‘ಕಲ್ಲೇಗ ಟೈಗರ್ಸ್’ ತಂಡ ಮುಖ್ಯಸ್ಥ ಮುಖ್ಯಸ್ಥ ಯುವಕನ ಕಗ್ಗೊಲೆ

KannadaprabhaNewsNetwork | Updated : Nov 08 2023, 01:01 AM IST

ಸಾರಾಂಶ

ಪುತ್ತೂರಿನಲ್ಲಿ 'ಕಲ್ಲೇಗ ಟೈಗರ್ಸ್' ತಂಡದ ಮುಖ್ಯಸ್ಥ ಯುವಕನ ಕಗ್ಗೊಲೆ

ಕನ್ನಡಪ್ರಭವಾರ್ತೆ ಪುತ್ತೂರು

ಕಳೆದ ಆರು ವರ್ಷಗಳಿಂದ ‘ಕಲ್ಲೇಗ ಟೈಗರ್ಸ್’ ಎಂಬ ಹುಲಿವೇಷದ ತಂಡ ಕಟ್ಟಿಕೊಂಡು ಮುನ್ನಡೆಸುತ್ತಿದ್ದ 24 ವರ್ಷದ ಯುವಕನನ್ನು ಕ್ಷುಲ್ಲಕ ಕಾರಣಕ್ಕಾಗಿ ನಾಲ್ವರಿದ್ದ ತಂಡವೊಂದು ಅಟ್ಟಾಡಿಸಿ ತಲವಾರಿನಿಂದ ಕಡಿದು ಕೊಂದ ಘಟನೆ ಪುತ್ತೂರು ತಾಲೂಕಿನ ಕಬಕ ಗ್ರಾಮದ ನೆಹರೂನಗರ ಎಂಬಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಇಲ್ಲಿನ ಶೇವಿರೆ ನಿವಾಸಿ, ಕಲ್ಲೇಗ ಕಲ್ಕುಡ-ಕಲ್ಲುರ್ಟಿ ದೈವಸ್ಥಾನದ ಪರಿಚಾರಕ ಚಂದ್ರಶೇಖರ ಗೌಡ ಮತ್ತು ಕಬಕ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಕಮಲ ದಂಪತಿಯ ಪುತ್ರ ಅಕ್ಷಯ ಕಲ್ಲೇಗ (24) ಮೃತರು.

ಚಿಕ್ಕಮುಡ್ನೂರು ಗ್ರಾಮದ ದಾರಂದಕುಕ್ಕು ನಿವಾಸಿ ಜೆಡಿಎಸ್ ಕ್ಷೇತ್ರ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ಪದ್ಮಾ ಮಣಿಯನ್ ಎಂಬವರ ಪುತ್ರ ಮನೀಶ್, ಬನ್ನೂರು ಗ್ರಾಮದ ಕೃಷ್ಣನಗರ ನಿವಾಸಿಯಾದ ಖಾಸಗಿ ಬಸ್ ಚಾಲಕ ಚೇತನ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ನಗರದ ಹೊರವಲಯದ ಪಡೀಲು ನಿವಾಸಿ ಕೇಶವ ಪಡೀಲು ಮತ್ತು ಪಡೀಲು ನಿವಾಸಿ ಮಂಜುನಾಥ ಯಾನೆ ಮಂಜು ಕೊಲೆ ಆರೋಪಿಗಳು.

ಪುತ್ತೂರಿನ ನೆಹರುನಗರದಲ್ಲಿ ಸೋಮವಾರ ರಾತ್ರಿ ನಡೆದ ಅಘಘಾತ ಪ್ರಕರಣಕ್ಕೆ ಸಂಬಂಧಿಸಿ ಅಕ್ಷಯ್ ಕಲ್ಲೇಗ ಹಾಗೂ ಆರೋಪಿಗಳ ಪೈಕಿ ಮನೀಶ್ ಮತ್ತು ಚೇತನ್ ಎಂಬವರ ನಡುವೆ ದೂರವಾಣಿ ಕರೆಯ ಮೂಲಕ ಮಾತಿನ ಚಕಮಕಿ ನಡೆದಿತ್ತು. ಈ ಘಟನೆಯ ಬಳಿಕ ಅಕ್ಷಯ್ ಕಲ್ಲೇಗ ಅವರು ತನ್ನ ಸ್ನೇಹಿತ ಚಿಕ್ಕಮುಡ್ನೂರಿನ ವಿಖ್ಯಾತ್ ಬಿ ಎಂಬವರ ಜತೆ ನೆಹರೂನಗರದಲ್ಲಿ ರಸ್ತೆಯ ಬಳಿಯ ಕೆನರಾ ಬ್ಯಾಂಕ್ ಎಟಿಎಂ ಬಳಿ ನಿಂತುಕೊಂಡಿದ್ದ ವೇಳೆ ಕಾರಿನಲ್ಲಿ ಬಂದಿದ್ದ ಆರೋಪಿಗಳಾದ ಮನೀಶ್, ಚೇತನ್,ಮಂಜುನಾಥ ಮತ್ತು ಕೇಶವ ಪಡೀಲು ಎಂಬವರು ಅಕ್ಷಯ್ ಕಲ್ಲೇಗ ಜೊತೆಗೆ ನಡೆದಿದ್ದ ಮಾತಿನ ಚಕಮಕಿಗೆ ಸಂಬಂಧಿಸಿ ತಕರಾರು ಎತ್ತಿ ತಲವಾರಿನಿಂದ ಕಡಿದು ಕೊಲೆ ಮಾಡಿರುವುದಾಗಿ ಆರೋಪಿಸಲಾಗಿದೆ.

ಎಟಿಎಂ ಎದುರಿನ ರಸ್ತೆಯಲ್ಲೇ ಆರೋಪಿಗಳಾದ ಮನೀಶ್ ಮತ್ತು ಚೇತನ್ ಎಂಬವರು ಅಕ್ಷಯ್ ಕಲ್ಲೇಗ ಅವರ ಕೈಗೆ ಕಡಿದಿದ್ದು, ಅಕ್ಷಯ್ ಅವರು ಅಲ್ಲಿಂದ ಓಡಿ ತಪ್ಪಿಸಿಕೊಳ್ಳುವ ಯತ್ನ ಮಾಡಿದಾಗ ಆರೋಪಿಗಳು ಅಟ್ಟಾಟಿಸಿಕೊಂಡು ಹೋಗಿ ಅಕ್ಷಯ್ ಅವರ ಕಾಲು, ಕುತ್ತಿಗೆ ಮತ್ತು ಮುಖದ ಭಾಗಕ್ಕೆ ತಲುವಾರಿನಿಂದ ಕಡಿದಿದ್ದಾರೆ. ಅಕ್ಷಯ್ ಮಾಣಿ-ಮೈಸೂರು ಹೆದ್ದಾರಿಯ ದಾಟಿ ಮತ್ತೊಂದು ಕಡೆಗೆ ಹೋಗಿ ಅಲ್ಲೇ ಹೆದ್ದಾರಿ ಬದಿಯ ಪೊದೆಯ ಬಳಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಅಕ್ಷಯ್ ಜತೆಗಿದ್ದ ಅವರ ಸ್ನೇಹಿತ ಚಿಕ್ಕಮುಡ್ನೂರಿನ ವಿಖ್ಯಾತ್ ಈ ಸಂದರ್ಭ ತಪ್ಪಿಸಿಕೊಂಡು ಓಡಿಹೋಗಿ ಪಾರಾಗಿದ್ದಾರೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ವಿಖ್ಯಾತ್ ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಇಬ್ಬರು ಆರೋಪಿಗಳು ಠಾಣೆಗೆ ಶರಣು:

ನಾಲ್ವರು ಆರೋಪಿಗಳ ಪೈಕಿ ಪ್ರಮುಖ ಆರೋಪಿಗಳಾದ ಮನೀಶ್ ಮತ್ತು ಚೇತನ್ ಕೊಲೆ ನಡೆಸಿದ ಸ್ಥಳದಿಂದ ನೇರವಾಗಿ ಪುತ್ತೂರು ನಗರ ಠಾಣೆಗೆ ಆಗಮಿಸಿ ಪೊಲೀಸರಿಗೆ ಶರಣಾಗಿದ್ದರು. ಉಳಿದ ಇಬ್ಬರು ಆರೋಪಿಗಳಾದ ಕೇಶವ ಪಡೀಲು ಮತ್ತು ಮಂಜುನಾಥ ಯಾನೆ ಮಂಜು ಎಂಬವರನ್ನು ಪೊಲೀಸರು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಕೊಲೆ ನಡೆಸಲಾದ ಸ್ಥಳಕ್ಕೆ ಕರೆತಂದು ಪೊಲೀಸರು ಮಂಗಳವಾರ ಸಂಜೆ ಸ್ಥಳದ ಮಹಜರು ನಡೆಸಿದರು.

ಅಂತ್ಯ ಸಂಸ್ಕಾರ ಮನೆಯ ಮುಂಭಾಗದಲ್ಲಿ ಮಧ್ಯಾಹ್ನ ನಡೆಸಲಾಯಿತು. ಮೃತರು ತಂದೆ, ತಾಯಿ, ಇಬ್ಬರು ಸಹೋದರರನ್ನು ಅಗಲಿದ್ದಾರೆ.

Share this article