ಹಡಪದ ಅಪ್ಪಣ್ಣನ ಮೂರ್ತಿ ಪುನರ್ ಪ್ರತಿಷ್ಠಾಪಿಸಲು ಆಗ್ರಹ

KannadaprabhaNewsNetwork |  
Published : Apr 08, 2026, 03:30 AM IST
ಮುಂಡರಗಿ ತಾಲೂಕು ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದಿಂದ ಗ್ರೇಡ್ 2 ತಹಸೀಲ್ದಾರ್ ಕೆ. ರಾಧಾ ಅವರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಇತ್ತೀಚೆಗೆ ಬಸವಕಲ್ಯಾಣದಲ್ಲಿ ನಡೆದ ಹುನ್ನಾರದಿಂದಾಗಿ ಅಪ್ಪಣ್ಣನವರ ಅರಿವಿನ ಗವಿಯಲ್ಲಿ ಬೇರೊಬ್ಬ ಶರಣರ ಮೂರ್ತಿಯನ್ನು ಇಡುವ ಮೂಲಕ ಬಸವಣ್ಣನವರ ವಿಚಾರಧಾರೆ ಹಾಗೂ ಅಪ್ಪಣ್ಣನ ಅನುಯಾಯಿಗಳ ನಂಬಿಕೆಗೆ ದ್ರೋಹ ಎಸಗಿದ್ದಾರೆ ಎಂದು ಮುಖಂಡರು ಆರೋಪಿಸಿದರು.

ಮುಂಡರಗಿ: ಬಸವಕಲ್ಯಾಣದ ಬಸವಣ್ಣನವರ ಅರಿವಿನ ಮನೆಯ ಪಕ್ಕದಲ್ಲಿರುವ ಹಡಪದ ಅಪ್ಪಣ್ಣನವರ ಅರಿವಿನ ಗವಿಯಲ್ಲಿ ದುಷ್ಕರ್ಮಿಗಳು ಬೇರೆ ಯಾವುದೋ ಮೂರ್ತಿಯನ್ನು ಕೂರಿಸಿ ಹಡಪದ ಅಪ್ಪಣ್ಣ ಶರಣರಿಗೆ ಅವಮಾನ ಮಾಡಿದ್ದು, ಕೂಡಲೇ ಆ ಗವಿಯಲ್ಲಿ ಹಡಪದ ಅಪ್ಪಣ್ಣನವರ ಮೂರ್ತಿಯನ್ನು ಕೂರಿಸಬೇಕೆಂದು ಆಗ್ರಹಿಸಿ ತಾಲೂಕು ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದಿಂದ ಮಂಗಳವಾರ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ದೇವು ಹಡಪದ ಮಾತನಾಡಿ, ಅನುಭವ ಮಂಟಪಕ್ಕೆ ಬರುವವರು ಮೊದಲು ಅಪ್ಪಣ್ಣನವರನ್ನು ಕಂಡು ನಂತರ ಬಸವಣ್ಣನವರ ಹತ್ತಿರಕ್ಕೆ ಹೋಗಬೇಕಿತ್ತು. ಬಸವಣ್ಣನವರನ್ನು ಬಿಟ್ಟು ಅಪ್ಪಣ್ಣ, ಅಪ್ಪಣ್ಣನವರನ್ನು ಬಿಟ್ಟು ಬಸವಣ್ಣ ಇರುತ್ತಿರಲಿಲ್ಲ. ಆದರೆ ಇತ್ತೀಚೆಗೆ ಬಸವಕಲ್ಯಾಣದಲ್ಲಿ ನಡೆದ ಹುನ್ನಾರದಿಂದಾಗಿ ಅಪ್ಪಣ್ಣನವರ ಅರಿವಿನ ಗವಿಯಲ್ಲಿ ಬೇರೊಬ್ಬ ಶರಣರ ಮೂರ್ತಿಯನ್ನು ಇಡುವ ಮೂಲಕ ಬಸವಣ್ಣನವರ ವಿಚಾರಧಾರೆ ಹಾಗೂ ಅಪ್ಪಣ್ಣನ ಅನುಯಾಯಿಗಳ ನಂಬಿಕೆಗೆ ದ್ರೋಹ ಎಸಗಿದ್ದಾರೆ.

ಈ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಜರುಗಿಸುವಂತೆ ಹಡಪದ ಅಪ್ಪಣ್ಣ ಭಾರತಿ ಸ್ವಾಮಿಜಿ, ತಾವು ಹಾಗೂ ಬಸವಕಲ್ಯಾಣದ ಸಮಾಜದವರು ಸೇರಿ ಅನೇಕ ಬಾರಿ ಅಲ್ಲಿನ ತಹಸೀಲ್ದಾರ್ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳಿಗೆ, ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿ ಅವರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಲಾಗಿತ್ತು. ಈ ಕುರಿತು ಭಾಲ್ಕಿ ಸ್ವಾಮೀಜಿಯೊಬ್ಬರನ್ನು ಹೊರತುಪಡಿಸಿ ನಾಡಿನ ಯಾವುದೇ ಬಸವತತ್ವದ ಸ್ವಾಮಿಗಳಾಗಲಿ, ಬಸವದಳ, ಬಸವ ಭಕ್ತರಾಗಲಿ ಚಕಾರವೆತ್ತದಿರುವುದು ಹಡಪದ ಸಮಾಜದವರಿಗೆ ನೋವುಂಟು ಮಾಡಿದೆ. ಒಂದು ವೇಳೆ ಸರ್ಕಾರ ನಿರ್ಲಕ್ಷ್ಯ ಮುಂದುವರಿದಲ್ಲಿ ಅಪ್ಪಣ್ಣಭಾರತೀ ಸ್ವಾಮೀಜಿಯವರ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.

ತಾಲೂಕು ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಅಧ್ಯಕ್ಷ ವೀರಣ್ಣ ಹಡಪದ ಮಾತನಾಡಿದರು. ಪಟ್ಟಣದ ಅನ್ನದಾನೀಶ್ವರ ಮಠದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಬಸ್ ನಿಲ್ದಾಣದ ರಸ್ತೆ ಮೂಲಕ ಬೃಂದಾವನ ವೃತ್ತಕ್ಕೆ ತೆರಳಿ ಅಲ್ಲಿಂದ ಕೊಪ್ಪಳ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿಗೆ ಆಗಮಿಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಗ್ರೇಡ್ 2 ತಹಸೀಲ್ದಾರ್ ಕೆ. ರಾಧಾ ಮನವಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಹಡಪದ ಸಮಾಜದ ರವಿ ಹಡಪದ, ಚಂದ್ರಶೇಖರ ಹಡಪದ, ನಾಗರಾಜ ಹಡಪದ, ಬಸವರಾಜ ಹಡಪದ, ದೇವರಾಜ ಹಡಪದ, ಸುರೇಶ ಹಡಪದ, ಮಂಜುನಾಥ ಹಡಪದ, ಶರಣಪ್ಪ ಹಡಪದ, ಗಂಗಾಧರ ಹಡಪದ, ರೇವಣಸಿದ್ದಪ್ಪ ಹಡಪದ, ಶಂಕ್ರಪ್ಪ ಹಡಪದ, ಮುತ್ತು ಹಡಪದ, ಮಹಾಂತೇಶ ಹಡಪದ, ವೀರೇಶ ಹಡಪದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯಪಾಲರ ವಜಾಕ್ಕೆ ಆಗ್ರಹಿಸಿ ಕರವೇ ಪ್ರತಿಭಟನೆ
ವಿಶೇಷಚೇತನ ಮಕ್ಕಳಿಗೆ ಜಿಲ್ಲಾಡಳಿತದಿಂದ ಸೌಲಭ್ಯ ಕಲ್ಪಿಸಲು ಕ್ರಮ: ಡಿಸಿ ಕವಿತಾ ಎಸ್‌. ಮನ್ನಿಕೇರಿ