ಕಲೆಯಿಂದ ಲೋಕಗ್ರಹಿಕೆ, ಆಂತರ್ಯದ ಜಾಗೃತಿ: ಲಕ್ಷ್ಮೀಶ ತೋಳ್ಪಾಡಿ

KannadaprabhaNewsNetwork |  
Published : Feb 29, 2024, 02:00 AM IST
ತುಮಕೂರು ವಿವಿಯ ಕನ್ನಡ ಹಾಗೂ ಇಂಗ್ಲಿಷ್ ವಿಭಾಗಗಳು ಜಂಟಿಯಾಗಿ ಆಯೋಜಿಸಿದ್ದ ‘ಕಲೆಯ ಮೂಲಕ ಲೋಕಗ್ರಹಿಕೆ’ ಎಂಬ ಪರಿಕಲ್ಪನೆಯಲ್ಲಿ ‘ಸಹಿತ’ ಸಾಹಿತ್ಯೋತ್ಸವಕ್ಕೆ ಹಿರಿಯ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಬುಧವಾರ ಚಾಲನೆ ನೀಡಿದರು. ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಪ್ರೊ.ನಿತ್ಯಾನಂದ ಬಿ.ಶೆಟ್ಟಿ, ಪ್ರೊ.ಎಚ್.ಕೆ.ಶಿವಲಿಂಗಸ್ವಾಮಿ ಇದ್ದಾರೆ. | Kannada Prabha

ಸಾರಾಂಶ

ವಿಪರ್ಯಾಸಗಳನ್ನು ಗ್ರಹಿಸಿ ಬೆಳೆಯುವ ಕಲೆ ಲೋಕಗ್ರಹಿಕೆಯನ್ನು ಕೇಂದ್ರೀಕರಿಸಿ ಜಾಗೃತಿಯ ಚಲನೆಯನ್ನುಅಂತರ್ಯದಲ್ಲಿ ಸೃಷ್ಟಿಸುತ್ತದೆ ಎಂದು ಹಿರಿಯ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ವಿಪರ್ಯಾಸಗಳನ್ನು ಗ್ರಹಿಸಿ ಬೆಳೆಯುವ ಕಲೆ ಲೋಕಗ್ರಹಿಕೆಯನ್ನು ಕೇಂದ್ರೀಕರಿಸಿ ಜಾಗೃತಿಯ ಚಲನೆಯನ್ನುಅಂತರ್ಯದಲ್ಲಿ ಸೃಷ್ಟಿಸುತ್ತದೆ ಎಂದು ಹಿರಿಯ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.

ತುಮಕೂರು ವಿವಿಯ ಸ್ನಾತಕೋತ್ತರ ಡಿವಿಜಿ ಕನ್ನಡ ಅಧ್ಯಯನ ಕೇಂದ್ರ ಹಾಗೂ ಇಂಗ್ಲಿಷ್ ಸಾಹಿತ್ಯ ಅಧ್ಯಯನ ವಿಭಾಗವು ಜಂಟಿಯಾಗಿ ಆಯೋಜಿಸಿದ್ದ ‘ಕಲೆಯ ಮೂಲಕ ಲೋಕಗ್ರಹಿಕೆ’ ಎಂಬ ಪರಿಕಲ್ಪನೆಯಲ್ಲಿ ‘ಸಹಿತ’ ಸಾಹಿತ್ಯೋತ್ಸವವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ಅರ್ಥವಾಗದೇ ಇರುವ ಅರ್ಥವಾಗಬೇಕಿರುವ ವಿಷಯವೇ ಲೋಕಗ್ರಹಿಕೆ. ಕಲೆಯ ಸಂಗತಿ ಚಲನೆಯಾಗಿದೆ. ಮಾತಿನಿಂದ, ಹಕ್ಕಿಯ ಸ್ವರದಿಂದ, ಅಥವಾ ಯಾವುದರಿಂದಲಾದರೂ ಒಂದು ಚಲನೆ ಉಂಟಾಗಲಿದೆ. ಅದುವೇ ಜೀವ ಕಲೆ-ಕಳೆ. ಅನುಭವದಿಂದ ಬಾಗುವ, ಹೊಸ ಅರ್ಥದ ಸಂಚಾರವೇ ಕಲೆಯಾಗಿದೆ ಎಂದರು.

ನೆಮ್ಮದಿಯ ಕಾಲದಲ್ಲಿ ಉಂಟಾಗದ ಜಾಗೃತಿಯು ಕಷ್ಟ, ಸಂಕಟಗಳಲ್ಲಿ ಮೂಡುತ್ತದೆ. ಸಂಕಟದಲ್ಲಿ ಉಂಟಾದ ಜಾಗೃತಿಯೇ ಕಲೆಯ ನಿಯಮ. ಕಷ್ಟಕಾಲದಲ್ಲಿಯೇ ರಾಮಾಯಣ, ಮಹಾಭಾರತ ಗ್ರಂಥಗಳು ವರ್ಣಿತವಾದದ್ದು, ಚಿತ್ರಿತವಾದದ್ದು. ಕಲೆಯ ಅನಾವರಣದಿಂದ ಕಾಲ ಈ ರೀತಿ ಇರಬಾರದು ಎಂದು ತೋರಿಸುತ್ತದೆ. ಲೋಕಕ್ಕೆ ಕಟ್ಟೆ ಇರಬಾರದು ಎಂಬುದನ್ನು ಪ್ರಸ್ತುತ ಪಡಿಸುತ್ತದೆ ಕಲೆ ಎಂದು ತಿಳಿಸಿದರು.

ಬದುಕಿನಲ್ಲಿ ಉದ್ವಿಗ್ನತೆಯನ್ನು ಬಯಸಬೇಕು. ವಿಶೇಷವಾದ ಸಾಮರ್ಥ್ಯವನ್ನು ಪ್ರಕಟಪಡಿಸಲು ನಿರ್ದಿಷ್ಟ ಕಾಲವನ್ನು ಕಲೆ ಬೇಡುತ್ತದೆ. ಸಂಬಂಧವನ್ನು ಬೆಸೆಯುವುದೇ ಕಲೆಯಾಗಿ ಮಾರ್ಪಾಡಾಗುತ್ತದೆ. ಪ್ರಜ್ಞಾಪೂರಕವಾಗಿ ಮಾತಾಡುವ ಬದಲು ಪ್ರಜ್ಞೆಯಿಂದ ಮಾತಾಡುವ ಔಚಿತ್ಯವನ್ನು ಉಣಬಡಿಸುತ್ತದೆ ಎಂದರು.

ಪ್ರಾಚೀನಗ್ರಂಥ, ಉಪನಿಷತ್ತುಗಳಲ್ಲಿ ‘ಹೀಗಲ್ಲ, ಇದಲ್ಲ. ನಾನು ಬಯಸಿದ್ದು ಇದನ್ನಲ್ಲ’ ಎನ್ನುವ ಮಾತಿದೆ. ನಿರಾಕರಣೆಯ ಸಂದರ್ಭ ಮನಸಿನಲ್ಲಿ ಉಂಟಾದಾಗ ನಮಗೆ ಗೊತ್ತಿರುವುದನ್ನೇ ಕೇಳಲು ಬಯಸುತ್ತಿವೆಯೇ ಹೊರತು ಹೊಸದನ್ನು ಸ್ವೀಕರಿಸಲು ಬಯಸುವುದಿಲ್ಲ. ನಮಗೆ ತಿಳಿಯದ ಬೇರೆಯೇ ಒಂದು ವಿಷಯವಿದೆ ಎಂದು ತಿಳಿಯುವುದು ಕಲೆಯೊಂದಿಗೆ ಮಿಳಿತವಾದಾಗ ಮಾತ್ರ ಎಂದು ತಿಳಿಸಿದರು.

ಲೋಕಗ್ರಹಿಕೆಯನ್ನು ಸೂಕ್ಷ್ಮ್ಮತೆಯಿಂದ ಮಾನ್ಯ ಮಾಡಬಾರದು. ನಮಗೆ ಗೊತ್ತಿಲ್ಲದ ಬೇರೊಂದು ಸಂಗತಿ ಹೊಳೆದಾಗ ಮಾತ್ರಕಲೆಯ ಪ್ರಸ್ತುತಿಯಾಗುತ್ತದೆ. ವಿಕ್ರಮಾರ್ಜುನ ವಿಜಯದಲ್ಲಿ ಪಂಪನು ಹೇಳುವುದು ‘ನೆನೆಯುವುದಾದರೆ ಕರ್ಣನನ್ನು ನೆನೆ’ ಎಂದು. ಅರ್ಜುನನ್ನು ಕುರಿತು ಬರೆದ ಕಾವ್ಯದಲ್ಲಿ ಇನ್ನೊಬ್ಬನನ್ನು ನೆನೆಯುತ್ತಾನೆ ಕವಿ ಪಂಪ. ಇದುಕಲೆಯ ಸೃಷ್ಟಿ ಎಂದರು.

ಲೋಕವನ್ನು ಮೀರಿದ ಭಾವಸಂಗತಿ ಅಂತರ್ಯದಲ್ಲಿ ಮೀಟಿದರೆ ಕಲೆಯ ಸೃಷ್ಟಿಯಾಗಲಿದೆ. ಭಾಷೆ ಅಂತರಂಗದ ಪ್ರಪಂಚವನ್ನು ತೋರಬೇಕಾದರೆ ಕಲೆಯ ಮಾಯೆಯೊಳಗೆ ಒಳಗಾಗಬೇಕು. ಜಡಭಾಷೆಯನ್ನು ಬಳಸಿಕೊಂಡು ಭಾವನೆಯನ್ನು ಸೃಷ್ಟಿಸುವುದೇ ಕಲೆ. ವಚನಕಾರರು ಬಳಸಿದ್ದು ಲೋಕವನ್ನು ‘ಬಯಲು’ ಎಂದು. ಅಧ್ಯಾತ್ಮ ಲೋಕದ ಸಾಧಕರು ತೋರಿದ್ದು ‘ಲೋಕ ಇರಬೇಕಾದದ್ದು ಹೀಗಲ್ಲ’ ವೆಂದು. ಗ್ರಹಿಕೆಯ ಆಳವನ್ನು ವಿಭಿನ್ನವಾಗಿಸುವುದೇ ಕಲೆಯಾಗಿದೆ ಎಂದರು.

ಮಹಾಭಾರತವನ್ನು ನೋಡಿದಾಗ ಗೆದ್ದವನ ದುಃಖವನ್ನು ಕಾಣಬಹುದು. ಇದೇ ಕಲೆಯ ಆಸ್ತಿ. ಕಲೆ ಗೆದ್ದವನ ಕಂಬನಿಯನ್ನು ಹರಸುತ್ತದೆ, ಸೋತವನ ದುಃಖವನ್ನು ಒರೆಸುತ್ತದೆ. ಇನ್ನೊಬ್ಬರ ಮೇಲೆ ಪರಿಣಾಮ ಮಾಡುವ ಸಾಮರ್ಥ್ಯವನ್ನು ಕಲೆ ಒದಗಿಸುತ್ತದೆ. ಕಲೆ ಮೊನಚಾಗುವುದಕ್ಕಿಂತಲೂ ಅರಳುವಂತಾಗಬೇಕು ಎಂದು ಹೇಳಿದರು.

ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಮಾತನಾಡಿ, ವಿದ್ಯಾರ್ಥಿಗಳಿಗೆ ಸಾಹಿತ್ಯದ ಕೊರತೆಯಿರಬಾರದು. ಕಲೆ ಸಾಹಿತ್ಯಗಳಿಂದ ಮನಸ್ಸು ಅರಳುತ್ತದೆ. ಜ್ಞಾನಗ್ರಹಿಕೆ-ಲೋಕಗ್ರಹಿಕೆಗಾಗಿಯೇ ವಿಶ್ವವಿದ್ಯಾನಿಲಯಗಳು ಇರುವುದು ಎಂದರು.

ಮೊದಲ ದಿನದ ಸಾಹಿತ್ಯೋತ್ಸವದಲ್ಲಿ ಮುಂಬೈ ಐಐಟಿಯ ಭಾರತೀಯ ತತ್ವಶಾಸ್ತ್ರದ ಪ್ರಾಧ್ಯಾಪಕ ಪ್ರೊ. ಮೃಣಾಲ್‌ಕೌಲ್ ‘ಭಾಷೆ ಮತ್ತು ಸಾಹಿತ್ಯ ಸಂಸ್ಕೃತಿ’ ಕುರಿತು, ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿವಿಯ ಸಮಾಜ ವಿಜ್ಞಾನ ನಿಕಾಯದ ಪ್ರಾಧ್ಯಾಪಕ ಪ್ರೊ.ಎ. ನಾರಾಯಣ ‘ಕರ್ನಾಟಕದ ರಾಜಕಾರಣ: ಭವಿಷ್ಯದ ಸಾಧ್ಯತೆ’ ಕುರಿತು ಮಾತನಾಡಿದರು. ನೀನಾಸಂ ರಂಗಭೂಮಿಕಲಾವಿದ ಜಿ.ಕೆ. ನಂದಕುಮಾರ್‌ ಕಥಾ ಪ್ರಸ್ತುತಿ ಪಡಿಸಿದರು. ಬೆಂಗಳೂರು ವಿವಿಯ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕಿ ಪ್ರೊ.ಕೆ.ಎಸ್. ವೈಶಾಲಿ ಸಂಗೀತ-ಸಂವಾದ ಕಾರ್ಯಕ್ರಮ ನಡೆಸಿದರು. ಹಿರಿಯ ಸಾಹಿತಿ ಜಯಂತ್‌ ಕಾಯ್ಕಿಣಿ ಉಪಸ್ಥಿತರಿದ್ದರು.

ಸಾಹಿತ್ಯೋತ್ಸವದ ಸಂಘಟಕರಾದ ಪ್ರೊ.ಎಚ್.ಕೆ. ಶಿವಲಿಂಗಸ್ವಾಮಿ ಸ್ವಾಗತಿಸಿದರು. ಪ್ರೊ. ನಿತ್ಯಾನಂದ ಬಿ. ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಗೀತಾ ವಸಂತ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್‌ಪಿಜಿ ಪೂರೈಕೆ ಸುಧಾರಣೆ: ಸಪ್ಲೈ ಶೇ.20ರಷ್ಟು ಏರಿಕೆ
ಬಾಗಲಕೋಟೆ, ದಾವಣಗೆರೆ ಕ್ಷೇತ್ರಕ್ಕೆ ಏ.9ಕ್ಕೆ ಉಪಸಮರ