ವೀರಶೈವ ಲಿಂಗಾಯತ ಎರಡೂ ಒಂದೇ: ಅರಣ್ಯ ಸಚಿವ ಈಶ್ವರ ಖಂಡ್ರೆ

KannadaprabhaNewsNetwork |  
Published : Sep 16, 2025, 12:03 AM IST
ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಸೋಮವಾರ ಸಚಿವ ಈಶ್ವರ ಖಂಡ್ರೆ ಅವರು ಏಕತಾ ಸಮಾವೇಶದ ವೇದಿಕೆ ಸಿದ್ಧತೆ ಪರಿಶೀಲಿಸಿದರು. | Kannada Prabha

ಸಾರಾಂಶ

ಸೆ. 22ರಿಂದ ಆರಂಭವಾಗುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಜಾತಿ ಕಾಲಂನಲ್ಲಿ ವೀರಶೈವ- ಲಿಂಗಾಯತ ಮತ್ತು ಉಪಜಾತಿ ಕಾಲಂನಲ್ಲಿ 135 ಒಳಪಂಗಡಗಳಲ್ಲಿ ಅವರಿಗೆ ಸೂಕ್ತವಾದ ಹೆಸರು ನೋಂದಾಯಿಸುವಂತೆ ಮಾರ್ಗದರ್ಶನ ನೀಡಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಹುಬ್ಬಳ್ಳಿ: ವೀರಶೈವ- ಲಿಂಗಾಯತರು ಒಂದೇ. ಅವೆರಡೂ ಬೇರೆ ಬೇರೆ ಅಲ್ಲ. ಲಿಂಗಪೂಜೆ ಮಾಡುವವರು, ಅಷ್ಟಾವರಣ, ಪಂಚಾಚಾರ್ಯ ಷಟಷ್ಥಲ ಯಾರು ಅನುಸರಿಸುತ್ತಾರೋ ಅವರೆಲ್ಲರೂ ವೀರಶೈವರು. ಗುರು- ವಿರಕ್ತರೆಂಬ ಭೇದವಿಲ್ಲದೆ ಎಲ್ಲರೂ ಒಂದಾಗಿದ್ದು ಈ ಹಿನ್ನೆಲೆಯಲ್ಲಿ ನಗರದಲ್ಲಿ ಸೆ. 19ರಂದು ಮಧ್ಯಾಹ್ನ 3ಕ್ಕೆ ವೀರಶೈವ-ಲಿಂಗಾಯತರ ಏಕತಾ ಸಮಾವೇಶ ಏರ್ಪಡಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ನಗರದ ನೆಹರು ಮೈದಾನದಲ್ಲಿ ಏಕತಾ ಸಮಾವೇಶದ ವೇದಿಕೆ ಸಿದ್ಧತೆಯನ್ನು ಸೋಮವಾರ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಇದು ವೀರಶೈವ ಲಿಂಗಾಯತ ಸಮುದಾಯದ ಸಂಘಟನೆ ಮತ್ತು ಐಕ್ಯತೆ ಸಮಾವೇಶವಾಗಿದೆ. ಸುಮಾರು ವರ್ಷಗಳ ಹಿಂದೆ ಶಿವಕುಮಾರ ಮಹಾಸ್ವಾಮೀಜಿಗಳು, ಅಖಿಲ ಭಾರತ ವೀರಶೈವ ಲಿಂಗಾಯತ ಸಭೆಯ ಹಿಂದಿನ ಎಲ್ಲ ಅಧ್ಯಕ್ಷರು ಲಿಂಗಾಯತ, ವೀರಶೈವ ಸಮಾನಾರ್ಥಕವಾದ ಪದಗಳು ಮತ್ತು ಎರಡೂ ಒಂದೇ ಎಂದು ಪ್ರತಿಪಾದಿಸಿದ್ದಾರೆ. ಸಮಾಜದಲ್ಲಿ ಉಂಟಾಗಿರುವ ಅಭಿಪ್ರಾಯ, ಬೇಧ ಸರಿಯಲ್ಲ. ಸೆ. 22ರಿಂದ ಆರಂಭವಾಗುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಜಾತಿ ಕಾಲಂನಲ್ಲಿ ವೀರಶೈವ- ಲಿಂಗಾಯತ ಮತ್ತು ಉಪಜಾತಿ ಕಾಲಂನಲ್ಲಿ 135 ಒಳಪಂಗಡಗಳಲ್ಲಿ ಅವರಿಗೆ ಸೂಕ್ತವಾದ ಹೆಸರು ನೋಂದಾಯಿಸುವಂತೆ ಮಾರ್ಗದರ್ಶನ ನೀಡಲಾಗುವುದು ಎಂದು ತಿಳಿಸಿದರು.

ಫಕೀರ ದಿಂಗಾಲೇಶ್ವರ ಸ್ಮಾಮೀಜಿ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಆಶ್ರಯದಲ್ಲಿ ವೀರಶೈವ ಲಿಂಗಾಯತ ಏಕತಾ ಸಮಾವೇಶ ಜರುಗಲಿದೆ. ಸಮಾವೇಶಕ್ಕೆ ಎಲ್ಲ ರೀತಿಯ ಸಿದ್ಧತೆಗಳು ಆಗಿವೆ. ಸಾವಿರಾರು ಜನ ಭಕ್ತಾದಿಗಳು ಮತ್ತು ಲಕ್ಷಾಂತರ ಜನ ಇಲ್ಲಿ ಸೇರಲಿದ್ದಾರೆ. ಹೆಚ್ಚಿನ ಜನರನ್ನು ಸೇರಿಸುವ ಮೂಲಕ ಸಮಾಜ ಒಗ್ಗೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಲಿಂಗಾಯತ ಪ್ರತ್ಯೇಕ ಧರ್ಮ ಮಾಡಬೇಕೆಂದು ಕೆಲವರು ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಿದ್ದರು. ಸಿದ್ದರಾಮಯ್ಯ ಅವರೇ ಪ್ರತ್ಯೇಕ ಧರ್ಮ ಮಾಡಲು ಮುಂದಾಗಿರಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ವೀರಶೈವ- ಲಿಂಗಾಯತರು ಬೇರೆ ಬೇರೆಯಲ್ಲ. ಜಗದ್ಗುರುಗಳು ಕೂಡ ಬಸವಣ್ಣನವರ ಫೋಟೋವನ್ನು ದಸರಾ ದರ್ಬಾರದಲ್ಲಿ ಹಾಕಿಸಿದ್ದರು. ಪಂಚಪೀಠದವರು ಬದಲಾದರೆ ನಾವು ಬದಲಾಗುತ್ತೇವೆ ಎಂದು ಕೆಲವರು ಹೇಳುತ್ತಿದ್ದಾರೆ. ಹೀಗಿದ್ದ ಬಳಿಕ ಬೇರೆ ಬೇರೆ ಎಂಬುದು ಸರಿಯಲ್ಲ. ನಾವು ಕೂಡಿಸುವುದಕ್ಕೆ ಇದ್ದೇವೆ ಎಂದು ನಿವೃತ್ತ ಐಎಸ್‌ಎ ಅಧಿಕಾರಿ ಎಸ್.ಎಂ. ಜಾಮದಾರ ಅವರ ಮಾತಿಗೆ ತಿರುಗೇಟು ನೀಡಿದರು. ವೀರಶೈವ- ಲಿಂಗಾಯತ ಒಂದು, ವಿಶ್ವವೇ ನಮ್ಮ ಬಂಧು ಎಂಬ ಸ್ಲೋಗನ್, ಅದನ್ನು ನಾವು ಅಳವಡಿಸಿಕೊಂಡಿದ್ದೇವೆ ಎಂದರು.ಸಮಾಜದ ಪ್ರಮುಖರಾದ ಶ್ರೀ ಮುಪ್ಪಿನಬಸವ ಮಹಾಸ್ವಾಮಿಗಳು, ಗಂಗಾವತಿ ಕಲ್ಮಠದ ಕೊಟ್ಟೂರು ಮಹಾಸ್ವಾಮೀಜಿ, ಶಿವಲಿಂಗ ಮಹಾಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು, ಸಂಕಲ್ಪ ಶೆಟ್ಟರ್, ನಾಗರಾಜ ಗೌರಿ, ಮೋಹನ ಅಸುಂಡಿ, ಸದಾಶಿವ ಚೌಶೆಟ್ಟಿ, ಮಲ್ಲಿಕಾರ್ಜುನ ಶಿರಗುಪ್ಪಿ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇನ್ಫೋಸಿಸ್‌ನಿಂದ ಸರ್ಕಾರಿ ಜಾಗ ಮಾರಾಟ?: ನೆಟ್ಟಿಗರಿಂದ ತರಾಟೆ
5-6 ತಿಂಗಳಿಂದ ನೀರು ಪೋಲು: ಕ್ರಮಕೈಗೊಳ್ಳದ ಅಧಿಕಾರಿಗಳು