ಮೂಡಿಗೆರೆ, ಸೌದೆ ತರಲು ತೆರಳಿದ್ದ ಕೂಲಿ ಕಾರ್ಮಿಕರ ಮೇಲೆ ಕಾಡುಕೋಣ ದಾಳಿ ನಡೆಸಿದ ಪರಿಣಾಮ ಇಬ್ಬರು ಕೂಲಿ ಕಾರ್ಮಿಕರು ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾದ ಘಟನೆ ತಾಲೂಕಿನ ಮುದ್ರೆಮನೆ ಸಮೀಪದ ರಸ್ತೆಯಲ್ಲಿ ಬುಧವಾರ ನಡೆದಿದೆ.
ಸೌದೆ ತರಲು ತೆರಳಿದ್ದ ಕೂಲಿ ಕಾರ್ಮಿಕರ ಮೇಲೆ ದಾಳಿ
ಕನ್ನಡಪ್ರಭ ವಾರ್ತೆ, ಮೂಡಿಗೆರೆಸೌದೆ ತರಲು ತೆರಳಿದ್ದ ಕೂಲಿ ಕಾರ್ಮಿಕರ ಮೇಲೆ ಕಾಡುಕೋಣ ದಾಳಿ ನಡೆಸಿದ ಪರಿಣಾಮ ಇಬ್ಬರು ಕೂಲಿ ಕಾರ್ಮಿಕರು ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾದ ಘಟನೆ ತಾಲೂಕಿನ ಮುದ್ರೆಮನೆ ಸಮೀಪದ ರಸ್ತೆಯಲ್ಲಿ ಬುಧವಾರ ನಡೆದಿದೆ. ತಾಲೂಕಿನ ಹೊಯ್ಸಳಲು ಗ್ರಾಮದ ಸುಮಾರು 6 ಮಂದಿ ಕೂಲಿ ಕಾರ್ಮಿಕರು ಮುದ್ರೆಮನೆ ಸಮೀಪದ ಗಿರಿಜಾ ರಮೇಶ್ ಎಂಬುವರ ತೋಟದಿಂದ ಸೌದೆ ತರಲೆಂದು ಬುಧವಾರ ಬೆಳಗ್ಗೆ ಮೆಗಾ ಎಕ್ಸ್ ವಾಹನದಲ್ಲಿ ತೆರಳಿದ್ದರು. ಈ ಸಂದರ್ಭದಲ್ಲಿ ರಸ್ತೆ ತಿರುವಿನಲ್ಲಿ ಕಾಡುಕೋಣ ದಿಢೀರ್ ಪ್ರತ್ಯಕ್ಷವಾಗಿದೆ. ಕಾಡು ಕೋಣ ಸ್ಥಳದಿಂದ ತೆರಳಿದ ಬಳಿಕ ಮುಂದೆ ಸಾಗಲೆಂದು ಚಾಲಕ ವಾಹನವನ್ನು ದೂರದಲ್ಲಿಯೇ ನಿಲ್ಲಿಸಿದ್ದಾರೆ. ಕಾಡುಕೋಣ ಹತ್ತಿರ ಬಂದು ವಾಹನದ ಮೇಲೆ ದಾಳಿ ನಡೆಸಿದೆ. ಜತೆಗೆ ವಾಹನದ ಬಾಗಿಲಿಗೆ ಗುದ್ದಲಾರಂಭಿಸಿದೆ. ಭಯದಿಂದ ವಾಹನದಲ್ಲಿದ್ದವರೆಲ್ಲಾ ತಪ್ಪಿಸಿಕೊಂಡು ಓಡಿದ್ದಾರೆ. ಕೂಲಿ ಕಾರ್ಮಿಕ ರಾದ ದಿನೇಶ್ ಹಾಗೂ ಜಗದೀಶ್ ವಾಹನದಿಂದ ಹೊರಗೆ ಬಿದ್ದಾಗ ಅವರ ಮೇಲೆ ದಾಳಿ ನಡೆಸಿದೆ. ಅದೃಷ್ಟವಶಾತ್ ಇವರಿಬ್ಬರೂ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದು, ಮೂಡಿಗೆರೆ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೆಗಾ ಎಕ್ಸ್ ವಾಹನ ನಜ್ಜುಗುಜ್ಜಾಗಿದೆ. ತಾಲೂಕಿನಲ್ಲಿ ಕಾಡು ಪ್ರಾಣಿಗಳ ಹಾವಳಿ ಮಿತಿ ಮೀರಿದೆ. ತೋಟ ಹಾಗೂ ಗ್ರಾಮೀಣ ಪ್ರದೇಶದ ಜನರು ಭಯದಿಂದಲೇ ತಿರುಗಾಡುವ ಪರಿಸ್ಥಿತಿ ಉಂಟಾಗಿದೆ. ಕಾಡು ಪ್ರಾಣಿಗಳ ಹಾವಳಿ ನಿಯಂತ್ರಿಸಲು ಅರಣ್ಯ ಇಲಾಖೆ ಕ್ರಮವಹಿಸಬೇಕು. ಅಲ್ಲದೇ ಗಾಯಳುಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಸುಂದ್ರೇಶ್ ಹೊಯ್ಸಳಲು ಒತ್ತಾಯಿಸಿದ್ದಾರೆ. - ಎಂಡಿಜಿ 1ಎ ಮೂಡಿಗೆರೆ ತಾಲೂಕಿನ ಮುದ್ರೆಮನೆ ಸಮೀಪದಲ್ಲಿ ಕಾಡು ಕೋಣ ದಾಳಿ ನಡೆಸಿದ್ದರಿಂದ ವಾಹನ ಜಖಂಗೊಂಡಿರುವುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.