- ಜಿಲ್ಲಾ ಸಚಿವ ಎಸ್ಸೆಸ್ಸೆಂ, ದಕ್ಷಿಣ ಕ್ಷೇತ್ರ ಶಾಸಕ ಸಮರ್ಥಗೆ ಎಸ್ಡಿಪಿಐ ಮುಖಂಡ ಅಪ್ಸರ್ ಕೊಡ್ಲಿಪೇಟೆ ಮನವಿ
ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ದಕ್ಷಿಣ ಕ್ಷೇತ್ರದ ಅಭಿವೃದ್ಧಿಗೆ ಬಿಡುಗಡೆಯಾದ ₹100 ಕೋಟಿ ಅನುದಾನದಲ್ಲಿ ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ ನೀಡುವಂತೆ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ, ದಕ್ಷಿಣ ಕ್ಷೇತ್ರದ ಪರಾಜಿತ ಅಭ್ಯರ್ಥಿ, ಅಫ್ಸರ್ ಕೊಡ್ಲಿಪೇಟೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ದಕ್ಷಿಣ ಕ್ಷೇತ್ರ ಶಾಸಕ ಸಮರ್ಥ ಶಾಮನೂರು ಅವರಿಗೆ ಒತ್ತಾಯಿಸಿದ್ದಾರೆ.ಸರ್ಕಾರದಿಂದ ದಕ್ಷಿಣ ಕ್ಷೇತ್ರದ ಅಭಿವೃದ್ಧಿಗೆ ₹100 ಕೋಟಿ ಬಿಡುಗಡೆಯಾಗಿದೆ. ಕ್ಷೇತ್ರದ ಜನತೆಗೆ ಹರ್ಷದ ಸಂಗತಿಯಾಗಿದೆ. ಅಲ್ಲದೇ, ಕ್ಷೇತ್ರದ ಅಭಿವೃದ್ಧಿಗೆ ಇದೊಂದು ಐತಿಹಾಸಿಕ ಅವಕಾಶವಾಗಿದೆ. ಇಂತಹ ಅನುದಾನವನ್ನು ಕೇವಲ ಸಾಮಾನ್ಯ ಅಭಿವೃದ್ಧಿ ಕಾಮಗಾರಿಗೆ ಸೀಮಿತಗೊಳಿಸದೇ, ಕ್ಷೇತ್ರದ ಜನರ ದೀರ್ಘಕಾಲಿನ ಅಗತ್ಯಗಳಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ವಿಳಂಬ ಅಥವಾ ಸೂಕ್ತ ಯೋಜನೆ ಕೊರತೆಯಿಂದ ಅನುದಾನ ಬಳಕೆಯಾಗದೇ ಉಳಿಯುವ ಅಥವಾ ವಾಪಸ್ ಹೋಗುವ ಪರಿಸ್ಥಿತಿ ನಿರ್ಮಾಣ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲಿ. ಶಾಸಕರು, ಜಿಲ್ಲಾ ಸಚಿವರು ಸಂಬಂಧಿಸಿದ ಅಧಿಕಾರಿಗಳು, ತಜ್ಞರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರೊಡನೆ ಸಮಾಲೋಚಿಸಿ, ದೃಢ, ಪಾರದರ್ಶಕ, ಕಾಲಮಿತಿಯೊಳಗೆ ಅನುಷ್ಠಾನಗೊಳ್ಳುವ ಸಮಗ್ರ ಕ್ರಿಯಾ ಯೋಜನೆ ಸಿದ್ಧಪಡಿಸಬೇಕೆಂದು ಮನವಿ ಮಾಡಿದ್ದಾರೆ.
- - -
* ಎಸ್ಡಿಪಿಐ ಸಲಹೆಗಳು - ಕ್ಷೇತ್ರ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ ಬಳಸಬೇಕು.
- ತರಗತಿ ಕೊಠಡಿಗಳು, ಶೌಚಾಲಯಗಳು, ಕುಡಿಯುವ ನೀರು, ಪ್ರಯೋಗಾಲಯ, ಗ್ರಂಥಾಲಯ, ಆಟದ ಮೈದಾನ ಹಾಗೂ ಡಿಜಿಟಲ್ ಶಿಕ್ಷಣ ಸೌಲಭ್ಯಗಳಿಗೆ ಆದ್ಯತೆ ನೀಡಲಿ.
- ಸಕಾಲಿಕ ಮತ್ತು ಪಾರದರ್ಶಕ ಅನುದಾನ ಬಳಕೆಗೆ ಆದ್ಯತೆ ನೀಡಬೇಕು .
-29ಕೆಡಿವಿಜಿ11: ಅಫ್ಸರ್ ಕೊಡ್ಲಿಪೇಟೆ