
ಗದಗ: ಬೇಸಿಗೆಯ ಬಿರು ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದ ಜಿಲ್ಲೆಯ ಜನತೆಗೆ ಸತತ ಎರಡನೇ ದಿನವೂ ಮಳೆಯ ಸಿಂಚನವಾಗಿದ್ದು, ಸೋಮವಾರ ಸಂಜೆ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು.
ವಾತಾವರಣ ಬದಲಾವಣೆ: ಸೋಮವಾರ ಮಧ್ಯಾಹ್ನದವರೆಗೂ ಬಿಸಿಲಿನ ಬೇಗೆ ಮುಂದುವರಿದಿದ್ದರೂ ಸಂಜೆ ವೇಳೆಗೆ ದಟ್ಟ ಕಾರ್ಮೋಡ ಆವರಿಸತೊಡಗಿದವು. ಸಂಜೆ ಸುಮಾರು 4.30ರ ವೇಳೆಗೆ ನಗರಾದ್ಯಂತ ಕತ್ತಲೆ ಆವರಿಸಿದಂತ ವಾತಾವರಣ ನಿರ್ಮಾಣವಾಗಿದ್ದು, ಬಳಿಕ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಭಾರೀ ಮಳೆ ಆರಂಭವಾಯಿತು.
ಸಂಜೆ 4.30ರಿಂದ ಸುಮಾರು 6 ಗಂಟೆಯವರೆಗೆ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡವು. ವಾಹನ ಸವಾರರು ಹಾಗೂ ಸಾರ್ವಜನಿಕರು ಸಂಚಾರದಲ್ಲಿ ಪರದಾಡುವಂತಾಯಿತು.ಹಲವೆಡೆ ಹಾನಿ: ಸತತ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿ- ಮಳೆಯಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ವ್ಯಾಪಕ ಹಾನಿ ಸಂಭವಿಸಿದೆ. ನಗರದ ಭೀಷ್ಮ ಕೆರೆ ಆವರಣದಲ್ಲಿ ಬೋಟಿಂಗ್ಗಾಗಿ ನಿರ್ಮಿಸಿದ್ದ ಶೆಡ್ ಹಾಗೂ ಸ್ವಾಗತ ಕಮಾನು ಗಾಳಿಯ ರಭಸಕ್ಕೆ ಕಿತ್ತು ಬಿದ್ದಿವೆ.
ಇನ್ನೊಂದೆಡೆ ಗದಗ- ಬಾದಾಮಿ ಹೆದ್ದಾರಿಗೆ ಹೊಂದಿಕೊಂಡಿರುವ ಬೆಟಗೇರಿಯ ಕಿತ್ತೂರು ರಾಣಿ ಚನ್ನಮ್ಮ ಉದ್ಯಾನದಲ್ಲಿನ ಬೃಹತ್ ಮರವೊಂದು ರಸ್ತೆಬದಿಯ ಗೂಡಂಗಡಿಯ ಮೇಲೆ ಉರುಳಿಬಿದ್ದಿದ್ದು, ಅಂಗಡಿಗೆ ಹಾನಿಯಾಗಿದೆ.