ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ (ಐಸಿಎಐ) ಇದರ ಉಡುಪಿ ಶಾಖೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸದಸ್ಯರ ಶೈಕ್ಷಣಿಕ ಮತ್ತು ವೃತ್ತಿಪರ ಅಭಿವೃದ್ಧಿಗೆ ನೆರವಾಗುವ ಉದ್ದೇಶದಿಂದ ಓದುಗರ ಕೊಠಡಿ
ಉಡುಪಿ: ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ (ಐಸಿಎಐ) ಇದರ ಉಡುಪಿ ಶಾಖೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸದಸ್ಯರ ಶೈಕ್ಷಣಿಕ ಮತ್ತು ವೃತ್ತಿಪರ ಅಭಿವೃದ್ಧಿಗೆ ನೆರವಾಗುವ ಉದ್ದೇಶದಿಂದ ಓದುಗರ ಕೊಠಡಿಯನ್ನು ಉದ್ಘಾಟಿಸಲಾಯಿತು.
ಈ ಓದುಗರ ಕೊಠಡಿಯನ್ನು ಐಸಿಎಐ ಇದರ ಶೈಕ್ಷಣಿಕ ಅಭಿವೃದ್ಧಿ ನಿರ್ದೇಶನಾಲಯದ ಅಧ್ಯಕ್ಷ ಸಿಎ ದಯಾನಿವಾಸ್ ಶರ್ಮಾ ಹಾಗೂ ಕೇಂದ್ರ ಪರಿಷತ್ ಸದಸ್ಯ ಸಿಎ ಅರ್ಪಿತ್ ಜಗದೀಶ್ ಕಬ್ರಾ ಉದ್ಘಾಟಿಸಿ ಶುಭ ಹಾರೈಸಿದರು.ಈ ಸಂದರ್ಭ ಮಾತನಾಡಿದ ಐಸಿಎಐ ಉಡುಪಿ ಶಾಖೆಯ ಅಧ್ಯಕ್ಷೆ ಸಿಎ ಅರ್ಚನಾ ಆರ್. ಮಯ್ಯ, ಉಡುಪಿಯ ಕರಾವಳಿ ಜಂಕ್ಷನ್ ಸಮೀಪದ ಶ್ರೀರಾಮ ದರ್ಶನ ಕಟ್ಟಡದ ಮೂರನೇ ಮಹಡಿಯಲ್ಲಿರುವ ಈ ಓದುಗರ ಕೊಠಡಿ, ವಿದ್ಯಾರ್ಥಿಗಳಿಗೆ ಶಾಂತ ಹಾಗೂ ಏಕಾಗ್ರ ಅಧ್ಯಯನ ವಾತಾವರಣವನ್ನು ಒದಗಿಸುವ ಜೊತೆಗೆ ಸದಸ್ಯರಿಗೆ ಉಲ್ಲೇಖ ಕೇಂದ್ರವಾಗಿಯೂ ಸೇವೆ ಸಲ್ಲಿಸಲಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಉಡುಪಿ ಶಾಖೆಯ ಉಪಾಧ್ಯಕ್ಷ ಸಿ.ಎ. ರಾಘವೇಂದ್ರ ಮೊಗರಾಯ ಎಂ., ಸದಸ್ಯರಾದ ಸಿಎ ಲಕ್ಷ್ಮೀಶ ಕೆ. ರಾವ್, ಖಜಾಂಚಿ, ಸಿಎ ಮಾಧುರಿ ಪ್ರಭು ಬಿ.ಜಿ., ಸಿಎ ಗುಜ್ಜಾಡಿ ಪ್ರಭಾಕರ್ ನಾಯಕ್, ಸಿಎ ಲೋಕೇಶ್ ಶೆಟ್ಟಿ, ಸಿಎ ಪ್ರದೀಪ್ ಜೋಗಿ, ಸಹ ಆಯ್ಕೆಯ ಸದಸ್ಯ ಸಿಎ ಸೋನಿತ್ ಶೆಟ್ಟಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಮತ್ತು ಸದಸ್ಯರ ಹಿತಕ್ಕಾಗಿ ಮುಂದಿನ ದಿನಗಳಲ್ಲಿಯೂ ಸೌಲಭ್ಯಗಳು ಮತ್ತು ಉಪಕ್ರಮಗಳನ್ನು ಬಲಪಡಿಸುವ ಬದ್ಧತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.