ಅವಿಭಜಿತ ದ.ಕ. ಜಿಲ್ಲಾ ವಿಶ್ವಕರ್ಮ ಮಹಿಳಾ ಸಮಾವೇಶ

KannadaprabhaNewsNetwork |  
Published : Nov 24, 2025, 03:30 AM IST
ಅವಿಭಜಿತ ದ.ಕ ಜಿಲ್ಲಾ ವಿಶ್ವಕರ್ಮ ಮಹಿಳಾ ಸಮಾವೇಶ೩೦ ಮಂದಿಗೆ ಹೊಲಿಗೆ ಯಂತ್ರಗಳ ವಿತರಣೆ | Kannada Prabha

ಸಾರಾಂಶ

ಕಾಳಿಕಾಂಬಾ ಮಹಿಳಾ ಸಮಿತಿ ವತಿಯಿಂದ ರಜತ ಸಂಭ್ರಮದಂಗವಾಗಿ ಮೂಡುಬಿದಿರೆ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ಇತ್ತೀಚೆಗೆ ಅವಿಭಜಿತ ದ.ಕ. ಜಿಲ್ಲಾಮಟ್ಟದ ವಿಶ್ವಕರ್ಮ ಮಹಿಳಾ ಸಮಾವೇಶ ಸಂಪನ್ನಗೊಂಡಿತು.

ಮೂಡುಬಿದಿರೆ: ವಿಶ್ವಕರ್ಮರು ಕೆತ್ತಿದ ಶಿಲ್ಪಕಲೆಗಳಿಗೆ ಬೆಲೆಕಟ್ಟಲಾಗದು. ಆದರೆ ಅದನ್ನು ರಚಿಸಿದ ವ್ಯಕ್ತಿಗಳು ಮಾತ್ರ ಬೆಲೆಯಿಲ್ಲದ ಸ್ಥಿತಿಯಲ್ಲಿದ್ದಾರೆ. ಕಲೆಯನ್ನು ಅರಳಿಸುವವರನ್ನು ಕೂಲಿಕಾರ್ಮಿಕರನ್ನಾಗಿ ನೋಡುವ ಮನಸ್ಥಿತಿ ಸಮಾಜದಲ್ಲಿ ಬೇರೂರಿದೆ. ಇದನ್ನು ಹೋಗಲಾಡಿಸಬೇಕಾದರೆ ಆಧುನಿಕ ಶಿಕ್ಷಣ ಪಡೆದವರು ಪಂಚಕಸುಬುಗಳನ್ನು ಅವಲಂಬಿಸಿ ತಮ್ಮಲ್ಲಿರುವ ಕೌಶಲ್ಯ, ತಾಂತ್ರಿಕತೆಗೆ ಉದ್ಯಮದ ಸ್ವರೂಪವನ್ನು ನೀಡಬೇಕು ಎಂದು ಐಎಎಸ್, ಕೆಎಎಸ್ ತರಬೇತುದಾರೆ, ರಾಜ್ಯ ಶಿಕ್ಷಾ ಫೌಂಡೇಶನ್‌ನ ನಿರ್ದೇಶಕಿ ಅನಿತಾಲಕ್ಷ್ಮೀ ಆಚಾರ್ಯ ಹೇಳಿದರು.ಇಲ್ಲಿನ ಕಾಳಿಕಾಂಬಾ ಮಹಿಳಾ ಸಮಿತಿ ವತಿಯಿಂದ ರಜತ ಸಂಭ್ರಮದಂಗವಾಗಿ ಇಲ್ಲಿನ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಅವಿಭಜಿತ ದ.ಕ. ಜಿಲ್ಲಾಮಟ್ಟದ ವಿಶ್ವಕರ್ಮ ಮಹಿಳಾ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠದ ಶ್ರೀ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ಸಂಪತ್ತನ್ನು ಸದ್ವಿನಿಯೋಗ ಮಾಡಬೇಕು. ಇಲ್ಲದಿದ್ದರೆ ಅದು ಆಪತ್ತಾಗಿ ಪರಿಣಮಿಸುತ್ತದೆ. ಮಹಿಳೆಯರು ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವನ್ನು ಕಲಿಸಬೇಕು. ಅಲ್ಲಲ್ಲಿ ಬಾಲ ಸಂಸ್ಕಾರ ಕೇಂದ್ರಗಳನ್ನು ತೆರೆಯಬೇಕು. ಪ್ರತಿಯೊಂದು ಮನೆಯೂ ಸಂಸ್ಕಾರದ ಕೇಂದ್ರವಾಗಬೇಕು ಎಂದರು.ಅರೆಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಪೀಠದ ಶ್ರೀ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಮಕ್ಕಳಿಗೆ ಧರ್ಮ, ಸಂಸ್ಕೃತಿಯ ಶಿಕ್ಷಣ ನೀಡುವ ಮೂಲಕ ಸತ್ಪ್ರಜೆಗಳಾಗಿ ರೂಪಿಸಬೇಕು ಎಂದು ಹೇಳಿದರು.ಕಾಳಿಕಾಂಬಾ ಮಹಿಳಾ ಸಮಿತಿ ಅಧ್ಯಕ್ಷೆ ಶಾಂತಲಾ ಸೀತಾರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯಅತಿಥಿಗಳಾಗಿ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ಕೆ. ಬಾಲಕೃಷ್ಣ ಆಚಾರ್ಯ, ಮಾಜಿ ಆಡಳಿತ ಮೊಕ್ತೇಸರರಾದ ಡಾ. ಜಿ. ರಾಮಕೃಷ್ಣ ಆಚಾರ್ಯ, ಸುಂದರ ಆಚಾರ್ಯ, ಜಯಕರ ಆಚಾರ್ಯ, ಆನೆಗುಂದಿ ಸಂಸ್ಥಾನ ಮಾತೃಮಂಡಳಿಯ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ, ರೂವಾರಿ ಡಿಜಿಟಲ್ ಪತ್ರಿಕೆಯ ಸಂಪಾದಕಿ ರತ್ನಾವತಿ ಜೆ. ಬೈಕಾಡಿ ಹಾಗೂ ಕಾಳಿಕಾಂಬಾ ದೇವಾಲಯಗಳ ಅಧೀನದಲ್ಲಿರುವ ೧೪ ಮಹಿಳಾ ಮಂಡಳಿಗಳ ಅಧ್ಯಕ್ಷರು ಭಾಗವಹಿಸಿದರು.

ಹೊಲಿಗೆ ಯಂತ್ರಗಳ ವಿತರಣೆ:ರಜತ ಸಂಭ್ರಮದಂಗವಾಗಿ ಅರ್ಹ ೩೦ ಮಂದಿ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ವಿಶ್ವಕರ್ಮ ಮಹಿಳೆಯರಿಗಾಗಿ ಏರ್ಪಡಿಸಿದ ಅವಿಭಜಿತ ದ.ಕ. ಜಿಲ್ಲಾಮಟ್ಟದ ಸಾಂಸ್ಕೃತಿಕ ಮತ್ತು ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಿತಿಯ ಮಾಜಿ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಕ್ಷೇತ್ರದ ಮೊಕ್ತೇಸರರಾದ ಶಿವರಾಮ ಆಚಾರ್ಯ, ಯೋಗೀಶ್ ಆಚಾರ್ಯ, ಕಾಳಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಶ್ರೀನಾಥ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಂಧ್ಯಾ ಜಯಕರ ಆಚಾರ್ಯ ವಂದಿಸಿದರು. ಭಕ್ತಿಶ್ರೀ ಆಚಾರ್ಯ, ರಶ್ಮಿತಾ ಅರವಿಂದ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ. ರೈ ಮತ್ತಿತರ ಗಣ್ಯರು ಭಾಗವಹಿಸಿದರು.

PREV

Recommended Stories

ನಿವೃತ್ತಿ ಜೀವನ ಬವಣೆ ರಹಿತ ಉತ್ಸಾಹದಾಯಕವಾಗಿರಲಿ: ಡಾ.ಸಿದ್ದು ದಿವಾನ
ಪ್ರಿಯದರ್ಶಿನಿ ಕೋ-ಆಪರೇಟಿವ್‌ ಸೊಸೈಟಿ ಸಹಕಾರ ಸಪ್ತಾಹ ಸಮಾರೋಪ