ಉಡುಪಿ: ನಗರಸಭೆಯ ಜನನ ಮರಣ ಪ್ರಮಾಣ ಪತ್ರ ವಿಭಾಗದಲ್ಲಿ ಅಧಿಕಾರಿಗಳ ವಿಳಂಬ ಧೋರಣೆ, ಅಸಹಕಾರದ ಬಗ್ಗೆ ಸಾರ್ವಜನಿಕರಿಂದ ದೂರು ಹಾಗೂ ಪತ್ರಿಕೆಯ ವರದಿಯ ಮೇರೆಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಂಗಳವಾರ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಜನನ ಪ್ರಮಾಣಪತ್ರಗಳಲ್ಲಿ ಹೆಸರು, ವಿಳಾಸ ಇತ್ಯಾದಿ ತಿದ್ದುಪಡಿ ಅರ್ಜಿಗಳು ಬರುತ್ತಿದ್ದು, ಇದಕ್ಕೆ ಜನನ ಪ್ರಮಾಣ ಪತ್ರ ಅರ್ಜಿಗಾಗಿ ಬರುವ ಜನರಿಗೆ ಅರ್ಜಿ ಸಲ್ಲಿಸುವ ಮೊದಲೇ ಸೂಕ್ತ ಮಾಹಿತಿ ನೀಡಿ ಸಾರ್ವಜನಿಕರೊಂದಿಗೆ ಸಂಯಮದಿಂದ ವರ್ತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರಸಭೆಯ ಜನನ ಮರಣ ಪ್ರಮಾಣ ಪತ್ರ ವಿಭಾಗಕ್ಕೆ ಅಗತ್ಯವಿರುವ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಹಾಗೂ ಕಂಪ್ಯೂಟರ್ ವ್ಯವಸ್ಥೆ ಮಾಡುವಂತೆ ಪೌರಾಯುಕ್ತರಿಗೆ ಸೂಚಿಸಿದರು.ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ ಹಾಗೂ ಸಿಬ್ಬಂದಿ ಇದ್ದರು.