ಕನ್ನಡಪ್ರಭ ವಾರ್ತೆ ತುಮಕೂರು
ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಮಾಜ ಸೇವಕ ಎಸ್.ಪಿ. ಚಿದಾನಂದ ಮನಗೆ ಭೇಟಿ ನೀಡಿ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರೊಂದಿಗೆ ಸೇರಿ ಪಕ್ಷವನ್ನು ಸದೃಢವಾಗಿ ಕಟ್ಟಿದ್ದಾರೆ. ಅವರಿಗೆ ಲೋಕಸಭೆಯ ಟಿಕೆಟ್ ದೊರೆಯಬೇಕಾಗಿತ್ತು. ಕೊನೆಯ ಕ್ಷಣದ ಬದಲಾವಣೆ ಮತ್ತು ಮತ್ತೆ ಮೋದಿ ಪ್ರಧಾನಿಯಾಗಬೇಕೆಂಬ ಮಹತ್ವದ ಉದ್ದೇಶದಿಂದ ನನಗೆ ಟಿಕೆಟ್ ನೀಡಿದ್ದಾರೆ. ಚಿದಾನಂದ ಅವರು ಸಹ ತಮ್ಮ ನೋವನ್ನು ಪಕ್ಷದ ವರಿಷ್ಠರು ಮತ್ತು ನಮ್ಮ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದು, ಮುಂದಿನ ದಿನಗಳಲ್ಲಿ ಉಜ್ವಲ ಭವಿಷ್ಯ ಅವರಿಗೆ ಕಾದಿದೆ ಎಂದರು.
ಇಂದು ನೋವಿನ ನಡುವೆಯೂ ಎಸ್.ಪಿ.ಚಿದಾನಂದ ನಮ್ಮೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದ್ದಾರೆ. ಒಂದು ಕಡೆ ಶಾಸಕ ಜಿ.ಬಿ. ಜ್ಯೋತಿಗಣೇಶ್, ಮತ್ತೊಂದು ಕಡೆ ಎಸ್.ಪಿ. ಚಿದಾನಂದ ಸರಿಸಮನಾಗಿ ಪಕ್ಷದ ಗೆಲುವಿಗೆ ದುಡಿಯಲು ಮುಂದಾಗಿದ್ದಾ ರೆ. ಅವರ ನಿಷ್ಕಲ್ಮಷ ಪ್ರೀತಿ ಮತ್ತು ಹೃದಯ ವೈಶಾಲತೆಗೆ ಧಕ್ಕೆಯಾಗದ ರೀತಿ ನಡೆಸಿಕೊಳ್ಳುತ್ತೇನೆ ಎಂಬ ಮಾತನ್ನು ಪಕ್ಷದ ವರಿಷ್ಠರು ಮತ್ತು ಅವರಿಗೆ ನೀಡಿದ್ದೇನೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪಕ್ಷದ ಹಿಂದುಳಿದ ವರ್ಗಗಳ ನಾಯಕರಾಗಿ ಬೆಳೆಯಲಿ ದ್ದಾರೆ ಎಂಬ ವಿಶ್ವಾಸವನ್ನು ವಿ. ಸೋಮಣ್ಣ ವ್ಯಕ್ತಪಡಿಸಿದರು.ನಾನು ಹೊರಗಿನವನು ಎಂಬುದರಲ್ಲಿ ಅರ್ಥವಿಲ್ಲ. ತುಮಕೂರಿನ ಮೂಲ ಎಂದರೆ ಐದಾರು ಸಾವಿರ ಜನ ದೊರೆಯಬಹುದು. ಹಾಗೆ ನೋಡಿದರೆ ಬೆಂಗಳೂರಿಗೂ ನಾನು ಹೊರಗಿನವನು. ನನ್ನನ್ನು ಹೊರಗಿನವ ಎಂದು ಪ್ರಚಾರ ಮಾಡುತ್ತಿರುವ ನಾಯಕರಿಗೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರವನ್ನು ಪಕ್ಷದ ಕಾರ್ಯಕರ್ತರು, ಮತದಾರರು ನೀಡಲಿದ್ದಾರೆ. ಸುಳ್ಳು ಹೇಳಿ ಹೋಗುವ ಜಾಯಮಾನ ನನ್ನದಲ್ಲ ಎಂದರು.
ಈ ವೇಳೆ ಶಾಸಕ ಜಿ.ಬಿ. ಜ್ಯೋತಿಗಣೇಶ್, ಪಕ್ಷದ ಮುಖಂಡರಾದ ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯ ಕುಮಾರ್, ಮಲ್ಲಸಂದ್ರ ಶಿವಣ್ಣ, ಪಂಚಾಕ್ಷರಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.