ಕಾರವಾರ:
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ೧೦ ವರ್ಷಕ್ಕೊಮ್ಮೆ ಆಧಾರ್ ತಿದ್ದುಪಡಿ ಮಾಡಿಕೊಳ್ಳಲು ತಿಳಿಸಿದ್ದು, ಹಲವರಲ್ಲಿ ಗೊಂದಲ ಉಂಟಾಗಿದೆ.ಎಲ್ಲಿ ಮಾಡಿಸಬೇಕು? ಏಕೆ ಮಾಡಿಸಬೇಕು? ಏತಕ್ಕಾಗಿ ಮಾಡಿಸಬೇಕು? ಎನ್ನುವ ಗೊಂದಲ ಸಾರ್ವಜನಿಕರಲ್ಲಿ ಉಂಟಾಗಿದೆ. ನುಸುಳುಕೋರರ ಬಗ್ಗೆ, ನಕಲಿ ಆಧಾರ್ ಮಾಡಿಸಿದವರ ಹಾಗೂ ಬ್ಯಾಂಕ್ ಖಾತೆಗಾಗಿ ವಿದೇಶಿಗರು ಮಾಡಿಸಿದ ಕಾರ್ಡ್ ಕುರಿತು ಮಾಹಿತಿ ಪಡೆದುಕೊಳ್ಳಲು ಆಧಾರ್ ಮಾಡಿಸಿ ೧೦ ವರ್ಷದ ಬಳಿಕ ಡಾಕ್ಯುಮೆಂಡ್ ಅಪ್ಡೆಟ್ ಮಾಡಲು ಯುಐಡಿಎಐ ಸೂಚಿಸಿದೆ.
ಇದು ಕೇವಲ ಡಾಕ್ಯುಮೆಂಟ್ ಅಪ್ಡೆಟ್ ಮಾಡಬೇಕಾಗಿದ್ದು, ಪಡಿತರ ಚೀಟಿ ಇದ್ದರೆ ಸಾಕಾಗುತ್ತದೆ. ಸರ್ಕಾರಿ ಯೋಜನೆಗಳ ದಾಖಲೆಗಳಿಗೆ ಆಧಾರ್ ಸಂಖ್ಯೆ ಅತ್ಯಂತ ಮುಖ್ಯವಾಗಿದ್ದು, ಅದನ್ನೇ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಕೊಳ್ಳಲು ಕೂಡಾ ಸರ್ಕಾರ ತಿಳಿಸಿದೆ.ಆಧಾರ್ ಹೊಂದಿದ ವ್ಯಕ್ತಿ ಅವರೇ ಆಗಿದ್ದಾರೆಯೇ? ಮಾಹಿತಿ ಸರಿಯಿದೆಯೇ ಎಂದು ತಿಳಿದುಕೊಳ್ಳಲು ಅಪ್ಡೆಟ್ ಜಾರಿಗೆ ತರಲಾಗಿದೆ. ಈ ಹಿಂದೆ ನಕಲಿ ಆಧಾರ್ ಕಾರ್ಡ್ ಮಾಡಿಕೊಂಡು, ಆಧಾರ್ ತಿದ್ದುಪಡಿ ಮಾಡಿಕೊಂಡು ಮೂಲ ವ್ಯಕ್ತಿಯ ಹೆಸರಿನ ಜಮೀನು ಮಾರಾಟ, ಮತದಾರ ಗುರುತಿನ ಚೀಟಿ ಪಡೆಯುವುದು, ದೇಶವನ್ನು ಅಕ್ರಮವಾಗಿ ಪ್ರವೇಶಿಸುವುದು ಹೀಗೆ ಹತ್ತು ಹಲವು ಕಾನೂನು ಬಾಹಿರ ಘಟನೆ ದೇಶದಲ್ಲಿ ನಡೆದಿದೆ. ಇದನ್ನು ತಪ್ಪಿಸಲು ಸಾಕಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದು, ಇದರ ಮತ್ತೊಂದು ಭಾಗವಾಗಿ ಆಧಾರ್ ಅಪ್ಡೆಟ್ ಕೂಡಾ ಆಗಿದೆ.
ಆ ವ್ಯಕ್ತಿಯೇ ಸ್ವತಃ ಆನ್ಲೈನ್ನಲ್ಲಿ ಮಾಡಿಕೊಳ್ಳಲು ಅವಕಾಶವಿದ್ದು, ಸಾಧ್ಯವಾಗದೇ ಇದ್ದವರು ಸಮೀಪದ ಆಧಾರ್ ತಿದ್ದುಪಡಿ ಕೇಂದ್ರಕ್ಕೆ ತೆರಳಿ ದಾಖಲೆ ನೀಡಿದರೆ ಅಪ್ಡೆಟ್ ಮಾಡಿಕೊಡುತ್ತಾರೆ. ಜನರು ಅನಗತ್ಯ ಗೊಂದಲಕ್ಕೊಳಗದೇ ಆಧಾರ್ ಮಾಡಿಸಿ ೧೦ ವರ್ಷ ದಾಟಿದವರು ಅಪ್ಡೆಟ್ ಮಾಡಿಕೊಳ್ಳಬೇಕಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಆಧಾರ್ ೧೦ ವರ್ಷಕ್ಕೊಮ್ಮೆ ಡಾಕ್ಯುಮೆಂಟ್ ಅಪ್ಡೆಟ್ ಮಾಡಿಕೊಳ್ಳಲು ಸೂಚಿಸಿದೆ. ಇದಕ್ಕೆ ಪಡಿತರ ಚೀಟಿಯಿದ್ದರೆ ಸಾಕಾಗುತ್ತದೆ. ಆನ್ಲೈನ್ನಲ್ಲೂ ಸ್ವತಃ ವ್ಯಕ್ತಿಯೇ ಮಾಡಿಕೊಳ್ಳಬಹುದಾಗಿದೆ ಎಂದು ಆಧಾರ್ ಜಿಲ್ಲಾ ಕೋಆರ್ಡಿನೇಟರ್ ಮಹಾಬಲೇಶ್ವರ ದೇಸಾಯಿ ಹೇಳಿದ್ದಾರೆ.