ಕನ್ನಡಪ್ರಭ ವಾರ್ತೆ ಕೋಟಯಕ್ಷಗಾನ ರಂಗದಲ್ಲಿ ಕೋಟ ವೈಕುಂಠ ಅವರ ಕೊಡುಗೆ ಅನನ್ಯವಾದದ್ದು, ಪ್ರತಿ ಪಾತ್ರಕ್ಕೂ ಸೈ ಎನಿಸಿಕೊಂಡವರು ಅವರು ಎಂದು ಕೋಟದ ಗೀತಾನಂದ ಟ್ರಸ್ಟ್ ಮುಖ್ಯಸ್ಥ ಆನಂದ್ ಸಿ. ಕುಂದರ್ ಹೇಳಿದರು.ಅವರು ಕೋಟತಟ್ಟು ಪರಿಸರದ ಹಿರಿಯ ಯಕ್ಷಗಾನ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದಿ.ಕೋಟ ವೈಕುಂಠ ಅವರ ಸ್ವಗೃಹದಲ್ಲಿ ಹಮ್ಮಿಕೊಂಡ ಕೋಟ ಅಮೃತೇಶ್ವರಿ ಯಕ್ಷಗಾನ ಮೇಳದ ಬಯಲಾಟ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರತಿಯೊಂದು ವೇಷಕ್ಕೂ ಜೀವ ತುಂಬುವ ಕೋಟ ವೈಕುಂಠ ಸ್ಮರಣಾರ್ಥ ಯಕ್ಷಗಾನ ಕಾರ್ಯಕ್ರಮ ಕಲೆಗೆ ನೀಡಿದ ಮಹಾಗೌರವವಾಗಿದೆ. ಅವರ ಹೆಸರಿನಲ್ಲಿ ಸನ್ಮಾನ ಸ್ವೀಕರಿಸಿದ ಇರ್ವರು ಕಲಾವಿದರು ಕೋಟ ವೈಕುಂಠರಂತೆ ಯಕ್ಷಲೋಕದಲ್ಲಿ ಪ್ರಸಿದ್ಧಿ ಪಡೆಯಲಿ ಎಂದು ಹಾರೈಸಿದರು.
ಸಭೆಯಲ್ಲಿ ಕೋಟ ವೈಕುಂಠರ ಪುತ್ರ ಉಮೇಶ್ ರಾಜ್ ಮತ್ತು ಮುಕೇಶ್, ಮನೆಯ ಮಾಲಿಕರಾದ ಆನಂದ್ ಮರಕಾಲ, ನರಸಿಂಹ ಮರಕಾಲ, ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ಸತೀಶ್ ಕುಂದರ್, ಕೋಟ ಮೊಗವೀರ ಯುವ ಸಂಘಟನೆಯ ಮಾಜಿ ಅಧ್ಯಕ್ಷ ರಮೇಶ್ ವಿ. ಕುಂದರ್, ಕೋಟ ಸಿಎ ಬ್ಯಾಂಕ್ ನಿರ್ದೇಶಕ ರಂಜೀತ್ ಕುಮಾರ್, ಅಮೃತೇಶ್ವರಿ ಮೇಳದ ವ್ಯವಸ್ಥಾಪಕ ಕೋಟ ಸುರೇಶ್, ಮೇಳದ ಭಾಗವತ ರಾಘವೇಂದ್ರ ಮಯ್ಯ ಹಾಲಾಡಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕ ಕೆ. ರಾಘವೇಂದ್ರ ತುಂಗ ಸ್ವಾಗತಿಸಿ ನಿರೂಪಿಸಿದರು.