ಬಲಜಿಗ/ಬಣಜಿಗ ಸಮುದಾಯಕ್ಕೆ ಬಿ ಮತ್ತು ಡಿ 2 ಪ್ರವರ್ಗ ಅಸಂವಿಧಾನಿಕ : ಹೈ ಕೋರ್ಟ್‌

KannadaprabhaNewsNetwork | Updated : Apr 21 2025, 09:21 AM IST

ಸಾರಾಂಶ

ರಾಜ್ಯದಲ್ಲಿ ಬಲಜಿಗ/ಬಣಜಿಗ ಸಮುದಾಯವನ್ನು ಉದ್ಯೋಗ ಹಾಗೂ ಶಿಕ್ಷಣದ ಉದ್ದೇಶಕ್ಕಾಗಿ ಹಿಂದುಳಿದ ವರ್ಗಗಳ ಸಮುದಾಯಗಳ ಪ್ರವರ್ಗ ಬಿ ಮತ್ತು ಡಿ ಎರಡರಲ್ಲೂ ವರ್ಗೀಕರಿಸಿರುವುದು ಅಸಂವಿಧಾನಿಕ ಎಂದು ಹೈಕೋರ್ಟ್‌ ಘೋಷಿಸಿದೆ.

ವೆಂಕಟೇಶ್‌ ಕಲಿಪಿ

 ಬೆಂಗಳೂರು : ರಾಜ್ಯದಲ್ಲಿ ಬಲಜಿಗ/ಬಣಜಿಗ ಸಮುದಾಯವನ್ನು ಉದ್ಯೋಗ ಹಾಗೂ ಶಿಕ್ಷಣದ ಉದ್ದೇಶಕ್ಕಾಗಿ ಹಿಂದುಳಿದ ವರ್ಗಗಳ ಸಮುದಾಯಗಳ ಪ್ರವರ್ಗ ಬಿ ಮತ್ತು ಡಿ ಎರಡರಲ್ಲೂ ವರ್ಗೀಕರಿಸಿರುವುದು ಅಸಂವಿಧಾನಿಕ ಎಂದು ಹೈಕೋರ್ಟ್‌ ಘೋಷಿಸಿದೆ.

ಒಂದು ನಿರ್ದಿಷ್ಟ ಸಮುದಾಯವನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಒಂದು ಪ್ರವರ್ಗದಡಿ ಹಾಗೂ ಉದ್ಯೋಗ ಉದ್ದೇಶಕ್ಕಾಗಿ ಮತ್ತೊಂದು ಪ್ರವರ್ಗದಡಿ ವರ್ಗೀಕರಿಸಲು ಸಾಧ್ಯವಿಲ್ಲ. ಒಂದು ಸಮುದಾಯವನ್ನು ಶೈಕ್ಷಣಿಕ ಮತ್ತು ಉದ್ಯೋಗ ಉದ್ದೇಶಕ್ಕಾಗಿ ಒಂದೇ ಪ್ರವರ್ಗದಡಿ ವರ್ಗೀಕರಿಸಬೇಕಾಗುತ್ತದೆ. ರಾಜ್ಯ ಸರ್ಕಾರ ಬಲಜಿಗ/ಬಣಜಿಗ ಸಮುದಾಯವನ್ನು ಶಿಕ್ಷಣದ ಉದ್ದೇಶಕ್ಕಾಗಿ ಪ್ರವರ್ಗ-ಬಿ ಅಡಿ ವರ್ಗೀಕರಿಸಿದ ನಂತರ ಉದ್ಯೋಗ ಉದ್ದೇಶಕ್ಕೂ ಇದೇ ಪ್ರವರ್ಗದಡಿ ವರ್ಗೀಕರಿಸುವ ಅಗತ್ಯವಿದೆಯೇ ಹೊರತು ಪ್ರವರ್ಗ-ಡಿ ಅಡಿ ಅಲ್ಲ. ಆದ್ದರಿಂದ ಈ ಕುರಿತು ಮರು ವರ್ಗೀಕರಣ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ಶಿಕ್ಷಕಿ (41) ವಿ.ಸುಮಿತ್ರಾ ಎಂಬುವರು ಸಲ್ಲಿಸಿದ್ದ ತಕರಾರು ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ನ್ಯಾಯಪೀಠ ಈ ಆದೇಶ ಮಾಡಿದೆ.

ಪ್ರಕರಣದ ವಿವರ:

ಸುಮಿತ್ರಾ ಅವರು ಬಲಜಿಗ/ಬಣಜಿಗ ಸಮುದಾಯಕ್ಕೆ ಸೇರಿದ್ದು, ಸಂವಿಧಾನದ ಪರಿಚ್ಛೇದ 15(4) ನಿಯಮಗಳ ಅನುಸಾರ ವಗೀಕರಿಸಲಾದ ಪ್ರವರ್ಗ-ಬಿ ಅಡಿಯಲ್ಲೇ ಶಿಕ್ಷಣ ಪೂರ್ಣಗೊಳಿಸಿದ್ದರು. 1991ರಲ್ಲಿ ಶಿಕ್ಷಕಿ ಹುದ್ದೆಗೆ ಅರ್ಜಿ ಸಲ್ಲಿಸಿ, ಹಿಂದುಳಿದ ವರ್ಗಗಳ ಅಡಿ (ಒಬಿಸಿ) ಮೀಸಲು ಕೋರಿದ್ದರು. ನಂತರ 1993ರಲ್ಲಿ ಶಿಕ್ಷಕಿಯಾಗಿ ನೇಮಕಗೊಂಡಿದ್ದರು. ಸುಮಿತ್ರಾ ಪ್ರವರ್ಗ-ಬಿ ಸೇರಿದ್ದಾರೆ ಎಂದು ತಹಸೀಲ್ದಾರ್‌ ಸಹ ಪ್ರಮಾಣ ಪತ್ರ ನೀಡಿದ್ದರು.

ಆದರೆ, ಸೇವೆಯಲ್ಲಿ ಮುಂದುವರಿಯುತ್ತಿದ್ದಾಗ 1996ರಲ್ಲಿ ಮೈಸೂರು ಜಿಲ್ಲೆಯ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿ ಸದಸ್ಯ ಕಾರ್ಯದರ್ಶಿಗಳು ಸುಮಿತ್ರಾ ಅವರ ಜಾತಿ ಪ್ರಮಾಣ ಪತ್ರ ಸಮರ್ಪಕವಾಗಿಲ್ಲ. ಅದು ಉದ್ಯೋಗ ಮೀಸಲಾತಿಗೆ ಅನ್ವಯಿಸುವುದಿಲ್ಲ. ಉದ್ಯೋಗದ ಉದ್ದೇಶದಿಂದ ಅವರು ಪ್ರವರ್ಗ-ಡಿಗೆ ಸೇರುತ್ತಾರೆಯೇ ಹೊರತು ಪ್ರವರ್ಗ-ಬಿಗೆ ಅಲ್ಲ ಎಂದು ತಿಳಿಸಿ ಜಾತಿ ಪ್ರಮಾಣ ಪತ್ರ ರದ್ದುಪಡಿಸಿದ್ದರು. ಆ ಅದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು 2013ರಲ್ಲಿ ಕೆಎಟಿ ತಿರಸ್ಕರಿಸಿದ ಕಾರಣ ಸುಮಿತ್ರಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಸಮಿತ್ರಾ ಪರ ವಕೀಲರು, ಅರ್ಜಿದಾರೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿ 20 ವರ್ಷ ಸೇವೆ ಸಲ್ಲಿಸಿದ್ದಾರೆ. ತಮ್ಮ ಜಾತಿ ಬಗ್ಗೆ ಸುಳ್ಳು ಹೇಳಿಕೆ ನೀಡಿಲ್ಲ. ತಾನು ಬಲಜಿಗ ಮತ್ತು ಬಣಜಿಗ ಸಮುದಾಯಕ್ಕೆ ಸೇರಿದ್ದಾಗಿ ಪ್ರತಿಸಲವೂ ಹೇಳಿದ್ದಾರೆ. 1986ರ ಅ.13ರಂದು ರಾಜ್ಯ ಸರ್ಕಾರ ಹಿಂದುಗಳಿದ ವರ್ಗಗಳಾಗಿ ವಿಂಗಡಿಸಿ ಆದೇಶ ಹೊರಡಿಸಿದೆ. ಶೈಕ್ಷಣಿಕ ಉದ್ದೇಶಗಳಿಗಾಗಿ ಬಲಜಿಗ/ಬಣಜಿಗ ಸಮುದಾಯವನ್ನು ಭಾರತದ ಸಂವಿಧಾನದ 15(4)ನೇ ವಿಧಿ ಅಡಿ ಮಾಡಲಾದ ಮೀಸಲಾತಿಯ ಮಟ್ಟಿಗೆ ಅನುಬಂಧ-I, ಪ್ರವರ್ಗ- ಬಿನಲ್ಲಿ ಕ್ರಮ ಸಂಖ್ಯೆ 133(b) ನಲ್ಲಿ ತೋರಿಸಿದೆ. ಆದರೆ, ಉದ್ಯೋಗ ಉದೇಶಕ್ಕಾಗಿ ಅದೇ ಸಮುದಾಯವನ್ನು ಉದ್ಯೋಗದ ಅನುಬಂಧ-II, ಪ್ರವರ್ಗ-ಡಿ, ಕ್ರಮ ಸಂಖ್ಯೆ 13(b) ನಲ್ಲಿ ತೋರಿಸಿದೆ ಎಂದು ವಾದಿಸಿದ್ದರು.

ಶಿಕ್ಷಣದಲ್ಲಿ ಹಿಂದೆ, ಆರ್ಥಿಕವಾಗಿ ಮುಂದೆ:

ಸರ್ಕಾರದ ಪರ ವಕೀಲರು. ಬಲಜಿಗ/ಬಣಜಿಗ ಸಮುದಾಯ ಶೈಕ್ಷಣಕವಾಗಿ ಹಿಂದುಳಿದೆ. ಆದ್ದರಿಂದ ಆ ಸಮುದಾಯವನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಪ್ರವರ್ಗ-ಬಿ ಅಡಿ ವರ್ಗೀಕರಿಸಿದೆ. ಆದರೆ, ಅದೇ ಸಮುದಾಯ ಆರ್ಥಿಕವಾಗಿ ಉತ್ತಮ ಸ್ಥಾನದಲ್ಲಿದೆ. ಇದರಿಂದ ಉದ್ಯೋಗ ಉದ್ದೇಶಗಳಿಗಾಗಿ ಸಂವಿಧಾನದ ಪರಿಚ್ಛೇದ 16(4) ರ ಅಡಿಯಲ್ಲಿ ಪ್ರವರ್ಗ-ಡಿ ಅಡಿಯಲ್ಲಿ ವರ್ಗೀಕರಿಸಲಾಗಿದೆ ಎಂದು ಸಮರ್ಥಿಸಿಕೊಂಡರು.

ಸರ್ಕಾರದ ವಾದ ಒಪ್ಪದ ಹೈಕೋರ್ಟ್‌, ಒಂದು ನಿರ್ದಿಷ್ಟ ವರ್ಗ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ ಎಂದು ಶೈಕ್ಷಣಿಕ ಉದ್ದೇಶಕ್ಕಾಗಿ ಒಂದು ಪ್ರವರ್ಗಕ್ಕೆ ಸೇರಿಸಿ, ಅದೇ ಸಮುದಾಯ ಆರ್ಥಿಕವಾಗಿ ಮುಂದುವರಿದಿದೆ ಎಂದು ಉದ್ಯೋಗದ ಉದ್ದೇಶಕ್ಕಾಗಿ ಮತ್ತೊಂದು ಪ್ರವರ್ಗದಡಿ ವರ್ಗೀಕರಿಸಿ ಪ್ರಾತಿನಿಧ್ಯ ಕೊಡಲಾಗದು. ಉದ್ಯೋಗದ ಉದ್ದೇಶಕ್ಕಾಗಿ ಬಲಜಿಗ/ಬಣಜಿಗ ಸಮುದಾಯವನ್ನು ಪ್ರವರ್ಗ-ಡಿ ಅಡಿ, ಶಿಕ್ಷಣದ ಉದ್ದೇಶದ ಉದ್ದೇಶಕ್ಕಾಗಿ ಪ್ರವರ್ಗ-ಬಿ ಅಡಿ ವರ್ಗೀಕರಿಸಿರುವುದು ಸಂವಿಧಾನದ 14ನೇ ಪರಿಚ್ಛೇದದ ಉಲ್ಲಂಘನೆಯಾಗಿದೆ. ಆದ್ದರಿಂದ ಬಲಜಿಗ/ಬಣಜಿಗ ಸಮುದಾಯವನ್ನು ಪರಿಚ್ಛೇದ 16(4) ರ ಅಡಿ ಗ್ರೂಪ್-ಡಿ ಬದಲಿಗೆ ಗ್ರೂಪ್-ಬಿ ಅಡಿಯಲ್ಲಿ ಮರು ವರ್ಗೀಕರಿಸಬೇಕು ಎಂದು ಸರ್ಕಾರಕ್ಕೆ ಆದೇಶಿಸಿದೆ.

ಜೊತೆಗೆ, ಬಲಜಿಗ/ಬಣಜಿಗ ಸಮುದಾಯಕ್ಕೆ ಸೇರಿದ ಅರ್ಜಿದಾರರು ಗ್ರೂಪ್-ಬಿ ಅಡಿ ಉದ್ಯೋಗಕ್ಕಾಗಿ ಮೀಸಲು ಪಡೆಯಲು ಅರ್ಹರಾಗಿರುತ್ತಾರೆ. ಅವರಿಗೆ ಪ್ರವರ್ಗ-ಬಿ ಅಡಿಯ ಉದ್ಯೋಗದ ಪ್ರಯೋಜನ ಕಲ್ಪಿಸಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಮುಂದುವರಿಸಬೇಕು ಎಂದು ಸರ್ಕಾರಕ್ಕೆ ಆದೇಶಿಸಿದೆ.

Share this article