ರೋಣ/ಹೊಳೆಆಲೂರ: ಸೈಕಲ್ ಉಪಯೋಗದಿಂದ ಸ್ನಾಯು ಬಲಗೊಳ್ಳುವುದರ ಜೊತೆಗೆ ಸದೃಢ ಆರೋಗ್ಯ ವೃದ್ಧಿಯಾಗುವುದು. ಆದ್ದರಿಂದ ಪ್ರತಿಯೊಬ್ಬರು ಸೈಕಲ್ ಮಹತ್ವ ಅರಿಯಬೇಕು ಎಂದು ಗ್ರಾಮಿಣಾಭಿವೃದ್ಧಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಶೋಕಜ್ಜ ಹಿರೇಮಠ ಹೇಳಿದರು.
ಅವರು ತಾಲೂಕಿನ ಮೆಣಸಗಿ ಗ್ರಾಮದ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜರುಗಿದ ವಿಶ್ವ ಸೈಕಲ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸೈಕಲ್ ತುಳಿಯುವುದರಿಂದ ಹೃದಯ, ಶ್ವಾಸಕೋಶ ಮತ್ತು ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ ಮತ್ತು ಸುಧಾರಿಸುತ್ತದೆ. ಹೃದಯ ರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಸೈಕ್ಲಿಂಗ್ ನಿಮ್ಮ ಹೃದಯ ಸ್ನಾಯುಗಳನ್ನು ಬಲಪಡಿಸುತ್ತದೆ, ವಿಶ್ರಾಂತಿ ನಾಡಿಯನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದ ಕೊಬ್ಬಿನ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದರು.
ದೈಹಿಕವಾಗಿ ಯಾವಾಗಲೂ ಚುರುಕಾಗಿ ಇರಲು ಸೈಕಲ್ ತುಳಿಯುವದು ಬಹಳ ಉತ್ತಮ. ಜಿಮ್ ಗೆ ಹೋಗದವರಿಗೆ ಬೇರೆ ದೈಹಿಕ ವ್ಯಾಯಾಮ, ಯೋಗ ಮಾಡದವರು ಸೈಕಲ್ ತುಳಿದರೆ ಅದರಿಂದ ಸಾಕಷ್ಟು ವ್ಯಾಯಾಮ ಸಿಗುತ್ತದೆ ಎಂದರು.ಇದನ್ನು ಮಕ್ಕಳು ಮತ್ತು ವಯಸ್ಕರು ಸಮಾನವಾಗಿ ಆನಂದಿಸುತ್ತಾರೆ. ಇದು ದೇಹದಲ್ಲಿನ ವಿವಿಧ ಸ್ನಾಯುಗಳ ಮೇಲೆ ಕೆಲಸ ಮಾಡುವ ಮೂಲಕ ಒತ್ತಡ ಮತ್ತು ಉದ್ವೇಗವನ್ನು ಕಡಿಮೆ ಮಾಡುತ್ತದೆ. ಮೂಳೆಗಳಿಗೆ ಬಲ ಕೊಡುತ್ತದೆ. ಸೈಕಲ್ ಮಹತ್ವ ಅರಿತೇ ಜೂ. 3ರಂದು ವಿಶ್ವ ಸೈಕಲ್ ದಿನ ಆಚರಿಸುತ್ತಾ ಬರಲಾಗಿದೆ ಎಂದರು.
ಪರಿಸರ ಪ್ರೇಮಿ ಮುತ್ತಣ್ಣ ಹರ್ಲಾಪೂರ (ಗಾಂಧಿ ವೇಷಧಾರಿ) ಸೈಕಲ್ ಪರಿಸರ ಸ್ನೇಹಿಯಾಗಿದ್ದು, ಸೈಕಲ್ ತುಳಿಯುವುದರಿಂದ ದೈಹಿಕ , ಮಾನಸಿಕ ಆರೋಗ್ಯ ವೃದ್ಧಿಯಾಗುವುದು. ಸೈಕಲ್ ಬಳಕೆ ಮಾಡುವಂತೆ ನಾನು ಅನೇಕ ರಾಜ್ಯಾದಂತ ಸೈಕಲ್ ಮೂಲಕ ತೆರಳಿ ಜನರಲ್ಲಿ ಜಾಗೃತಿ ಮೂಡಿಸುತ್ತಾ ಬಂದಿದ್ದೇನೆ ಎಂದರು.ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಕಾಶಪ್ಪ ಗೌಡರ, ಅಭಿಷೇಕ ಬಡಿಗೆರ, ರಾಜೇಶ್ವರಿ ಎಚ್, ಶೋಧಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.