ಪಾವಗಡ ತಾಲೂಕಿಗೆ ಬಂದ ತುಂಗಭದ್ರೆ ನೀರು

KannadaprabhaNewsNetwork | Published : Jul 13, 2024 1:37 AM

ಸಾರಾಂಶ

ವಿಜಯನಗರ ಜಿಲ್ಲೆಯ ಹೊಸಪೇಟೆ ಡ್ಯಾಂನಿಂದ ಕುಡಿಯುವ ನೀರು ಪೈಪ್‌ಲೈನ್‌ ಮೂಲಕ ತುಮಕೂರು ಜಿಲ್ಲೆ ಪ್ರವೇಶ ಮಾಡಿದ್ದು, ನೀರು ಮೇಲೆತ್ತುವ ಕಾರ್ಯಕ್ಕೆ ತಾಲೂಕಿನ ಕೆಂಚಮ್ಮನಹಳ್ಳಿಯ ಪಂಪುಹೌಸ್‌ ಬಳಿ ಶಾಸಕ ಎಚ್. ವಿ. ವೆಂಕಟೇಶ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಪಾವಗಡ

ವಿಜಯನಗರ ಜಿಲ್ಲೆಯ ಹೊಸಪೇಟೆ ಡ್ಯಾಂನಿಂದ ಕುಡಿಯುವ ನೀರು ಪೈಪ್‌ಲೈನ್‌ ಮೂಲಕ ತುಮಕೂರು ಜಿಲ್ಲೆ ಪ್ರವೇಶ ಮಾಡಿದ್ದು, ನೀರು ಮೇಲೆತ್ತುವ ಕಾರ್ಯಕ್ಕೆ ತಾಲೂಕಿನ ಕೆಂಚಮ್ಮನಹಳ್ಳಿಯ ಪಂಪುಹೌಸ್‌ ಬಳಿ ಶಾಸಕ ಎಚ್. ವಿ. ವೆಂಕಟೇಶ ಚಾಲನೆ ನೀಡಿದರು.

ಶಾಸಕ ಎಚ್. ವಿ. ವೆಂಕಟೇಶ ಮಾತನಾಡಿ, ಜನತೆಯ ಹೋರಾಟದ ಫಲ ಹಾಗೂ ಮಾಜಿ ಸಚಿವ ವೆಂಕಟರಮಣಪ್ಪ ಹಿಂದಿನ ಸರ್ಕಾರದ ಜೊತೆಗೆ ಚರ್ಚಿಸಿ 2017ರಲ್ಲಿ ಬಯಲು ಸೀಮೆಯ ಬಹುಗ್ರಾಮಗಳ ಕುಡಿಯುವ ನೀರಿಗೆ 2,350 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದರು. ಅದರಂತೆ ಕಾಮಗಾರಿ ನಡೆದು ಜಿಲ್ಲೆಗೆ ನೀರು ಬಂದಿದ್ದು ಜನರಿಗೆ ಸಂತೋಷವಾಗಿದೆ. ಈ ಭಾಗದಲ್ಲಿ ಇದ್ದ ಜೀವಜಲದ ಕೊರತೆಯನ್ನು ತುಂಗಭದ್ರೆ ನಿವಾರಿಸಿದ್ದಾಳೆ ಎಂದರು.

ತಾಲೂಕಿನ ಪ್ರತಿ ಗ್ರಾಮಕ್ಕೂ ಈ ನೀರು ಸರಬರಾಜು ಮಾಡಲಿದ್ದು ಬೃಹತ್‌ ಟ್ಯಾಂಕ್‌ಗಳಲ್ಲಿ ನೀರು ಸಂಗ್ರಹಿಸಿ ನಳದ ಮೂಲಕ ನೀರು ಸರಬರಾಜು ಮಾಡಲಿದ್ದೇವೆ. ನೀರು ಪೋಲು ಆಗದಂತೆ ಪೈಪ್‌ಗಳ ಡ್ಯಾಮೇಜ್‌ ನಿಯಂತ್ರಿಸುವ ಮೂಲಕ ಹೆಚ್ಚಿನ ಕಾಳಜಿ ವಹಿಸಲಿದ್ದೇವೆ. ಪೈಪ್‌ಲೈನ್‌ ಕಾಮಗಾರಿಯ ಪರಿಶೀಲನೆ ನಡೆಯುತ್ತಿದೆ. ಎಲ್ಲಾ ಮುಗಿದ ಬಳಿಕ ಶುದ್ದೀಕರಿಸಿದ ಯೋಗ್ಯ ನೀರನ್ನು ಮನೆ ಮನೆಗೆ ಸರಬರಾಜು ಮಾಡಲಿದ್ದೇವೆ ಎಂದರು.

ತುಮಕೂರು ಜಿಲ್ಲೆಯ ಪಾವಗಡ ಸೇರಿದಂತೆ ಚಿತ್ರದುರ್ಗ ಜಿಲ್ಲೆಯ, ಮೊಳಕಾಲ್ಮೂರು, ಚಳ್ಳಕೆರೆ ಹಾಗೂ ಪರುಶುರಾಮಪುರ ಇತರೆ ಬಹುಗ್ರಾಮಗಳ ಕುಡಿಯುವ ನೀರಿಗೆ ಹೆಚ್ಚು ಸಹಕಾರಿಯಾಗಿದ್ದು ಯೋಜನೆಯ ಅನುಷ್ಠಾನಕ್ಕೆ ಹಣ ನೀಡಿದ ಸಿಎಂಗೆ ಅಭಿನಂದನೆ ಸಲ್ಲಿಸಿದರು.

ತುಂಗಾಭದ್ರ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನೀರು ತಾಲೂಕಿನ ಕೆಂಚಮ್ಮನಹಳ್ಳಿ ಗೇಟ್‌ನ ಟ್ಯಾಂಕ್‌ಗೆ ತಲುಪುತ್ತಿದ್ದಂತೆ ಪಂಪ್ ಹೌಸ್ ಘಟಕಕ್ಕೆ ತೆರಳಿದ ಮಾಜಿ ಸಚಿವ ಹಾಗೂ ಯೋಜನೆಯ ರೂವಾರಿ ವೆಂಕಟರಮಣಪ್ಪ ಭೇಟಿ ನೀಡಿ ವೀಕ್ಷಿಸಿದರು.

ಸುದೇಶ್ ಬಾಬು, ಕೆ.ಎಸ್.ಪಾಪಣ್ಣ,ಪಿ.ಎಚ್‌.ರಾಜೇಶ್‌, ತೆಂಗಿನಕಾಯಿ ರವಿ, ನಾಗೇಂದ್ರರಾವ್‌, ಕರಿಯಣ್ಣ, ನರಸಿಂಹರೆಡ್ಡಿ. ಷಾಬಾಬು, ರಿಜ್ವಾನ್‌, ಹನುಮೇಶ್, ಮದನ್ ರೆಡ್ಡಿ, ಜಿಪಂ ಅಧಿಕಾರಿ ಹನುಮಂತಯ್ಯ, ಬಸವಲಿಂಗಪ್ಪ ಪಾಟೀಲ್ ಇತರರಿದ್ದರು.

Share this article