ಕನ್ನಡಪ್ರಭ ವಾರ್ತೆ ಹಾಸನ
ಕೇಂದ್ರ ಸರ್ಕಾರ ವಕ್ಫ್ ಮಸೂದೆ ತಿದ್ದುಪಡಿ ವಿರೋಧಿಸಿ ಹಾಸನ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಶನಿವಾರ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ನಡೆಯಿತು. ವಕ್ಫ್ ಬೋರ್ಡ್ ಮಸೂದೆ ತಿದ್ದುಪಡಿ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಇದೇ ವೇಳೆ ಎಸ್.ಡಿ.ಪಿ.ಐ. ಜಿಲ್ಲಾಧ್ಯಕ್ಷ ಸಿದ್ದಿಕ್ ಆನೆಮಹಲ್, ಟಿಪ್ಪು ಸಂಘರ್ಷ ಸಮಿತಿ ಅಧ್ಯಕ್ಷ ಮುಬಾಷೀರ್ ಸಹಮದ್, ಸಮೀರ್ ಖಾನ್ ಹಾಗೂ ಸಾಹಿರಭಾನು ಮಾತನಾಡಿ, ಪ್ರತಿಯೊಬ್ಬ ಭಾರತೀಯ ಪ್ರಜೆಗಳಿಗೆ ಧಾರ್ಮಿಕ ಹಾಗೂ ಆಸ್ತಿಗಳನ್ನು ಹೊಂದುವ ಸಂವಿಧಾನ ಹಕ್ಕು ನೀಡಿದೆ. ಪ್ರತಿಯೊಬ್ಬ ಭಾರತೀಯರು ತಾನು ಗಳಿಸಿದ ಆಸ್ತಿಯನ್ನು ಜೊತೆಗೆ ತನ್ನ ಸಮುದಾಯದ ಒಳಿತು ಅಭಿವೃದ್ಧಿಗಳಾದ ಶಿಕ್ಷಣ, ಜನಪರ ಕಾರ್ಯಕ್ರಮಗಳು, ಧರ್ಮದ ಆಚರಣೆಗಳಾದ ಮಂದಿರ ಮಠಗಳು ರುದ್ರ ಭೂಮಿಗಳು ಸಮುದಾಯ ಭವನಗಳನ್ನು ನಿರ್ಮಿಸುವ, ಸಮುದಾಯದ ಆಸ್ತಿ ಹೊಂದುವ ಹಾಗೂ ಅದರ ನಿರ್ವಹಣೆಗಾಗಿ ಮುಜರಾಯಿ ಸರ್ಕಾರದಿಂದ ಮುಜರಾಯಿ ಇಲಾಖೆ ಅಸ್ತಿತ್ವದಲ್ಲಿದೆ. ಇದರಂತೆ ಭಾರತದ ಇನ್ನು ಅನೇಕ ಧರ್ಮಗಳು, ಸಮುದಾಯಗಳ ತಮ್ಮ ತಮ್ಮ ಧರ್ಮದ ಅಭಿವೃದ್ಧಿಗಾಗಿ ಆಸ್ತಿಗಳನ್ನು ಹೊಂದಿರುತ್ತಾರೆ. ಮುಸ್ಲಿಂ ಸಮುದಾಯದ ಬಡವರು, ವಿದ್ಯಾವಂತರು, ಅನಕ್ಷರಸ್ಥರು, ವ್ಯಾಪಾರಿಗಳು, ಶ್ರೀಮಂತರು, ಮಕ್ಕಳಿಲ್ಲದ ದಂಪತಿಗಳು ತಾವು ಗಳಿಸಿದ ಅದಾಯದ ಒಂದು ಭಾಗ ತಮ್ಮ ಧರ್ಮದ ಅಭಿವೃದ್ಧಿ, ಶಿಕ್ಷಣ ಸಮುದಾಯಭವನ ಆಸ್ಪತ್ರೆಗಳು ಜನಪರ ಯೋಜನೆಗಳು, ಮಸೀದಿ, ದರ್ಗಾ, ಮದರಸ, ಖಬ್ರಸ್ತಾನ್, ಇದ್ರಾಗಳಂತಹ ಅನೇಕ ಧಾರ್ಮಿಕ ಆಸ್ತಿಗಳು ಹೊಂದಿರುತ್ತದೆ. ಇದು ಶತಶತಮಾನಗಳ ಭಾರತದ ಇತಿಹಾಸದ ಪರಂಪರೆಯ ಭಾಗವಾಗಿದೆ ಎಂದು ಹೇಳಿದರು.
ಆದರೆ ಇತ್ತೀಚಿನ ದಿನಗಳಲ್ಲಿ ವಕ್ಫ್ ಮಸೂದೆ ತಿದ್ದುಪಡಿ ೨೦೨೪ ಜಾರಿಗೊಳಿಸಿ ವಕ್ಫ್ ಬೋರ್ಡ್ನ ಧ್ಯೇಯೋದ್ದೇಶಗಳನ್ನು ನಿರ್ನಾಮಗೊಳಿಸುವ ಹುನ್ನಾರ ನಡೆಸುತ್ತಿದ್ದಾರೆ. ಇವರ ತಿರ್ಮಾನವನ್ನು ವಿರೋಧಿಸಿ ಭಾರತೀಯ ಮುಸ್ಲಿಮರು ದೇಶಾದ್ಯಂತ ಹೋರಾಟ ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಅವರ ಹೋರಾಟದ ಬೆಂಬಲ್ಲಕ್ಕೆ ಹಾಸನ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟ ಬೆಂಬಲಿಸುತ್ತದೆ ಎಂದು ಹೇಳಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಅಮೀರ್ ಜಾನ್, ಸಂಚಾಲಕ ಫೈರೋಜ್ ಪಾಷ, ಆದಿಲ್ ಪಾಶ, ನವೀದ್ ಅಹಮದ್, ಟಿಪ್ಪು ಸಂಘರ್ಷ ಸಮಿತಿ ಅಧ್ಯಕ್ಷ ಮುಬಾಷೀರ್ ಸಹಮದ್, ಆದಿಲ್ ಪಾಶ, ಸೈಯದ್ ಅನ್ಸರ್, ಅಮೀರ್ ಖಾನ್, ಸಮೀರ್, ಇತರರು ಉಪಸ್ಥಿತರಿದ್ದರು.