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕು ಎಂದರು.

ತಹಸೀಲ್ದಾರ್ ರ್ಪೂರ್ಣಿಮಾ ಜತೆ ಚರ್ಚಿಸಿದ ಶಾಸಕ ಆನಂದ್, ತಹಸೀಲ್ದಾರ್ ಮತ್ತು ಅರಣ್ಯಾಧಿಕಾರಿ ಕುಳಿತು ಮಾತನಾಡಿ ಬೇರೆ ಜಾಗ ಗುರುತಿಸಿ. ಈ ಹಿಂದೆ ಜಿಲ್ಲಾಧಿಕಾರಿ ನೀಡಿರುವ ಆದೇಶ ಏನು ಎನ್ನುವ ದಾಖಲೆ ತೆಗೆಸಿ, ನೀಡಿದಲ್ಲಿ ಜಿಲ್ಲಾಧಿಕಾರಿ ಬಳಿ ನಾನು ಮಾತನಾಡುತ್ತೇನೆ. ಆದರೆ ಅರಣ್ಯ ಭೂಮಿಯ ಪರಿವರ್ತನೆ ಅಷ್ಟು ಸುಲಭವಿಲ್ಲ ಎನ್ನುವುದು ಗ್ರಾಮಗಳ ಜನರ ಗಮನದಲ್ಲಿರಲಿ ಎಂದರು. ಪಂಚಾಯ್ತಿ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿ, ಶಾಲೆಗೆ ಕಾಂಪೌಂಡ್, ಪಂಚಾಯಿತಿಗೆ ಹೊಸಕಟ್ಟಡ, ಸಂಜೀವಿನಿ ಮಹಿಳಾ ಒಕ್ಕೂಟಕ್ಕೆ ಕಚೇರಿ ಗುರುತಿಸಿ ಕೊಡಿ, 2ನೇ ಅಂಗನವಾಡಿಗೆ ಕಟ್ಟಡ ಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಆನಂದ್, ಅನೇಕ ಗ್ರಾಮ ಪಂಚಾಯಿತಿಗಳು ಕೋಟ್ಯಂತರ ರು. ಮೊತ್ತದ ಎನ್ಆರ್ಇಜಿ ಕಾಮಗಾರಿಗಳಿಗೆ ಕ್ರಿಯಾಯೋಜನೆ ರೂಪಿಸಿವೆ. ನನ್ನ ಅವಧಿಯಲ್ಲಿಯೇ ತಲಾ 25 ಲಕ್ಷ ರು. ನೀಡುವ ಮುಖೇನ 15ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ಕಟ್ಟಡಗಳಿಗೆ ಭೂಮಿಪೂಜೆ ನಡೆದು 6 ಕಟ್ಟಡಗಳ ಉದ್ಘಾಟನೆಯೂ ಆಗಿದೆ. ಆದರೆ ಬಾಸೂರು ಪಂಚಾಯಿತಿ ಸ್ವಂತ ಕಟ್ಟಡ ಹೊಂದಲು ನಿರ್ಲಕ್ಷ್ಯ ಹೊಂದಿರುವ ಜತೆಗೆ ಕ್ರಿಯಾಯೋಜನೆ ರೂಪಿಸುವಲ್ಲಿಯೇ ಅತ್ಯಂತ ಹಿಂದುಳಿದಿದೆ. ಇಲ್ಲಿ ಬಹಳಷ್ಟು ಕೆಲಸಗಳನ್ನು ನರೇಗಾದಲ್ಲಿ ನಿರ್ವಹಿಸಬಹುದಿತ್ತು ಎಂದು ಬೇಸರ ವ್ಯಕ್ತಪಡಿಸಿ, ಹೊಸದಾಗಿ ಬಂದಿರುವ ಪಿಡಿಒ ಮತ್ತು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಈ ನಿಟ್ಟಿನಲ್ಲಿ ಕ್ರಿಯಾಶೀಲರಾಗಬೇಕು ಎಂದು ಸೂಚನೆ ನೀಡಿದರು. ಸಭೆಯಲ್ಲಿ ತಾಪಂ ಕಾರ್ಯನಿರ್ವಹಣಾ ಅಧಿಕಾರಿ ಸಿ.ಆರ್.ಪ್ರವೀಣ್, ಗ್ರಾ.ಪಂ. ಅಧ್ಯಕ್ಷೆ ಪ್ರಿಯಾ ನಾಗರಾಜ್, ಉಪಾಧ್ಯಕ್ಚೆ ಕವಿತಾ, ಸದಸ್ಯರಾದ ಕವಿತಾ.ಆರ್, ಗೌರಮ್ಮ, ಬಿ.ಪಿ.ನಾಗಭೂಷಣ್, ಶ್ರೀಕಾಂತ್, ಸಿ.ಕೆ.ಪರಮೇಶ್ವರಪ್ಪ, ನರಸಮ್ಮ, ನೀಲಮ್ಮ, ರಾಜಪ್ಪ, ಎಸ್.ಎನ್.ತಮ್ಮಯ್ಯಪ್ಪ, ಮರುಳಪ್ಪ, ಪಿಡಿಒ ನೇತ್ರಾವತಿ, ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಬಾಸೂರು, ಚಿಕ್ಕಬಾಸೂರು, ಗೌಡನಕಟ್ಟೆಹಳ್ಳಿ, ವಿ.ಸಿದ್ದರಹಳ್ಳಿ, ಲಕ್ಕಡಿಕೋಟೆ, ಬೋರನಹಳ್ಳಿ ಗ್ರಾಮಸ್ಥರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾರ್ವಜನಿಕರು ಆಯೋಗಕ್ಕೆ ನೇರವಾಗಿ ದೂರು ಸಲ್ಲಿಸಿ
ಹಿರಿಯೂರಿನಲ್ಲಿ ತೋಟಕ್ಕೆ ನುಗ್ಗಿ ನಾಯಿಯನ್ನು ಕೊಂದ ಚಿರತೆ