ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ವಾಲ್ಮೀಕಿ ಗುರುಪೀಠ ನೀಡುತ್ತಿರುವ ರಾಜವೀರ ಮದಕರಿ ನಾಯಕ ಪ್ರಶಸ್ತಿಯು ಎಲ್ಲಾ ಪ್ರಶಸ್ತಿ, ಗೌರವಕ್ಕಿಂತಲೂ ಮೌಲ್ಯವಾದದ್ದು ಎಂದು ತಾವು ಭಾವಿಸಿರುವುದಾಗಿ ಖ್ಯಾತ ಕಾದಂಬರಿಕಾರ ಡಾ.ಬಿ.ಎಲ್.ವೇಣು ಹೇಳಿದರು.ಪ್ರಾದೇಶಿಕ ಭಾಷಾ ಗುಣಾತ್ಮಕ ಚಲನ ಚಿತ್ರಗಳ ಆಯ್ಕೆ ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆ ಹಾಗೂ ವಾಲ್ಮೀಕಿ ಗುರುಪೀಠದಿಂದ ನೀಡಲಾಗುತ್ತಿರುವ ಪ್ರತಿಷ್ಠಿತ ರಾಜವೀರ ಮದಕರಿ ನಾಯಕ ಪ್ರಶಸ್ತಿ ಪಡೆದಿರುವ ಹಿನ್ನೆಲೆ ಬುಧವಾರ ಸೃಷ್ಠಿಸಾಗರ ಪ್ರಕಾಶನ ಮತ್ತು ಮದಕರಿ ಸಾಂಸ್ಕೃತಿಕ ಕೇಂದ್ರದ ಸಹಯೋಗದಲ್ಲಿ ವೇಣು ಅವರ ಅಭಿಮಾನಿಗಳು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನಾನು ಯಾವ ಸನ್ಮಾನ, ಪ್ರಶಸ್ತಿಗಾಗಿ ಕೆಲಸ ಮಾಡುವವನಲ್ಲ. ಅದರ ಆಲೋಚನೆಯೂ ಇಲ್ಲ. ಕಾಯಕವನ್ನು ಶ್ರದ್ಧೆಯಿಂದ ಮಾಡುತ್ತಿದ್ದೇನೆ. ಇದುವರೆಗೂ ನಾನು ಮಾಡಿಕೊಂಡು ಬಂದಿರುವ ಕೆಲಸ, ಸಾಹಿತ್ಯ ಕೃಷಿ, ಸಾಧನೆಗೆ ಜನರು ಅತ್ಯಂತ ಪ್ರೀತಿ, ಅಭಿಮಾನ ತೋರಿದ್ದಾರೆ. ಅದಕ್ಕಿಂತ ಮಿಗಿಲಾದದ್ದು ಏನೂ ಇಲ್ಲ. ನನ್ನ ಬರವಣಿಗೆಗೆ, ಸಾಹಿತ್ಯ ಕೃಷಿಗೆ ಸಿಗಬೇಕಾದ ಎಲ್ಲಾ ಗೌರವ ಸಿಕ್ಕಿದೆ. ಸಾಧನೆಗೆ ಪ್ರತಿಫಲವೂ ಸಿಗುತ್ತಿದೆ ಎನ್ನುವುದು ಸಮಾಧಾನ ತಂದಿದೆ ಎಂದು ಹೇಳಿದರುಚಿತ್ರದುರ್ಗದ ಮದಕರಿ ನಾಯಕರ ಆಳ್ವಿಕೆ, ರಾಜಮಹಾರಾಜರು, ಇಲ್ಲಿನ ಚರಿತ್ರೆ, ಪರಾಕ್ರಮಗಳ ಕುರಿತಾಗಿ ಸಾಕಷ್ಟು ಬರೆದಿದ್ದೇನೆ. ವಿಶೇಷವಾಗಿ ರಾಜವೀರ ಮದಕರಿ ನಾಯಕರ ಕುರಿತು ಕಾದಂಬರಿ ಬರೆಯುವಾಗ ತರಾಸು ಮತ್ತು ತಮ್ಮ ನಡುವೆ ಎದುರಾದ ವೈರತ್ವದ ಹೊರತಾಗಿಯೂ ಬರವಣಿಗೆ ಮುಂದುವರೆಸಿದ್ದೆ. ನಾನು ಸ್ವಾಭಿಮಾನವಿಟ್ಟುಕೊಂಡು ಬಂದವನು. ದುರ್ಗದ ಚರಿತ್ರೆ ಆಧರಿಸಿ ಬರೆದ ಅನೇಕ ಕೃತಿಗಳಿಗೆ ಜನಮನ್ನಣೆ ಸಿಕ್ಕಿದೆ. ಸಾಕಷ್ಟು ಸಿನಿಮಾಗಳೂ ಆಗಿವೆ. ಈ ಎಲ್ಲಾ ಅಂಶ ಪರಿಗಣಿಸಿ ವಾಲ್ಮೀಕಿ ಗುರುಪೀಠ ರಾಜವೀರ ಮದಕರಿ ನಾಯಕ ಪ್ರಶಸ್ತಿ ನೀಡಿರುವುದು ನನ್ನಗೆ ತುಂಬಾ ಸಂತಸ ತಂದುಕೊಟ್ಟಿದೆ ಎಂದು ಬಿ.ಎಲ್.ವೇಣು ಹೇಳಿದರು
ಮದಕರಿ ನಾಯಕ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸಂದೀಪ್ ಮಾತನಾಡಿ, ಚಿತ್ರದುರ್ಗದ ಚರಿತ್ರೆಯನ್ನು ನಾಡಿನ ಜನರಿಗೆ ತಮ್ಮ ಬರಹಗಳ ಮೂಲಕ ಪ್ರಚುರ ಮಾಡುತ್ತಲೇ ಸಾಹಿತ್ಯ, ಸಿನಿಮಾ ರಂಗದಲ್ಲಿ ದೊಡ್ಡ ಸಾಧನೆ ಮಾಡಿರುವ ಬಿ.ಎಲ್.ವೇಣು ಅವರು ಈ ನೆಲದ ಆಸ್ತಿ. ಅವರ ಕೊಡುಗೆ ಯಾರೂ ಮರೆಯಲಾಗದು ಎಂದು ಬಣ್ಣಿಸಿದರು.ನಗರ ಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜು ಮಾತನಾಡಿ, ಸಾಹಿತ್ಯ, ಕಾದಂಬರಿ ಮತ್ತು ಸಿನಿಮಾ ಲೋಕದಲ್ಲಿ ಅವರು ಮಾಡಿರುವ ಸಾಧನೆ ಇಡೀ ನಾಡು ಮೆಚ್ಚಿದೆ. ಇದುವರೆಗೆ ಅವರಿಗೆ ಸಿಗಬೇಕಾಗಿರುವ ಎಲ್ಲಾ ಸ್ಥಾನ ಮಾನಗಳೂ ಸಿಕ್ಕಿವೆ, ಪ್ರಶಸ್ತಿಗಳೂ ಲಭಿಸಿವೆ. ಇನ್ನೂ ಯಾವುದಾದರೂ ಪ್ರಶಸ್ತಿ ಉಳಿದಿದ್ದರೆ ಅದರು ವೇಣು ಅವರಂತಹ ಮೇರು ವ್ಯಕ್ತಿತ್ವದ ಲೇಖಕರಿಗೆ ಸಿಕ್ಕೆರೆ ಆ ಪ್ರಶಸ್ತಿಗೆ ಗೌರವ ಹೆಚ್ಚುತ್ತದೆ ಎಂದರು
ವಿಜಯ ಸೇನೆ ಸಂಘಟನೆ ಜಿಲ್ಲಾದ್ಯಕ್ಷ ಕೆ.ಟಿ.ಶಿವಕುಮಾರ್, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಹರ್ತಿಕೋಟೆ ವೀರೇಂದ್ರ ಸಿಂಹ, ಮೇಘ ಗಂಗಾಧರ ನಾಯ್ಕ, ಮದಕರಿ ಸಾಂಸ್ಕ್ರತಿಕ ಕೇಂದ್ರದ ಮುಖ್ಯಸ್ಥ ಡಿ.ಗೋಪಾಲಸ್ವಾಮಿ ನಾಯಕ, ಅಹೋಬಲ ಟಿವಿಎಸ್ ಶೋ ರೂಂ ಮಾಲೀಕ ಅರುಣ್, ಸಾಹಿತಿಗಳಾದ ಷರೀಫಾಭಿ, ಲಲಿತಾ ಕೃಷ್ಣಮೂರ್ತಿ, ಸೋಮಶೇಖರ್ ಇದ್ದರು.