ಕನ್ನಡಪ್ರಭ ವಾರ್ತೆ ಹಾವೇರಿ
ಉದ್ಯೋಗ ಮೇಳದಲ್ಲಿ ವಿವಿಧ ೩೦ಕ್ಕೂ ಅಧಿಕ ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದವು. ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ೫೩೦೦ಕ್ಕೂ ಅಧಿಕ ಯುವಕ, ಯುವತಿಯರು ಹೆಸರು ನೋಂದಾಯಿಸಿಕೊಂಡಿದ್ದರು. ಅದರಲ್ಲಿ ೩೭೦೦ಕ್ಕೂ ಅಧಿಕ ಜನ ಸಂದರ್ಶನಕ್ಕೆ ಹಾಜರಾಗಿದ್ದರು. ಇದರಲ್ಲಿ ೨೨೪೫ ಜನರಿಗೆ ಸ್ಥಳದಲ್ಲಿಯೇ ಉದ್ಯೋಗದ ಆದೇಶ ಪ್ರತಿ ನೀಡಲಾಯಿತು.
ಇದಕ್ಕೂ ಮುನ್ನ ನಡೆದ ಉದ್ಯೋಗ ಮೇಳದ ಉದ್ಘಾಟನಾ ಕಾರ್ಯಕ್ರಮಕ್ಕೆ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಚಾಲನೆ ನೀಡಿ ಮಾತನಾಡಿ, ಇಂದಿನ ದಿನದಲ್ಲಿ ನಿರುದ್ಯೋಗ ಸಮಸ್ಯೆಯು ಅನೇಕ ವಿದ್ಯಾವಂತ ಯುವಕರನ್ನು ಕಾಡುತ್ತಿದೆ. ಈ ಸಮಸ್ಯೆಗಳಿಗೆ ಉದ್ಯೋಗ ಮೇಳವು ಸಹಕಾರಿಯಾಗಿದ್ದು, ನೋಂದಾಯಿತ ಯುವಕ, ಯುವತಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಶರಣಬಸವ ಅಂಗಡಿ ಲಾ ಫರ್ಮ್ನ ಚೇರಮನ್ ಶರಣಬಸವ ಅಂಗಡಿ ಮಾತನಾಡಿ, ಇಂದಿನ ದಿನಗಳಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಆದ್ದರಿಂದ ನಿರುದ್ಯೋಗ ಯುವಕ, ಯುವತಿಯರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಉದ್ಯೋಗ ಮೇಳ ಏರ್ಪಡಿಸಲಾಗಿದೆ. ಈ ಮೂಲಕ ಉದ್ಯೋಗದಾತರು ಹಾಗೂ ನಿರುದ್ಯೋಗಿಗಳ ನಡುವೆ ಸಂಪರ್ಕ ಕೊಂಡಿಯಾಗಿ ನಾವು ಸೇವೆ ಮಾಡುತ್ತಿದ್ದೇವೆ ಎಂದರು.
ಪ್ರಮುಖರಾದ ಶಿವಬಸಪ್ಪ ಮುಷ್ಟಿ, ರಾಜಪ್ಪ ಮಾಗನೂರ, ಪಿ.ಡಿ. ಶಿರೂರ, ವೀರಣ್ಣ ಅಂಗಡಿ ಇತರರು ಇದ್ದರು. ಸವಿತಾ ಹಿರೇಮಠ ಸ್ವಾಗತಿಸಿದರು. ಭಾವನಾ ಎಚ್. ಪ್ರಾರ್ಥಿಸಿದರು. ತೇಜಪ್ಪ ಮಡಿವಾಳರ ನಿರೂಪಿಸಿದರು.