ನರೇಗಾ ಯೋಜನೆಯಡಿ ಗ್ರಾಪಂ ನಿಂದ ಅತಿ ಹೆಚ್ಚು ಸೌಲಭ್ಯ ಪಡೆಯಬಹುದು: ಮನೀಶ್

KannadaprabhaNewsNetwork | Published : Aug 8, 2024 1:36 AM

ಸಾರಾಂಶ

ನರಸಿಂಹರಾಜಪುರ, ನರೇಗ ಯೋಜನೆಯಡಿ ಗ್ರಾಮ ಪಂಚಾಯಿತಿ ಮೂಲಕ ರೈತರು ಅತಿ ಹೆಚ್ಚು ಸೌಲಭ್ಯಗಳನ್ನು ಪಡೆಬಹುದು ಎಂದು ಗ್ರಾಮ ಸಭೆಯ ನೋಡಲ್‌ ಅಧಿಕಾರಿ ಹಾಗೂ ತಾಲೂಕು ಪಂಚಾಯಿತಿ ನರೇಗ ಯೋಜನೆಯ ಸಹಾಯಕ ನಿರ್ದೇಶಕ ಮನೀಶ್‌ ಸಲಹೆ ನೀಡಿದರು.

ಸೀತೂರು ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಸಭೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ನರೇಗ ಯೋಜನೆಯಡಿ ಗ್ರಾಮ ಪಂಚಾಯಿತಿ ಮೂಲಕ ರೈತರು ಅತಿ ಹೆಚ್ಚು ಸೌಲಭ್ಯಗಳನ್ನು ಪಡೆಬಹುದು ಎಂದು ಗ್ರಾಮ ಸಭೆಯ ನೋಡಲ್‌ ಅಧಿಕಾರಿ ಹಾಗೂ ತಾಲೂಕು ಪಂಚಾಯಿತಿ ನರೇಗ ಯೋಜನೆಯ ಸಹಾಯಕ ನಿರ್ದೇಶಕ ಮನೀಶ್‌ ಸಲಹೆ ನೀಡಿದರು.

ಮಂಗಳವಾರ ವಿಎಸ್‌ಎಸ್‌ ಸಭಾಂಗಣದಲ್ಲಿ ನಡೆದ ಸೀತೂರು ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಮಾತನಾಡಿ ದರು. ರೈತರು ನರೇಗ ಯೋಜನೆಯಡಿ ವೈಯ್ಯಕ್ತಿಕ ಹಾಗೂ ಸಾಮೂಹಿಕ ಕಾಮಗಾರಿ ಮಾಡಬಹುದು. ದನದ ಕೊಟ್ಟಿಗೆ, ಕೃಷಿ ಹೊಂಡ, ಕೆರೆ, ಕಾಲುವೆ ಮುಂತಾದ ಕಾಮಗಾರಿ ಮಾಡಬಹುದು ಎಂದರು.

ಸಭೆಯಲ್ಲಿ ಭಾಗವಹಿಸಿದ್ದ ಪ್ರಗತಿಪರ ಕೃಷಿಕ ಪಿ.ಕೆ.ಬಸವರಾಜ್ ಮಾತನಾಡಿ, ತಾಲೂಕಿನ 8 ಇಲಾಖೆಗಳ ಅಧಿಕಾರಿಗಳು ಗ್ರಾಮ ಸಭೆಗೆ ಆಗಮಿಸಿಲ್ಲ. ಕೆಲವು ಸರ್ಕಾರಿ ಇಲಾಖೆಗಳಲ್ಲಿ ಮಧ್ಯವರ್ತಿಗಳ ಹಾವಳಿ ಜಾಸ್ತಿಯಾಗಿದೆ. ರೈತರು ತಮ್ಮ ಕೆಲಸಗಳಿಗಾಗಿ ತಾಲೂಕು ಕಚೇರಿ ಹಾಗೂ ವಿವಿಧ ಇಲಾಖೆಗಳಿಗೆ ಅಲೆಯಬೇಕಾಗಿದೆ ಎಂದು ದೂರಿದರು.

ಗ್ರಾಮ ಆಡಳಿತಾಧಿಕಾರಿ ವಿಶ್ವನಾಥ್‌ ಸಭೆಗೆ ಮಾಹಿತಿ ನೀಡಿ, ರೈತರು ಇನ್ನೂ ಪಹಣಿಗೆ ಆಧಾರ್ ಜೋಡಣೆ ಬಾಕಿ ಉಳಿಸಿ ಕೊಂಡಿದ್ದಾರೆ. ಉಳಿದ ರೈತರು ತಕ್ಷಣ ಪಹಣಿಗೆ ಆಧಾರ್ ಜೋಡಣೆ ಮಾಡಿಸಿಕೊಳ್ಳಬೇಕು.ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರ ಒಂದು ತಿಂಗಳ ಒಳಗೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸಿಗಲಿದೆ. ಒಂದು ತಿಂಗಳ ನಂತರವಾದರೆ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿ ಪಡೆಯಬಹುದು ಎಂದರು.

ಬೆಳ್ಳೂರು ಸಮುದಾಯ ಆರೋಗ್ಯ ಅಧಿಕಾರಿ ಕೆ.ಎಚ್‌.ನಾಗವೇಣಿ ಮಾತನಾಡಿ, ಈ ವರ್ಷ ಮಳೆ ಪ್ರಮಾಣ ಜಾಸ್ತಿ ಗಿರುವುದರಿಂದ ನಿಂತ ನೀರಿನಲ್ಲಿ ಸೊಳ್ಳೆ ಉತ್ಪತ್ತಿಯಾಗಿ ಡೆಂಘೀ ಖಾಯಿಲೆ ಹರಡುವ ಸಾಧ್ಯತೆ ಇದೆ. ಗ್ರಾಮಸ್ಥರು ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಭೆ ಅಧ್ಯಕ್ಷತೆಯನ್ನು ಸೀತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಎಸ್‌.ರೇಖಾ ವಹಿಸಿದ್ದರು. ಉಪಾಧ್ಯಕ್ಷೆ ಪ್ರೇಮ, ಸದಸ್ಯರಾದ ಎಚ್.ಇ.ದಿವಾಕರ, ಎಸ್‌.ಉಪೇಂದ್ರರಾವ್‌, ದಾಮಿನಿ, ಎನ್‌.ಪಿ.ರಮೇಶ್‌, ಸುಜಾತ, ವಿಜಯ, ಸಿದ್ದಪ್ಪಗೌಡ , ಪಿಡಮೊ ಶ್ರೀನಿವಾಸ್‌ ಉಪಸ್ಥಿತರಿದ್ದರು.

ಗ್ರಾಮ ಸಭೆಯಲ್ಲಿ ಕೃಷಿ ಇಲಾಖೆ, ಆರೋಗ್ಯ ಇಲಾಖೆ, ಕಂದಾಯ,ತೋಟಗಾರಿಕೆ,ಸಾಮಾಜಿಕ ಅರಣ್ಯ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದು ತಮ್ಮ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ವಿವರಿಸಿದರು.

Share this article