ಅವೈಜ್ಞಾನಿಕ ಬೈಪಾಸ್‌ ರಸ್ತೆ ಖಂಡಿಸಿ ಕಾಮಗಾರಿಗೆ ತಡೆ

KannadaprabhaNewsNetwork |  
Published : Jul 23, 2025, 01:58 AM IST
ಬೈ ಪಾಸ್ ರಸ್ತೆ ಕಾಮಗಾರಿ ಕೆಲಸವನ್ನು ತಡೆದು ಪ್ರತಿಭಟನೆ ನಡೆಸುತ್ತೀರುವ ರೈತರು | Kannada Prabha

ಸಾರಾಂಶ

ಪ್ರತಿಭಟನಾ ಸ್ಥಳಕ್ಕೆ ಶಾಸಕ ಬಸವರಾಜು ಶಿವಗಂಗಾ ಭೇಟಿ ನೀಡಿ ಸಮಾಲೋಚನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣದಲ್ಲಿ ಯಾವುದೇ ಪರ್ಯಾಯ ವ್ಯವಸ್ಥೆ ಕೈಗೊಳ್ಳದೇ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯ ಭಾಗದಲ್ಲಿ ಹಾದುಹೋಗುವ ಚಿತ್ರದುರ್ಗ- ಶಿವಮೊಗ್ಗ ಬೈಪಾಸ್ ರಸ್ತೆ ನಿರ್ಮಾಣ ಖಂಡಿಸಿ, ಮಂಗಳವಾರ ಪಟ್ಟಣದ ನಾಗರೀಕರು, ರೈತರು ಕಾಮಗಾರಿ ತಡೆದು ಪ್ರತಿಭಟಿಸಿದರು.

ಪುರಸಭೆ ಸದಸ್ಯ ಕಾಫಿಪುಡಿ ಶಿವಾಜಿ ರಾವ್ ಮಾತನಾಡಿ, ಪಟ್ಟಣದಲ್ಲಿ ಸಂಗ್ರಹವಾಗುವ ಘನತ್ಯಾಜ್ಯವನ್ನು ವಿಲೇವಾರಿ ಮಾಡುವ ಘಟಕ, ಹಿಂದೂ ರುದ್ರಭೂಮಿ ಹಾಗೂ ನೂರಾರು ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಈ ರಸ್ತೆಯ ಮಧ್ಯಭಾಗದಲ್ಲಿ ಬೈಪಾಸ್ ರಸ್ತೆ ಹಾದು ಹೋಗಲಿದೆ. ಬೈ ಪಾಸ್ ರಸ್ತೆ ನಿರ್ಮಿಸಿದರೆ ಕಸ ವಿಲೇವಾರಿ ಘಟಕ, ರುದ್ರಭೂಮಿ ಹಾಗೂ ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಸಂಪರ್ಕ ಕಡಿತಗೊಳ್ಳಲಿದೆ ಎಂದು ಆಕ್ಷೇಪಿಸಿದರು.

ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಅಭಿಯಂತರರನ್ನು ವಿಚಾರಿಸಿದರೆ, ನಮಗೆ ನೀಡಿರುವ ರಸ್ತೆಯ ಪ್ಲಾನ್‌ನಲ್ಲಿ ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಫ್ಲೈ ಓವರ್ (ಸೇತುವೆ) ಆಗಲಿ, ಅಂಡರ್ ಪಾಸ್ ರಸ್ತೆ ನಿರ್ಮಾಣ ಮಾಡಲು ಅವಕಾಶ ಇಲ್ಲ ಎಂದು ಹೇಳುತ್ತಿದ್ದಾರೆ. ಈ ರೀತಿಯ ಅವೈಜ್ಞಾನಿಕ ರಸ್ತೆ ನಿರ್ಮಾಣ ಮಾಡಲು ನಾವು ಬಿಡುವುದಿಲ್ಲ ಎಂದು ವಿರೋಧಿಸಿದರು.

ನೂರಾರು ವರ್ಷಗಳಿಂದ ಈ ಭಾಗದ ಜನರು ಇದೇ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಬೈ ಪಾಸ್ ರಸ್ತೆ ನಿರ್ಮಾಣ ವೇಳೆ ಈ ರಸ್ತೆಯ ಮಧ್ಯಭಾಗದಲ್ಲಿ ಸುಮಾರು 100 ಅಡಿ ಆಳದ ಗುಂಡಿ ತೆಗೆದು ರಸ್ತೆ ನಿರ್ಮಾಣ ಮಾಡುವುದರಿಂದ ಈ ಭಾಗದ ಜನರ ಓಡಾಟಕ್ಕೆ ತೊಂದರೆಯಾಗಲಿದೆ. ಈ ಸಂಪರ್ಕ ರಸ್ತೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಿ. ಅಲ್ಲಿಯವರೆಗೂ ಬೈ ಪಾಸ್ ರಸ್ತೆ ಕಾಮಗಾರಿ ಮಾಡಲು ಬಿಡುವುದಿಲ್ಲ ಎಂದರು.

ಪ್ರತಿಭಟನೆಯಲ್ಲಿ ರೈತರಾದ ಬಿ.ಎಂ. ಕುಬೇಂದ್ರೋಜಿ ರಾವ್, ಶಿವಾಜಿ ರಾವ್, ಪುರಸಭಾ ಸದಸ್ಯ ಶ್ರೀಕಾಂತ್, ಇಮ್ರಾನ್, ಎಂ.ಅಣ್ಣೋಜಿ ರಾವ್ ಪವಾರ್, ಎಂ.ಬಿ. ಸತೀಶ್ ರಾವ್, ಗಣೇಶ್, ರವಿ, ವೀರಭದ್ರಪ್ಪ, ಭರತ್, ಕೋಟೋಜಿ ರಾವ್, ಎಂ.ಮಂಜುನಾಥ್, ರಾಕೇಶ್, ಉಮೇಶ್, ಅಂಬೋಜಿ ರಾವ್, ಅಣ್ಣಪ್ಪ, ಜಯಪ್ಪ, ರಾಮು, ಸೋಮಶೇಖರಪ್ಪ ಮೊದಲಾದವರು ಹಾಜರಿದ್ದರು. ಪರ್ಯಾಯ ವ್ಯವಸ್ಥೆ ಆಗೋವರೆಗೂ ಕಾಮಗಾರಿ ಸ್ಥಗಿತ: ಶಾಸಕ ಸೂಚನೆ

ಪ್ರತಿಭಟನಾ ಸ್ಥಳಕ್ಕೆ ಶಾಸಕ ಬಸವರಾಜು ವಿ. ಶಿವಗಂಗಾ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಈ ಭಾಗದ ಜನರು ಬೈ ಪಾಸ್ ರಸ್ತೆ ನಿರ್ಮಾಣದಿಂದ ಆಗುವ ತೊಂದರೆ ಬಗ್ಗೆ ನನ್ನ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ್ದು, ಸಂಪರ್ಕ ರಸ್ತೆಗೆ ಪರ್ಯಾಯ ವ್ಯವಸ್ಥೆ ಮಾಡುವವರೆಗೊ ಬೈ ಪಾಸ್ ರಸ್ತೆ ಕಾಮಗಾರಿ ಸ್ಥಗಿತಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ದಿಗ್ಗೇನಹಳ್ಳಿ ರಸ್ತೆ, ಬಿರೂರು ರಸ್ತೆಯಲ್ಲಿ ಬೈ ಪಾಸ್ ರಸ್ತೆ ಹಾದುಹೋಗಿದ್ದು, ಇವುಗಳು ಅಪಘಾತದ ವಲಯಗಳಾಗಿವೆ. ಬೈ ಪಾಸ್ ರಸ್ತೆ ಅವೈಜ್ಞಾನಿಕವಾಗಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಚಿವರನ್ನು ಭೇಟಿ ಮಾಡಿ ಸರಿಪಡಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಕೈಬಿಡಲಾಯಿತು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ