ಇಬ್ಬರು ನಕಲಿ ವೈದ್ಯರಿಗೆ ತಲಾ ₹1 ಲಕ್ಷ ದಂಡ, ಕ್ಲಿನಿಕ್ ಮುಚ್ಚಲು ಆದೇಶ

KannadaprabhaNewsNetwork | Published : Sep 12, 2024 1:54 AM

ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆಯಲ್ಲಿ ಕ್ಲಿನಿಕ್ ಹಾಗೂ ಲಿಂಗಾಪುರ ಗ್ರಾಮದಲ್ಲಿ ಕ್ಲಿನಿಕ್ ಜೊತೆಗೆ ಫಾರ್ಮಸಿ ನಡೆಸುತ್ತಿದ್ದ ಇಬ್ಬರು ನಕಲಿ ವೈದ್ಯರ ಕ್ಲಿನಿಕ್‌ಗಳ ಮೇಲೆ ಹೊನ್ನಾಳಿ ಉಪವಿಭಾಗಾಧಿಕಾರಿ ಅಭಿಷೇಕ್ ಹಾಗೂ ತಾಲೂಕು ಆರೋಗ್ಯಾಧಿಕಾರಿ (ಪ್ರಭಾರ) ಡಾ.ಗಿರೀಶ್ ದಾಳಿ ನಡೆಸಿದರು.

- ಲಿಂಗಾಪುರದಲ್ಲಿ ಕ್ಲಿನಿಕ್‌ ನಡೆಸುತ್ತಿದ್ದ ಸನ್ಯಾಸಿಕೊಡಮಗ್ಗಿ ಶ್ರೀನಿವಾಸ್

- ಕ್ಯಾಸಿನಕೆರೆಯಲ್ಲಿ ಕ್ಲಿನಿಕ್‌ ತೆರೆದಿದ್ದ ಹಿರೇಮರಬ ಗ್ರಾಮದ ಲಕ್ಷ್ಮಣ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ತಾಲೂಕಿನ ಕ್ಯಾಸಿನಕೆರೆಯಲ್ಲಿ ಕ್ಲಿನಿಕ್ ಹಾಗೂ ಲಿಂಗಾಪುರ ಗ್ರಾಮದಲ್ಲಿ ಕ್ಲಿನಿಕ್ ಜೊತೆಗೆ ಫಾರ್ಮಸಿ ನಡೆಸುತ್ತಿದ್ದ ಇಬ್ಬರು ನಕಲಿ ವೈದ್ಯರ ಕ್ಲಿನಿಕ್‌ಗಳ ಮೇಲೆ ಹೊನ್ನಾಳಿ ಉಪವಿಭಾಗಾಧಿಕಾರಿ ಅಭಿಷೇಕ್ ಹಾಗೂ ತಾಲೂಕು ಆರೋಗ್ಯಾಧಿಕಾರಿ (ಪ್ರಭಾರ) ಡಾ.ಗಿರೀಶ್ ದಾಳಿ ನಡೆಸಿದರು.

ಸ್ಥಳ ಮಹಜರು ನಡೆಸಿದ ಬಳಿಕ ಸಮಗ್ರ ವರದಿಯನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಅವರಿಗೆ ನೀಡಿದ ವರದಿ ಆಧರಿಸಿ ಕ್ಲಿನಿಕ್‌ಗಳನ್ನು ಮುಚ್ಚಿಸಲಾಯಿತು. ಇಬ್ಬರಿಗೂ ತಲಾ ₹1 ಲಕ್ಷ ದಂಡ ವಿಧಿಸಲಾಯಿತು.

ಭದ್ರಾವತಿ ತಾಲೂಕಿನ ಸನ್ಯಾಸಿಕೊಡಮಗ್ಗಿ ಗ್ರಾಮದ ಶ್ರೀನಿವಾಸ್ (57) ಹೊನ್ನಾಳಿ ತಾಲೂಕಿನ ಲಿಂಗಾಪುರದಲ್ಲಿ ಮನೆ ಬಾಡಿಗೆಗೆ ಪಡೆದು ಹಲವು ವರ್ಷಗಳಿಂದ ಮೆಡಿಕಲ್ಸ್ ಮತ್ತು ಜನರಲ್ ಸ್ಟೋರ್ಸ್‌ ಎಂದು ಪರವಾನಗಿ ಪಡೆದು, ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದರು. ಹಿರೇಕೆರೂರು ತಾಲೂಕಿನ ಹಿರೇಮರಬ ಗ್ರಾಮದ ಲಕ್ಷ್ಮಣ (45) ಎಂಬಾತ ಸಹ ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆಯಲ್ಲಿ ಮನೆ ಬಾಡಿಗೆ ಪಡೆದು ಹಲವು ವರ್ಷಗಳಿಂದ ಅನಧಿಕೃತ ಕ್ಲಿನಿಕ್ ನಡೆಸುತ್ತಿದ್ದರು.

ಈ ಇಬ್ಬರ ಕ್ಲಿನಿಕ್ ತಪಾಸಣೆ ವೇಳೆ ಬಿ.ಇ.ಎಂ.ಎಸ್. ಪ್ರಮಾಣ ಪತ್ರ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು. ಪರಿಶೀಲಿಸಿದಾಗ ಇದು ಅಮಾನ್ಯ ಪ್ರಮಾಣ ಪತ್ರವಾಗಿತ್ತು. ಆದ್ದರಿಂದ ನಕಲಿ ಎಂದು ಪರಿಗಣಿಸಿ ಅಧಿಕಾರಿಗಳು ಕ್ಲಿನಿಕ್‌ಗಳನ್ನು ಮುಚ್ಚಿಸಿದರು.

ಈ ಎರಡು ಕ್ಲಿನಿಕ್‌ಗಳ ಬಗ್ಗೆ ಹೊನ್ನಾಳಿ ಉಪವಿಭಾಗಾಧಿಕಾರಿ ಅಭಿಷೇಕ್ ಮತ್ತು ತಾಲೂಕು ಆರೋಗ್ಯಾಧಿಕಾರಿ ಡಾ.ಗಿರೀಶ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಕೆಪಿಎಂಇ ನೋಂದಣೆ ಸದಸ್ಯ ಕಾರ್ಯದರ್ಶಿ ಡಾ.ಷಣ್ಮುಖಪ್ಪ ಸಮಗ್ರ ವರದಿ ಸಲ್ಲಿಸಿದ್ದರು.

ಡಾ.ಷಣ್ಮುಖಪ್ಪ ಅವರು ಜಿಲ್ಲಾಧಿಕಾರಿ ಹಾಗೂ ಕೆಪಿಎಂಇ ನೋಂದಣೆ ಪ್ರಾಧಿಕಾರ ಹಾಗೂ ಸಾರ್ವಜನಿಕ ಕುಂದುಕೊರತೆ ನಿವಾರಣಾ ಸಮಿತಿ ಅಧ್ಯಕ್ಷರೂ ಆಗಿರುವ ಜಿ.ಎಂ.ಗಂಗಾಧರ ಸ್ವಾಮಿ ಅವರಿಗೆ ಸಮಗ್ರ ವರದಿ ಸಲ್ಲಿಸಿ, ಕ್ರಮಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದರು. ಪ್ರಸಾವನೆ ಮೇರೆಗೆ ಡಿಸಿ ಅವರು ಸದರಿ ಕ್ಲಿನಿಕ್‌ಗಳ ಬಂದ್‌ಗೊಳಿಸಲು ಆದೇಶ ಹೊರಡಿಸಿದ್ದರು.

- - -(-ಸಾಂದರ್ಭಿಕ ಚಿತ್ರ)