ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲೆಯಾದ್ಯಂತ ಬುಧವಾರವೂ ಮಳೆ ಮುಂದುವರಿದೆ, ಆದರೆ ರೆಡ್ ಅಲರ್ಟ್ ಘೋಷಿಸಲಾಗಿದ್ದರೂ, ನಿರೀಕ್ಷೆಯಷ್ಟು ಮಳೆಯಾಗಿಲ್ಲ, ಮಂಗಳವಾರ ತುಂಬಿ ಹರಿಯುತ್ತಿದ್ದ ನದಿಗಳಲ್ಲಿಯೂ ಪ್ರವಾಹ ಇಳಿದಿದೆ.ಜಿಲ್ಲೆಯಲ್ಲಿ ಸರಾಸರಿ 93 ಮಿ.ಮೀ. ಮಳೆ ದಾಖಲಾಗಿದೆ. ಮುಖ್ಯವಾಗಿ ಕುಂದಾಪುರ ತಾಲೂಕಿನಲ್ಲಿ 104 ಮಿ.ಮೀ.ನಷ್ಟು ಜಡಿಮಳೆಯಾಗಿದೆ. ಉಳಿದ ತಾಲೂಕುಗಳಲ್ಲಿ ಸಾಧಾರಣ ಮಳೆಯಾಗಿದೆ.
ಜಿಲ್ಲೆಯಲ್ಲಿ ಮಂಗಳವಾರದ ಮಳೆಗೆ 3 ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದು 3,50,000 ರು., ಸುಮಾರು 13 ಮನೆಗಳಿಗೆ 4,55,000 ರು., ಮತ್ತು 2 ಜಾನುವಾರ ಕೊಟ್ಟಿಗೆಗಳಿಗೆ ಭಾಗಶಃ ಹಾನಿಯಾಗಿದೆ. ಕುಂದಾಪುರ ತಾಲೂಕೊಂದರಲ್ಲಿಯೇ ಸುಮಾರು 19 ಕುಟುಂಬಗಳ ತೋಟ, ಬೆಳೆಗಳು ನಾಶವಾಗಿ ಸುಮಾರು 1.95 ಲಕ್ಷ ರು.ಗಳಷ್ಟು ನಷ್ಟ ಉಂಟಾಗಿದೆ.ಜಿಲ್ಲೆಯಲ್ಲಿ ಗಾಳಿಮಳೆಗೆ ಒಟ್ಟು 155 ವಿದ್ಯುತ್ ಕಂಬಗಳು ಧರೆಗುರುಳಿದ್ದು, 2.15 ಕಿ.ಮೀ. ಉದ್ದದ ವಿದ್ಯುತ್ ತಂತಿ ಮತ್ತು 6 ಟ್ರಾನ್ಸ್ಫಾರ್ಮರ್ಗಳಿಗೆ ಹಾನಿಯಾಗಿದೆ. ಇದರಿಂದ ಮೆಸ್ಕಾಂಗೆ ಅಂದಾಜು 25.42 ಲಕ್ಷ ರು. ನಷ್ಟವಾಗಿದೆ.
ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದರೂ, ಪಶ್ಚಿಮ ಘಟ್ಟದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಬಹುತೇಕ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. ನದಿಗಳ ಅಕ್ಕಪಕ್ಕದ ತಗ್ಗುಪ್ರದೇಶಗಳಲ್ಲಿ ನೀರು ಇಳಿಮುಖವಾಗದಿದ್ದರೂ ಯಾವುದೇ ಕ್ಷಣದಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಸ್ಥಳೀಯರಲ್ಲಿ ಆತಂಕ ಮುಂದುವರಿದಿದೆ. ಹವಾಮಾನ ಇಲಾಖೆ ಕೂಡ ಇನ್ನೂ 2 ದಿನ ಭಾರಿ ಮಳೆಯಾಗುವ ಮತ್ತು 30 - 45 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆ ನೀಡಿದ್ದು, ರೆಡ್ ಅಲರ್ಟ್ ಮುಂದುವರಿಸಲಾಗಿದೆ.ಪಡುಬಿದ್ರಿಯ ನಡಿಪಟ್ಣ ಪ್ರದೇಶದಲ್ಲಿ ಕಡಲುಕೊರೆತ ಆರಂಭವಾಗಿದ್ದು, ಕಾಪು ತಹಸೀಲ್ದಾರ್ ಪ್ರತಿಭಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಉಡುಪಿಯ ಕುತ್ಪಾಡಿ ಕಟ್ಟೆಗುಡ್ಡೆಯಲ್ಲಿ ಮನೆಗಳಿಗೆ ಉಂಟಾಗಿರುವ ಹಾನಿ ಪ್ರದೇಶಕ್ಕೆ ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರದಿಂದ ಸೂಕ್ತ ಪರಿಹಾರದ ಭರವಸೆ ನೀಡಿದರು.
ಕಾಪು ತಾಲೂಕಿನ ಕುತ್ಯಾರು ಗ್ರಾಮದ ವಾಮನ ಆಚಾರ್ಯ ಅವರ ಮನೆಯ ಮೇಲೆ ಮರಬಿದ್ದು ಸಂಪೂರ್ಣ ಹಾನಿಯಾಗಿ 1 ಲಕ್ಷ ರು., ಉಡುಪಿ ತಾಲೂಕಿನ ಹೆರ್ಗ ಗ್ರಾಮದ ಪಾಂಡುರಂಗ ನಾಯ್ಕ ಅವರ ವಾಸ್ತವ್ಯದ ಮನೆಯ ಮೇಲೆ ಮರಬಿದ್ದು 1.50 ಲಕ್ಷ ರು. ಮತ್ತು ಬೈಂದೂರು ತಾಲೂಕಿನ ಯಳಜಿತ್ ಗ್ರಾಮದ ಪಾರ್ವತಿ ಅವರ ವಾಸ್ತವ್ಯದ ಮನೆ ಮಳೆಯಿಂದ ಪೂರ್ಣ ಹಾನಿಗೊಂಡು 1 ಲಕ್ಷ ರು. ನಷ್ಟ ಸಂಭವಿಸಿದೆ.ಕುಂದಾಪುರ ತಾಲೂಕಿನಲ್ಲಿ 3 ಮನೆಗಳಿಗೆ 1.40 ಲಕ್ಷ ರು., ಬೈಂದೂರು ತಾಲೂಕಿನಲ್ಲಿ 4 ಮನೆಗಳಿಗೆ 1.95 ಲಕ್ಷ ರು., ಉಡುಪಿ ತಾಲೂಕಿನಲ್ಲಿ 5 ಮನೆಗಳಿಗೆ 2.65 ಲಕ್ಷ ರು., ಕಾಪು ತಾಲೂಕಿನ 2 ಮನೆಗಳಿಗೆ 1.15 ಲಕ್ಷ ರು. ಮತ್ತು ಕಾರ್ಕಳ ತಾಲೂಕಿನ 2 ಮನೆಗಳಿಗೆ 80 ಸಾವಿರ ರು.ಗಳಷ್ಟು ಹಾನಿ ಸಂಭವಿಸಿದೆ.