ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಹೊರವಲಯದ ಚಿಕ್ಕೋನಹಳ್ಳಿ ವ್ಯಾಪ್ತಿಯಲ್ಲಿ ರೈತರ ಅನಧಿಕೃತ ಪಂಪ್ ಸೆಟ್ಗಳ ವಿದ್ಯುತ್ ಸಂಪರ್ಕ ಬಂದ್ ಮಾಡಲು ಮುಂದಾದ ಸೆಸ್ಕಾಂ ಸಿಬ್ಬಂದಿಗೆ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ನೇತೃತ್ವದಲ್ಲಿ ಪ್ರತಿರೋಧ ವ್ಯಕ್ತಪಡಿಸಿದ ರೈತರು, ವಿದ್ಯುತ್ ಸಂಪರ್ಕ ಬಂದ್ ಕಾರ್ಯಾಚರಣೆ ನಡೆಸದಂತೆ ಆಗ್ರಹಿಸಿದರು.
ಇಂಧನ ಇಲಾಖೆ ಆದೇಶದ ಮೇರೆಗೆ ತಾಲೂಕಿನಾದ್ಯಂತ ಸೆಸ್ಕಾಂ ಅನಧಿಕೃತ ವಿದ್ಯುತ್ ಸಂಪರ್ಕ ಬಂದ್ ಮಾಡುವ ಕಾರ್ಯಾಚರಣೆ ಆರಂಭಿಸಿ ಮೈಕ್ ಹಾಕಿಕೊಂಡು ಮಾಹಿತಿ ನೀಡುತ್ತಿರುವ ಸೆಸ್ಕಾಂ ಸಿಬ್ಬಂದಿ ರೈತರು ನಿಗದಿತ ಹಣ ಪಾವತಿಸಿ ತಮ್ಮ ಅಕ್ರಮ ಪಂಪ್ ಸೆಟ್ಗಳ ವಿದ್ಯುತ್ ಸಂಪರ್ಕವನ್ನು ಸಕ್ರಮಗೊಳಿಸಿಕೊಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.ವಿದ್ಯುತ್ ಸಂಪರ್ಕ ಕಡಿತದಿಂದ ಉಂಟಾಗುವ ಯಾವುದೇ ರೀತಿಯ ಬೆಳೆ ನಷ್ಟಕ್ಕೆ ವಿದ್ಯುತ್ ಇಲಾಖೆ ಜವಾಬ್ದಾರಿಯಲ್ಲ ಎನ್ನುವ ಎಚ್ಚರಿಕೆ ಸೂಚನೆ ನೀಡುತ್ತಿದ್ದಾರೆ. ಸರ್ಕಾರದ ನೂತನ ವಿದ್ಯುತ್ ನೀತಿ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರ ಅಕ್ರಮ ಸಕ್ರಮಕ್ಕೆ 17 ಸಾವಿರ ರು.ನಿಗದಿ ಪಡಿಸಿತ್ತು. ಇದನ್ನು ಪಾವತಿಸಿ ಅಕ್ರಮ ಸಕ್ರಮ ಮಾಡಿಕೊಳ್ಳಲು ರೈತರು ಸಿದ್ದರಿದ್ದಾರೆ. ಆದರೆ, ಆರ್ಥಿಕ ದುಸ್ತಿಗೆ ತಲುಪಿರುವ ರಾಜ್ಯ ಸರ್ಕಾರ ಅಕ್ರಮ ಸಕ್ರಮಕ್ಕೆ 25 ಸಾವಿರ ರು. ನಿಗದಿಪಡಿಸಿ ರೈತರ ಲೂಟಿಗೆ ಮುಂದಾಗಿದೆ ಎಂದು ಕಿಡಿಕಾರಿದರು.ಸರ್ಕಾರ ತನ್ನ ನೀತಿ ಜಾರಿಗೊಳಿಸುವ ಮುನ್ನ ಅದರ ಸಾಧಕ-ಬಾಧಕ ಯೋಚಿಸಬೇಕು. ಒಂದು ನೀರಾವರಿ ಯೋಜನೆ ಜಾರಿಗೊಳಿಸಲು ಸರ್ಕಾರಕ್ಕೆ ಸಾವಿರಾರು ಕೋಟಿ ಹಣ ಬೇಕು. ಆದರೆ, ರೈತರು ಸರ್ಕಾರದ ಅವಲಂಭನೆಯಿಲ್ಲದೆ ತಾವೇ ಲಕ್ಷಾಂತರ ರು. ವ್ಯಯಿಸಿ ಕೊಳವೆ ಬಾವಿ ತೋಡಿಸಿಕೊಂಡು ತಮ್ಮ ಭೂಮಿಗೆ ನೀರಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಅನ್ನ ಬೆಳೆಯುವ ರೈತನಿಗೆ ರಾಜ್ಯ ಸರ್ಕಾರ ಉಚಿತ ವಿದ್ಯುತ್ ನೀಡಬೇಕು. ಆದರೆ, ಉಚಿತ ವಿದ್ಯುತ್ ನೀಡುವ ಬದಲು ರೈತರಿಗೆ ಕಿರುಕುಳ ನೀಡುತ್ತಿದೆ. ರೈತರಿಗೆ ಉಚಿತ ವಿದ್ಯುತ್ ಅಗತ್ಯವಿಲ್ಲ. ನಾವು ಹಣಕಟ್ಟಲು ಸಿದ್ದರಿದ್ದೇವೆ. ಆದರೆ, ಒಂದೊಂದು ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಶುಲ್ಕ ಹೆಚ್ಚಳ ನೀತಿ ಕೈಬಿಡಬೇಕು. ಸರ್ಕಾರ ತನ್ನ ರೆವಿನ್ಯೂ ಹೆಚ್ಚಿಸಿಕೊಳ್ಳಲು ಕಾಲ ಕಾಲಕ್ಕೆ ತನ್ನ ಶುಲ್ಕ ಏರಿಕೆ ಮಾಡುವಂತೆ ರೈತರ ಆದಾಯ ಹೆಚ್ಚಿಸಲೂ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಿ ರೈತರ ಬದುಕನ್ನು ಹಸನುಗೊಳಿಸಬೇಕಾದ ರಾಜ್ಯ ಸರ್ಕಾರ ರೈತರ ಹಿತಾಸಕ್ತಿಗೆ ವಿರುದ್ಧವಾದ ನೀತಿ ಜಾರಿಗೆತಂದು ರೈತರ ಮನೆಗಳನ್ನು ಲೂಟಿ ಮಾಡುವ ಕಾನೂನುಗಳನ್ನು ಜಾರಿಗೆ ತರುತ್ತಿದೆ. ಯಾವುದೇ ಕಾರಣಕ್ಕೂ ಹೆಚ್ಚುವರಿ ಹಣ ಪಾವತಿಸುವುದಿಲ್ಲ ಮತ್ತು ವಿದ್ಯುತ್ ಸಂಪರ್ಕ ಬಂದ್ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಈ ವೇಳೆ ರೈತರಾದ ಚಿಕ್ಕೋನಹಳ್ಳಿ ಕೆಂಚೇಗೌಡ, ನಾಗಣ್ಣ, ಬೋರೇಗೌಡ, ಪುರ ಗ್ರಾಮದ ಕೃಷ್ಣ, ರವಿ, ಕೋಮನಹಳ್ಳಿ ಗಿರಿ,ಜವರ ಮತ್ತಿತರರಿದ್ದರು.