ರಾಮಮೂರ್ತಿ ನವಲಿ
ಗಂಗಾವತಿ: ತಾಲೂಕಿನ ಸಣಾಪುರ ಗ್ರಾಮ ಹತ್ತಿರದ ತುಂಗಭದ್ರಾ ನದಿಯ ಸಮತೋಲನ ಜಲಾಶಯದಲ್ಲಿ ಅನಧಿಕೃತವಾಗಿ ತೆಪ್ಪಗಳು ಸಂಚರಿಸುತ್ತಿದ್ದು, ಪ್ರವಾಸಿಗರಿಂದ ಅಧಿಕ ಹಣ ವಸೂಲಿ ಮಾಡುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.ಅಂಜನಾದ್ರಿಯ ಸನಿಹದಲ್ಲಿರುವ ಸಣಾಪುರ ಸಮಾತೋಲನ ಜಲಾಶಯ, ಹಳೇ ಪ್ರವಾಸಿ ಮಂದಿರ ಹತ್ತಿರವಿರುವ ತುಂಗಭದ್ರಾ ನದಿ ಮತ್ತು ಋಷಿ ಪರ್ವತದಲ್ಲಿರುವ ನದಿಯಲ್ಲಿ ಸುಮಾರು 65ರಿಂದ 70 ತೆಪ್ಪ (ಹರಿಗೋಲು) ಸಂಚರಿಸುತ್ತಿವೆ. ಈ ಸಂಚಾರಕ್ಕೆ ಯಾವುದೇ ಇಲಾಖೆಯ ಅನುಮತಿ ಇಲ್ಲ. ರಾಜಾರೋಷವಾಗಿ ತೆಪ್ಪಗಳನ್ನು ಹಾಕುತ್ತಿದ್ದಾರೆ.ನದಿ, ಜಲಾಶಯಗಳಲ್ಲಿ ಅನಧಿಕೃತವಾಗಿ ತೆಪ್ಪ ಹಾಕಬಾರದೆಂದು ನ್ಯಾಯಾಲಯ, ಜಿಲ್ಲಾಡಳಿತ ಸ್ಪಷ್ಟ ಆದೇಶ ನೀಡಿದ್ದರೂ ತೆಪ್ಪ ಮಾಲೀಕರು ಸರ್ಕಾರದ ಸೂಚನೆಗೆ ಕ್ಯಾರೇ ಎನ್ನದೇ ತೆಪ್ಪಗಳನ್ನು ಹಾಕುತ್ತಿದ್ದಾರೆ. ಈ ಹಿಂದೆ ತೆಪ್ಪಗಳ ಸಂಚಾರ ಸಂದರ್ಭದಲ್ಲಿ ಎಷ್ಟೋ ಬಾರಿ ಅವಘಡ ಸಂಭವಿಸಿದ ನಿದರ್ಶನಗಳಿವೆ.ಪ್ರವಾಸಿಗರಿಂದ ಅಧಿಕ ಹಣ ವಸೂಲಿ: ಅಂಜನಾದ್ರಿ ಬೆಟ್ಟ, ಪಂಪಾ ಸರೋವರ ಸೇರಿದಂತೆ ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸಲು ಆಗಮಿಸಿದ್ದ ಪ್ರವಾಸಿಗರಿಗೆ ತೆಪ್ಪದಲ್ಲಿ ಸಂಚರಿಸಿ ಪ್ರಕೃತಿ ಸೌಂದರ್ಯ ವೀಕ್ಷಿಸುವ ಆಮಿಷ ಒಡ್ಡಿ ಅವರಿಂದ ಅಧಿಕ ಹಣ ವಸೂಲಿ ಮಾಡುತ್ತಿದ್ದಾರೆಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ. ಒಬ್ಬರಿಂದ ₹500-800ವರೆಗೆ ವಸೂಲಿ ಮಾಡುತ್ತಿದ್ದಾರೆ.ಜೀವದ ಹಂಗಿಲ್ಲದೇ ಬರುತ್ತಿರುವ ಪ್ರವಾಸಿಗರು: ವಿದೇಶಿ ಪ್ರವಾಸಿಗರು ಸೇರಿದಂತೆ ವಿವಿಧ ರಾಜ್ಯಗಳಿಂದ ಬರುವ ಪ್ರವಾಸಿಗರನ್ನು ತೆಪ್ಪಗಳಲ್ಲಿ ಕರೆದೊಯ್ಯುತ್ತಿದ್ದಾರೆ. ಐತಿಹಾಸಿಕ ಸ್ಥಳಗಳಲ್ಲಿ ತೆಪ್ಪಗಳ ಏಜೆಂಟರುಗಳಿದ್ದು, ಇವರೆಲ್ಲ ಪ್ರವಾಸಿಗರನ್ನು ಕರೆ ತರುತ್ತಾರೆ. ಹೀಗೆ ಅಕ್ರಮವಾಗಿ ತೆಪ್ಪ ಸಂಚಾರ ನಡೆಯುತ್ತಿವೆ.ಪ್ರೀ ವೆಡ್ಡಿಂಗ್ ಚಿತ್ರೀಕರಣದ ತಾಣ: ಮದುವೆ ಪೂರ್ವ ಚಿತ್ರೀಕರಣಕ್ಕೆ ಜೋಡಿಗಳು ಆಗಮಿಸುತ್ತಿದ್ದು, ಇವರಿಂದ ₹5000ದಿಂದ ₹10 ಸಾವಿರವರೆಗೆ ನಿಗದಿ ಪಡಿಸಿದ್ದಾರೆ. ಜಲಾಶಯದಲ್ಲಿ ಪ್ರಮುಖ ಶೂಟಿಂಗ್ ಸ್ಥಳಗಳನ್ನು ತೋರಿಸುವ ತೆಪ್ಪದ ಮಾಲಿಕರು ಸಂಜೆ ಸಮಯದಲ್ಲಿಯೂ ದಂಧೆಯನ್ನು ಎಗ್ಗಿಲ್ಲದೇ ನಡೆಸುತ್ತಿದ್ದಾರೆ.ಜಿಲ್ಲಾಧಿಕಾರಿ ಆದೇಶಕ್ಕೆ ನಿರ್ಲಕ್ಷ್ಯ: ಅನಧಿಕೃತ ತೆಪ್ಪಗಳನ್ನು ಹಾಕಬಾರದೆಂದು ಜಿಲ್ಲಾಧಿಕಾರಿ ಕಳೆದ ನಾಲ್ಕು ವರ್ಷಗಳ ಹಿಂದೆ ಆದೇಶ ಹೊರಡಿಸಿದ್ದರು. ಆದರೆ ತೆಪ್ಪ ಮಾಲೀಕರು ಜಿಲ್ಲಾಧಿಕಾರಿ ಆದೇಶವನ್ನು ಗಾಳಿಗೆ ತೂರಿ ನಿರಂತರವಾಗಿ ತೆಪ್ಪಗಳನ್ನು ಹಾಕುತ್ತಿದ್ದಾರೆ. ಈ ಹಿಂದೆ ತೆಪ್ಪಗಳನ್ನು ಜಪ್ತಿ ಮಾಡಿದ್ದರೂ ರಾತ್ರೋ ರಾತ್ರಿ ತೆಪ್ಪಗಳನ್ನು ತೆಗೆದುಕೊಂಡು ದಂಧೆಯಲ್ಲಿ ನಿರತರಾಗುತ್ತಿದ್ದಾರೆ.ಪ್ರವಾಸಿಗರಿಗೆ ಒಂದು ಕಡೆ ಮೋಜು ಸಿಗುವುದೇನೋ ಸತ್ಯ. ಆದರೆ ಸುರಕ್ಷತಾ ವ್ಯವಸ್ಥೆ ಇಲ್ಲದೇ ತೆಪ್ಪ ಸಂಚಾರ ನಡೆಸುತ್ತಿರುವುದು ಅಪಾಯಕಾರಿಯಾಗಿದೆ. ಈ ಬಗ್ಗೆ ಜಿಲ್ಲಾಡಳಿತ ನಿಗಾವಹಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.ಸಾಣಾಪುರ ತುಂಗಾಭದ್ರಾ ಸಮಾನಂತರ ಜಲಾಶಯದಲ್ಲಿ ನಿರಂತರವಾಗಿ ಅನಧಿಕೃತ ತೆಪ್ಪ ಸಂಚಾರ ನಡೆಯುತ್ತಿದೆ. ತೆಪ್ಪಗಳನ್ನು ಹಾಕಲು ಪೈಪೋಟಿ ನಡೆದಿದೆ. ಈ ಹಿಂದೆ ಜಿಲ್ಲಾಧಿಕಾರಿ ನಿರ್ಬಂಧಿಸಿದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ಸಾಣಾಪುರ ಪಿಡಿಒ ವತ್ಸಲಾ.