ಕನ್ನಡಪ್ರಭ ವಾರ್ತೆ ಬೆಳಗಾವಿ
ಒಳಚರಂಡಿ ಪೈಪ್ಲೈನ್ ಅಳವಡಿಕೆ ಕಾಮಗಾರಿಗೆ ವೇಳೆ ಅಪಾರ ಪ್ರಮಾಣದ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಬೆಳಗಾವಿಯ ನ್ಯೂ ಗಾಂಧಿ ನಗರದ ರಾಷ್ಟ್ರೀಯ ಹೆದ್ದಾರಿ ಬದಿಯ ಸರ್ವಿಸ್ ರಸ್ತೆಯಲ್ಲಿ ಬುಧವಾರ ನಡೆದಿದೆ.ಮೂಡಲಗಿ ತಾಲೂಕಿನ ಪಟಗುಂದಿ ಗ್ರಾಮದ ಬಸವರಾಜ ಸರವಿ (38) ಮತ್ತು ಶಿವಲಿಂಗ ಸರವಿ (20) ಮೃತ ಕಾರ್ಮಿಕರು. ಕರ್ನಾಟಕ ರಾಜ್ಯ ಕುಡಿಯುವ ನೀರು ಮತ್ತು ಒಳಚರಂಡಿ ಇಲಾಖೆ ವತಿಯಿಂದ ಒಳಚರಂಡಿ ಕಾಮಗಾರಿ ಕೈಗೊಳ್ಳಲಾಗಿತ್ತು. ಸರ್ವಿಸ್ ರಸ್ತೆಯ ಬದಿಯಲ್ಲಿ ಒಳಚರಂಡಿಗೆ ಪೈಪ್ಲೈನ್ ಅಳಡಿಕೆ ಕಾರ್ಯ ನಡೆಯುತ್ತಿತ್ತು. ಜೆಸಿಬಿಯಿಂದ ಗುಂಡಿ ಅಗೆಯಲಾಗಿತ್ತು. ಬಳಿಕ ಪೈಪ್ಲೈನ್ ಅಳವಡಿಕೆಗೆ ಆಳವಾಗಿ ಗುಂಡಿ ತೋಡಲು ಕಾರ್ಮಿಕರು ಕೆಳಗೆ ಇಳಿದಿದ್ದರು. ಈ ವೇಳೆ ಮೇಲಿನಿಂದ ಮಣ್ಣು ಕುಸಿದು ಅವರ ಮೇಲೆ ಬಿದ್ದಿದೆ.
ಕೂಡಲೇ ಅವರ ಜೊತೆಗೆ ಕಾರ್ಮಿಕರು ಹಾಗೂ ಸ್ಥಳೀಯರು ಅವರ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ, ಮತ್ತಷ್ಟು ಮಣ್ಣು ಕುಸಿಯುವ ಭೀತಿಯಿಂದ ಯಾರೂ ಕೂಡ ಕೆಳಗೆ ಇಳಿಯಲಿಲ್ಲ. ಬಳಿಕ ಜೆಸಿಬಿಯಿಂದ ಕಾರ್ಯಾಚರಣೆ ನಡೆಸಿ ಮಣ್ಣನ್ನು ತೆಗೆದು, ಅವರಿಬ್ಬರು ಕಾರ್ಮಿಕರನ್ನು ಪತ್ತೆ ಹಚ್ಚಲಾಯಿತು. ಅವರಿಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ್ದರು. ಬಳಿಕ ಇಬ್ಬರು ಕಾರ್ಮಿಕರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಸಾಗಿಸಲಾಯಿತು. ಘಟನೆ ತನಿಖೆಗೆ ಸಚಿವ ಜಾರಕಿಹೊಳಿ ಸೂಚನೆಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಳಚರಂಡಿ ಪೈಲ್ಲೈನ್ ಕಾಮಗಾರಿ ವೇಳೆ ಮಣ್ಣು ಕುಸಿದು ಬಿದ್ದು ಮೂಡಲಗಿ ತಾಲೂಕಿನ ಇಬ್ಬರು ಕಾರ್ಮಿಕರುಸಾವನ್ನಪ್ಪಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಘಟನೆ ಕುರಿತು ಸಮಗ್ರ ತನಿಖೆ ನಡೆಸಿ ಕೂಡಲೇ ತಕ್ಷಣ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇನ್ನು ಮೃತ ಕಾರ್ಮಿಕರ ಕುಟುಂಬಗಳಿಗೆ ಮಹಾನಗರ ಪಾಲಿಕೆ, ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.ಬೆಳಗಾವಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಒಳಚರಂಡಿ ಪೈಪ್ ಲೈನ್ ಕಾಮಗಾರಿಗೆ ಆಗಮಿಸಿದ್ದ ಮೂಡಲಗಿ ತಾಲೂಕಿನ ಪಟಗುಂದಿ ಗ್ರಾಮದ ಇಬ್ಬರು ಕಾರ್ಮಿಕರು ಮಣ್ಣು ಕುಸಿದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ವಿಚಾರ ಕೇಳಿ ತೀವ್ರ ನೋವುಂಟು ಮಾಡಿದೆ. ತಮ್ಮ ಬದುಕು ಸಾಗಿಸಲು ನಿತ್ಯ ಕೂಲಿ ಕೆಲಸವನ್ನೇ ನಂಬಿಕೊಂಡಿದ್ದ ಶಿವಲಿಂಗ ಮಾರುತಿ ಸವೆ೯ ಹಾಗೂ ಬಸವರಾಜ ಸವೆ೯ ಅವರು ಮಣ್ಣಿನ ಅಡಿಯಲ್ಲಿ ಸಿಲುಕಿ ಮೃತಪಟ್ಟಿರುವುದು ದುರ್ದೈವವೇ ಸರಿ. ಘಟನೆಯಲ್ಲಿ ಮೃತಪಟ್ಟಿರುವ ಕಾರ್ಮಿಕರ ಕುಟುಂಬದ ನೋವಿನಲ್ಲಿ ನಾನು ಕೂಡ ಭಾಗಿಯಾಗುವೆ.-ಬಾಲಚಂದ್ರ ಜಾರಕಿಹೊಳಿ, ಶಾಸಕ, ಬೆಮುಲ್ ಅಧ್ಯಕ್ಷ