ವಿವಿ ಬಿಸಿಯೂಟ ಯೋಜನೆ ಅನ್ನದಾಸೋಹ ಪ್ರತೀಕ

KannadaprabhaNewsNetwork | Published : Apr 10, 2025 1:02 AM

ಸಾರಾಂಶ

ಸಿದ್ದಗಂಗಾ ಶ್ರೀಗಳ ನಾಡಿನಲ್ಲಿ ಅನ್ನದಾಸೋಹಕ್ಕೆ ಎಂದಿಗೂ ಕೊರತೆ ಉಂಟಾಗುವುದಿಲ್ಲ ಎಂಬುದಕ್ಕೆ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ಮಧ್ಯಾಹ್ನದ ಭೋಜನ ಯೋಜನೆ ಪ್ರತ್ಯಕ್ಷ ಸಾಕ್ಷಿ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ತುಮಕೂರುಸಿದ್ದಗಂಗಾ ಶ್ರೀಗಳ ನಾಡಿನಲ್ಲಿ ಅನ್ನದಾಸೋಹಕ್ಕೆ ಎಂದಿಗೂ ಕೊರತೆ ಉಂಟಾಗುವುದಿಲ್ಲ ಎಂಬುದಕ್ಕೆ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ಮಧ್ಯಾಹ್ನದ ಭೋಜನ ಯೋಜನೆ ಪ್ರತ್ಯಕ್ಷ ಸಾಕ್ಷಿ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಅಭಿಪ್ರಾಯಪಟ್ಟರು.ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಅನ್ನಪೂರ್ಣೇಶ್ವರಿ ಯೋಜನೆಯನ್ನು ಬುಧವಾರ ವೀಕ್ಷಿಸಿ ಅವರು ಮಾತನಾಡಿದರು. ನಿಷ್ಕಲ್ಮಶವಾದ ಸೇವೆಯನ್ನು ಮಾಡುವುದಕ್ಕೆ ಇಂತಹದ್ದೇ ಕೆಲಸವೆಂದು ಇಲ್ಲ. ಅಧಿಕಾರವಿದ್ದಾಗ ಎಲ್ಲಾ ವರ್ಗದವರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು.

ದೇಶದಲ್ಲಿ ಸಾವಿರಾರು ಕೋಟಿಯನ್ನು ಗಳಿಸಿ ಅದನ್ನು ಏನು ಮಾಡಬೇಕು ಎಂದು ಯೋಚಿಸುವವರ ನಡುವೆ ಒಂದು ತುತ್ತು ಊಟಕ್ಕೂ ಸಹ ಪರದಾಡುವ ಪರಿಸ್ಥಿತಿ ಜನರಿದ್ದಾರೆ. ಪ್ರಧಾನ ಮಂತ್ರಿಯವರ ಆಶಯದಂತೆ ಹತ್ತು ವರ್ಷದಲ್ಲಿ ದೇಶದ 108 ಜಿಲ್ಲೆಗಳ ಸಾವಿರಾರು ಕುಟುಂಬಗಳನ್ನು ಬಡತನ ರೇಖೆಗಿಂತ ಮೇಲಕ್ಕೆ ತರಲಾಗಿದೆ ಎಂದರು.ತಮ್ಮ ವಿದ್ಯಾಭ್ಯಾಸಕ್ಕೆ ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳಿಗೆ ಇಂತಹ ವಿಭಿನ್ನವಾದ ಯೋಜನೆಯನ್ನು ತುಮಕೂರಿನಲ್ಲಿ ಕಳೆದ ಎರಡು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ. ಈ ಸ್ಥಳಕ್ಕೆ ಎಂತಹ ಜಿಪುಣ ಬಂದರೂ ಅವರಿಗೆ ದಾನ ಮಾಡುವ ಮನಸ್ಥಿತಿ ಸೃಷ್ಟಿಯಾಗುತ್ತದೆ ಎಂದರು. ಸಚಿವರು ವಿದ್ಯಾರ್ಥಿಗಳಿಗೆ ಊಟ ಬಡಿಸಿ, ತಾವೂ ಸಹಭೋಜನ ನಡೆಸಿದರು. ಪಾವಗಡ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಶ್ರೀಮತ್ ಜಪಾನಂದಜಿ ಮಹಾರಾಜ್, ತುಮಕೂರು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್, ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ, ವಿವಿಯ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಕುಲಸಚಿವೆ ನಾಹಿದಾ ಜುಮ್ ಜುಮ್, ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ, ಆಹಾರ ವಿತರಣ ಸಮಿತಿ ಸದಸ್ಯರಾದ ಆರ್. ಎಲ್. ರಮೇಶ್ ಬಾಬು, ಎಸ್. ನಾಗಣ್ಣ, ನಟರಾಜ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Share this article