ಕನ್ನಡಪ್ರಭ ವಾರ್ತೆ ಉಡುಪಿ
ಅ.24ರಂದು ನ್ಯಾಯಾಲಯವು ನ.20ರಂದು 1, 2 ಹಾಗೂ ನ.21ರಂದು 3 ಮತ್ತು 4ನೇ ಸಾಕ್ಷಿಗಳ ವಿಚಾರಣೆಗೆ ದಿನಾಂಕ ನಿಗದಿ ಪಡಿಸಿತ್ತು. ಅದರಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಆರೋಪಿ ಪ್ರವೀಣ್ ಚೌಗುಲೆಯನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಉಡುಪಿ ಕೋರ್ಟ್ಗೆ ಕರೆದುಕೊಂಡು ಬರಲಾಗಿತ್ತು.ಪ್ರಕರಣದ ತನಿಖಾಧಿಕಾರಿ ಮಲ್ಪೆ ಪೊಲೀಸ್ ವೃತ್ತನಿರೀಕ್ಷಕರ ನೇತೃತ್ವದಲ್ಲಿ ಆರೋಪಿಯನ್ನು ಬುಧವಾರ ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ಸಂದರ್ಭ ಆರೋಪಿ ಪರ ವಕೀಲರು, ಇನ್ನು ಮುಂದೆ ನಾವು ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗುವುದಿಲ್ಲ ಮತ್ತು ನಮ್ಮ ವಕಾಲತ್ತನ್ನು ವಾಪಾಸ್ ಪಡೆದುಕೊಳ್ಳುತ್ತೇವೆ ಎಂದು ಕೋರ್ಟಿಗೆ ತಿಳಿಸಿದರು.ಅದಕ್ಕೆ ಆರೋಪಿ ಚೌಗುಲೆ, ಈ ಹಿನ್ನೆಲೆಯಲ್ಲಿ ನನ್ನ ಪತ್ನಿ ಹೊಸ ವಕೀಲರನ್ನು ನೇಮಕ ಮಾಡಲಿದ್ದಾರೆ ಎಂದರು.
ಆಕೆಯನ್ನು ವಿಚಾರಿಸಿ ಕೂಡಲೇ ವಕೀಲರನ್ನು ನೇಮಕ ಮಾಡುವಂತೆ ನ್ಯಾಯಾಧೀಶ ಎ.ಸಮೀವುಲ್ಲಾ ಆರೋಪಿಗೆ ಸೂಚಿಸಿದರು. ಇದಕ್ಕೆ ವಿಚಾರಣೆ ಇಡೀ ನ್ಯಾಯಾಲಯವೇ ಸಿದ್ಧವಾಗಿರುವಾಗ ಕೊನೆ ಕ್ಷಣದಲ್ಲಿ ಆರೋಪಿ ವಕೀಲರು ವಕಾಲತ್ತು ವಾಪಾಸ್ ಪಡೆದಿರುವುದಕ್ಕೆ ಪ್ರಕರಣದ ವಿಶೇಷ ಸರ್ಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ಆಕ್ಷೇಪ ಸಲ್ಲಿಸಿದರು.ಬುಧವಾರ ನಡೆಯಬೇಕಾಗಿದ್ದ ಸಾಕ್ಷಿಗಳ ವಿಚಾರಣೆ ನಡೆಯದೆ, ಮುಂದಿನ ಪ್ರಕ್ರಿಯೆಯನ್ನು ಗುರುವಾರಕ್ಕೆ ಮುಂದೂಡಲಾಗಿದೆ. ಇಂದು ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿರುವುದರಿಂದ ಆತನನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಹಿರಿಯಡ್ಕ ಜೈಲಿಗೆ ಕೊಂಡೊಯ್ಯಲಾಯಿತು ಎಂದು ತಿಳಿದುಬಂದಿದೆ.