ಸಮಾಜದ ಉನ್ನತಿಗೆ ವಚನ ಸಾಹಿತ್ಯ ಮುಖ್ಯ

KannadaprabhaNewsNetwork |  
Published : Apr 22, 2024, 02:00 AM IST
ಸಂಗಮೇಶ್ವರ ದೇವರು ಪ್ರವಚನ ನೀಡಿದರು.  | Kannada Prabha

ಸಾರಾಂಶ

ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ಬೆಳೆಯಬೇಕಾದರೆ ವಚನ ಕಲಿಸುವುದು ಅನಿವಾರ್ಯ. ಬದುಕಿಗೆ ಬೆಳಕನ್ನು ಮತ್ತು ಆದರ್ಶ ಕಲಿಸಿ ಕೊಡುವ ಕೆಲಸ ವಚನಗಳು ಮಾಡುತ್ತವೆ

ಗದಗ: 12ನೇ ಶತಮಾನದ ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ಅಡಗಿವೆ. ಸಮಾಜದ ಉನ್ನತಿ, ಮಾನವನ ಬದುಕಿಗೆ ವಚನ ಸಾಹಿತ್ಯ ಬಹಳ ಮುಖ್ಯ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ಅವರು ಲಿಂಗಾಯತ ಪ್ರಗತಿಶೀಲ ಸಂಘದ 2689ನೆಯ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ಬೆಳೆಯಬೇಕಾದರೆ ವಚನ ಕಲಿಸುವುದು ಅನಿವಾರ್ಯ. ಬದುಕಿಗೆ ಬೆಳಕನ್ನು ಮತ್ತು ಆದರ್ಶ ಕಲಿಸಿ ಕೊಡುವ ಕೆಲಸ ವಚನಗಳು ಮಾಡುತ್ತವೆ. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರು ವಿದ್ಯೆ,ವಿನಯ, ಶಿಸ್ತು, ಸೌಜನ್ಯ ರೂಢಿಸಿಕೊಳ್ಳಬೇಕು ಎಂದು ಶ್ರೀಗಳು ಮಾತನಾಡಿದರು.

ವಿಶ್ರಾಂತ ಉಪಕುಲಪತಿ ವಿ.ಬಿ.ಮಾಗನೂರ ಉಪನ್ಯಾಸ ನೀಡಿ, ಶಿಕ್ಷಣದಿಂದ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಮೌಢ್ಯ ಹೋಗಲಾಡಿಸಲು ಶಿಕ್ಷಣ ಬಹಳ ಮುಖ್ಯವಾಗಿದೆ. ಬುದ್ಧ, ಬಸವ, ಅಂಬೇಡ್ಕರ್ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ವಿಜಯಪುರ ಜ್ಞಾನಯೋಗಾಶ್ರಮದ ಸಂಗಮೇಶ್ವರ ದೇವರು ಮಾತನಾಡಿ, ಆಧ್ಯಾತ್ಮ ಎಂದರೆ ಪರಮ ಸತ್ಯ ಅರಿಯುವುದು. ಜಗತ್ತಿನಲ್ಲಿ ಬಾಳಿ ಬೆಳಗಿದ ಸಂತರು, ಶರಣರು, ಜ್ಞಾನಿಗಳು, ದಾಸರು, ದಾರ್ಶನಿಕರು ಜೀವನದುದ್ದಕ್ಕೂ ಒಳ್ಳೆಯದನ್ನು ಕೇಳಿದರು, ಒಳ್ಳೆಯದನ್ನು ನೋಡಿದರು, ಒಳ್ಳೆಯ ಕಾರ್ಯ ಮಾಡಿದರು. ಮನಸ್ಸಿನ ತುಂಬೆಲ್ಲ ಒಳ್ಳೆಯ ಆಲೋಚನೆ ತುಂಬಿಕೊಂಡು ಶ್ರೇಷ್ಠರಾದರು. ಸತ್ಯ ಅಸತ್ಯ, ಧರ್ಮ ಅಧರ್ಮ ಇವೆಲ್ಲವುಗಳನ್ನು ಪರಾಮರ್ಶಿಸಿ ಬದುಕಿದ್ದಾರೆ ಎಂದು ಹೇಳಿದರು.

ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಡಾ. ರೇಣುಕಾ ವೀರಪ್ಪ ತಾಳಿ ಅವರನ್ನು ಸನ್ಮಾನಿಸಲಾಯಿತು. ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ ಸಂಗಡಿಗರು ವಚನಸಂಗೀತ ಹಾಡಿದರು. ಧರ್ಮಗ್ರಂಥ ಪಠಣವನ್ನು ಕೋಮಲ ಅನಿಲಗೌಡ ಅಳಗುಂಡಿ, ವಚನ ಚಿಂತನೆಯನ್ನು ಅಮೃತಾ ಯಲ್ಲನಗೌಡ ಅಳಗುಂಡಿ ಮಾಡಿದರು. ಶಿವಾನುಭವದ ದಾಸೋಹ ಭಕ್ತಿಸೇವೆ ವಹಿಸಿಕೊಂಡಿದ್ದ ಪ್ರೊ. ವೀರಪ್ಪ ಬಸಪ್ಪ ತಾಳಿ ಅವರನ್ನು ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ನಿರೂಪಿಸಿದರು. ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ಕರೇಗೌಡ್ರ, ಕಾರ್ಯದರ್ಶಿ ಮಹೇಶ ಗಾಣಿಗೇರ, ಸಹಕಾರ್ಯದರ್ಶಿ ವಿಜಯಕುಮಾರ ಹಿರೇಮಠ, ವಿರುಪಾಕ್ಷಪ್ಪ ಅರಳಿ, ಸಂಘಟನಾ ಕಾರ್ಯದರ್ಶಿ ಅಶೋಕ ಹಾದಿ, ಕೋಶಾಧ್ಯಕ್ಷ ಸುರೇಶ ನಿಲೂಗಲ್, ಶಿವಾನುಭವ ಸಮಿತಿ ಚೇರಮನ್‌ ವಿವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ