ಕನ್ನಡಪ್ರಭ ವಾರ್ತೆ ಮೈಸೂರು
ಜಗಜ್ಯೋತಿ ಬಸವಣ್ಣ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಪ್ರಾದೇಶಿಕ ಆಯುಕ್ತರ ಕಚೇರಿಯ ಹೆಚ್ಚುವರಿ ಆಯುಕ್ತ ಡಾ.ಪಿ.ಶಿವರಾಜು ಮಾತನಾಡಿ, ಯಾವುದು ಸರಿ, ಯಾವುದು ತಪ್ಪು ಎನ್ನುವ ಗ್ರಹಿಕೆಯಲ್ಲಿ ಇಂದಿನ ಯುವ ಪೀಳಿಗೆ ತೋಯ್ದಾಟದಲ್ಲಿ ಇದೆ. ದುಶ್ಚಟಗಳು, ವಿವೇಚನಾರಹಿತ ಸಾಮಾಜಿಕ ಜಾಲತಾಣಗಳ ಬಳಕೆ ಮತ್ತು ಮಾರ್ಗದರ್ಶನದ ಕೊರತೆಯಿಂದಾಗಿ ಯುವಕರು ಹಾದಿ ತಪ್ಪುತ್ತಿರುವುದು ನಿಜಕ್ಕೂ ಕಳವಳಕಾರಿ. ಈ ಸಮಸ್ಯೆಯನ್ನು ತಡೆಗಟ್ಟಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಸಾಮಾಜಿಕ ಮಟ್ಟದಲ್ಲಿ ಕೆಲವು ಬದಲಾವಣೆಗಳು ಅತ್ಯಗತ್ಯವಾಗಿದೆ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯ ರೀಲ್ಸ್ ನೋಡುವುದು ಮತ್ತು ಗೇಮಿಂಗ್ ಗೆ ಅತಿಯಾಗಿ ಸಮಯ ವ್ಯಯಿಸುವುದನ್ನು ನಿಯಂತ್ರಿಸಿ, ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಯೋಗ, ಧ್ಯಾನ ಮತ್ತು ದೈಹಿಕ ವ್ಯಾಯಾಮಗಳನ್ನು ದಿನಚರಿಯಲ್ಲಿ ಅಳವಡಿಸಿಕೊಳ್ಳುವುದರಿಂದ ಏಕಾಗ್ರತೆ ಹೆಚ್ಚುತ್ತದೆ ಮತ್ತು ದುಶ್ಚಟಗಳಿಂದ ದೂರವಿರಬಹುದು ಎಂದು ಅವರು ಸಲಹೆ ನೀಡಿದರು.ವಚನಗಳಲ್ಲಿ ವ್ಯಸನಮುಕ್ತ ಜೀವನ ಕುರಿತು ಕುದೇರು ಮಠದ ಶ್ರೀ ಗುರುಶಾಂತ ಸ್ವಾಮೀಜಿ ಮಾತನಾಡಿ, 12ನೇ ಶತಮಾನದ ವಚನ ಸಾಹಿತ್ಯವು ಕೇವಲ ಭಕ್ತಿಯ ಮಾರ್ಗವಲ್ಲ, ಬದಲಿಗೆ ವ್ಯಸನಮುಕ್ತ ಮತ್ತು ಮೌಲ್ಯಾಧಾರಿತ ಜೀವನಕ್ಕೆ ಬುನಾದಿಯಾಗಿದೆ. ಬಸವಣ್ಣ, ಅಲ್ಲಮಪ್ರಭು ಮುಂತಾದ ಶರಣರು ದುರಾಸೆ, ಮಾದಕತೆ ಮತ್ತು ಅನೈತಿಕ ಆಸಕ್ತಿಗಳಿಂದ ದೂರವಿದ್ದು, ಕಾಯಕ ಹಾಗೂ ದಾಸೋಹದ ಮೂಲಕ ಪರಿಶುದ್ಧ ಬದುಕು ನಡೆಸಲು ಕರೆ ನೀಡಿದ್ದಾರೆ ಎಂದರು.
ಬಸವ ಬಳಗದ ಅಧ್ಯಕ್ಷ ಎಂ. ಚಂದ್ರಶೇಖರ್ ಮಾತನಾಡಿ, ವ್ಯಸನಗಳಿಗೆ ಸಮಯ ವ್ಯರ್ಥ ಮಾಡದೆ, ಪ್ರಾಮಾಣಿಕ ದುಡಿಮೆ ಮತ್ತು ಸಮಾಜಮುಖಿ ಸೇವೆಯಲ್ಲಿ ತೊಡಗಿಕೊಳ್ಳುವುದರಿಂದ ವ್ಯಸನಮುಕ್ತ ಮತ್ತು ಸಾರ್ಥಕ ಜೀವನ ಸಾಧ್ಯ. ಅಲ್ಲಮಪ್ರಭುಗಳು ಹೊನ್ನು- ಹೆಣ್ಣು- ಮಣ್ಣಿನ ವ್ಯಾಮೋಹವೇ ಎಲ್ಲಾ ದುಶ್ಚಟ ಹಾಗೂ ದುಃಖಕ್ಕೆ ಮೂಲ ಕಾರಣ ಎಂದು ವಿವರಿಸಿದ್ದಾರೆ. ಈ ಆಸೆಗಳನ್ನು ಗೆಲ್ಲುವುದೇ ನಿಜವಾದ ಮುಕ್ತಿ ಎಂದು ಅವರು ಸಾರಿದ್ದಾರೆ ಎಂದರು.
ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ದೇವರಾಜು ಪಿ. ಚಿಕ್ಕಹಳ್ಳಿ ಮಾತನಾಡಿ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ವಚನಗಳ ಚಿಂತನೆಗಳನ್ನು ಯುವಜನತೆಗೆ ತಲುಪಿಸುವುದು, ವಚನಗಳ ಸಂಪೂರ್ಣ ಸಾರ ಮತ್ತು ಸಂದೇಶಗಳನ್ನು ಕನ್ನಡದ ಕಣಜ ಜಾಲತಾಣದಲ್ಲಿ ಓದಿ ತಿಳಿದುಕೊಳ್ಳಬಹುದು ಎಂದರು.
ವಚನ ಸಾಹಿತ್ಯವು ಸಮಾನತೆ, ಶ್ರಮ- ಕಾಯಕ ಮತ್ತು ಭಕ್ತಿಯ ಮಹತ್ವ, ಪ್ರಾಮಾಣಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಶರಣರು ಜಾತಿ, ಲಿಂಗ, ಆರ್ಥಿಕ ಸ್ಥಿತಿ ಮುಂತಾದ ಬೇಧಭಾವಗಳನ್ನು ತಿರಸ್ಕರಿಸಿದರು. ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಮೊದಲಾದ ಶರಣರು ಕಾಯಕವೇ ಕೈಲಾಸ, ದಾಸೋಹದ ತತ್ತ್ವ, ಅನುಭವ ಮಂಟಪದ ಪರಿಕಲ್ಪನೆಯ ಮೂಲಕ ಪ್ರಜಾಪ್ರಭುತ್ವದ ನ್ಯಾಯಯುತ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದರು ಎಂದು ಬಸವಮಾರ್ಗ ಫೌಂಡೇಶನ್ ಸಂಸ್ಥಾಪಕ ಎಸ್.ಬಸವಣ್ಣ ತಿಳಿಸಿದರು.