ಹುಮನಾಬಾದ್: ಪಟ್ಟಣದ ಕುಲದೇವತೆ ಹಾಗೂ ಕಲ್ಯಾಣ ಕರ್ನಾಟಕದಲ್ಲಿಯೇ ಐತಿಹಾಸಿಕ ದೇವಸ್ಥಾನಗಳಲ್ಲಿ ಒಂದಾದ ವೀರಭದ್ರೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಸಂಜೆ ಪಲ್ಲಕಿ ಉತ್ಸವ ವಿಜೃಂಭಣೆಯಿಂದ ಜರುಗಿತು.
ಸಂಪ್ರದಾಯದಂತೆ ಹಿರೇಮಠ ಸಂಸ್ಥಾನದ ಪೀಠಾಧಿಪತಿ ರೇಣುಕಾವೀರ ಗಂಗಾಧರ ಶಿವಾಚಾರ್ಯರನ್ನು ಪಾರಂಪರಿಕ ವಿಧಿ ವಿಧಾನಗಳು ಹಾಗೂ ವಾದ್ಯಮೇಳ ಮೂಲಕ ಹಿರೇಮಠದಿಂದ ದೇವಸ್ಥಾನಕ್ಕೆ ಕರೆತರಲಾಯಿತು.ಬಳಿಕ ಅಲಂಕೃತ ದೇವರಿಗೆ ಮಾಜಿ ಸಚಿವ ರಾಜಶೇಖರ ಪಾಟೀಲ್ ಹಾಗೂ ಶಾಸಕ ಡಾ.ಸಿದ್ದು ಪಾಟೀಲ್ ಅವರ ಪರಿವಾರದಿಂದ ವಿಶೇಷ ಪೂಜೆ ಸಲ್ಲಿಸಿದ ಬಳಿಕ ದೇವಸ್ಥಾನದ ಆವರಣದಿಂದ ಸಂಗೀತ ವಾದ್ಯಗಳೊಂದಿಗೆ ದೇವರ ಪಲ್ಲಕಿ ಉತ್ಸವ ಆರಂಭಗೊಂಡು ಪಟ್ಟಣದ ಜೇರಪೇಟ್ ಬಡಾವಣೆಯ ಹನುಮಾನ ದೇವಸ್ಥಾನದ ಮುಂಭಾಗದಲ್ಲಿ ಹಾಗೂ ಅಗ್ನಿ ಕುಂಡ 2 ಕಡೆಗಳಲ್ಲಿ ಧಾರ್ಮಿಕ ವಿಧಿವಿಧಾನದೊಂದಿಗೆ ಸಾವಿರಾರು ಭಕ್ತರ ಮಧ್ಯ ವೀರಭದ್ರೇಶ್ವರ ದೇವರ ಶಲ್ಯ ಸುಡುವ ಕಾರ್ಯಕ್ರಮ ಜರುಗಿತು.
ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಸರದಾರ ಪಟೇಲ್ ವೃತ್ತ, ಬಾಲಾಜಿ ಮಂದಿರ, ವೀರಭದ್ರೇಶ್ವರ ರಸ್ತೆ ಮೂಲಕ ದೇವರ ಪಲ್ಲಕಿ ಉತ್ಸವ ತಡರಾತ್ರಿ 2.30ಕ್ಕೆ ದೇವಸ್ಥಾನ ತಲುಪಿತು. ರಸ್ತೆಯುದ್ದಕ್ಕೂ ಭಕ್ತರು ದೇವರಿಗೆ ಶಲ್ಯ ಹೊದಿಸಿ ನೈವೇದ್ಯ ಅರ್ಪಿಸಿ ದೇವರ ದರ್ಶನ ಪಡೆದರು. ಇದಕ್ಕೂ ಮುನ್ನ ಜ.10ರಂದು ದೇವರಿಗೆ ಎಣ್ಣೆ ಹಚ್ಚುವ ಕಾರ್ಯಕ್ರಮ ಜರುಗಿತ್ತು.ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ಮಾಜಿ ಸಚಿವ ರಾಜಶೇಖರ ಪಾಟೀಲ್, ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ್ ಪಾಟೀಲ್, ದೇವಸ್ಥಾನದ ಗೌರವಾಧ್ಯಕ್ಷ ವೀರಣ್ಣ ಪಾಟೀಲ್, ಮಲ್ಲಿಕಾರ್ಜುನ ಮಾಳಶಟ್ಟಿ, ದತ್ತಕುಮಾರ ಚಿದ್ರಿ, ಪುರಸಭೆ ಸದಸ್ಯ ಸುನೀಲ (ಕಾಳಪ್ಪ) ಪಾಟೀಲ್, ಮಹೇಶ್ ಅಗಡಿ, ಅಫ್ಸರಮಿಯ್ಯಾ ಸೇರಿದಂತೆ ಅನೇಕ ಭಕ್ತರು ಪಲ್ಲಕಿ ಉತ್ಸವದಲ್ಲಿ ಸಂಪ್ರದಾಯದಂತೆ ಸೇವೆ ಸಲ್ಲಿಸಿದರು.
ಪೊಲೀಸ್ ಬಿಗಿ ಬಂದೋಬಸ್ತ್: ಶಲ್ಯ ಸುಡುವ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿವೈಎಸ್ಪಿ ಜೆಎಸ್ ನ್ಯಾಮಗೌಡರ ಮಾರ್ಗದರ್ಶನದಲ್ಲಿ ಸಿಪಿಐ ಗುರುಲಿಂಗಪ್ಪಗೌಡ ಪಾಟೀಲ್ ನೇತೃತ್ವದಲ್ಲಿ ಪಿಎಸ್ಐ ತಿಮ್ಮಯ್ಯ, ಬೆಮಳಖೇಡಾ ಪಿಎಸ್ಐ ನಿಂಗಪ್ಪಾ ಮಣ್ಣುರ, ಸಂಚಾರ ಪಿಎಸ್ಐ ಬಸವಲಿಂಗ ಗೊಡಿಹಾಳ, ಆಕಾಶ ಸಿಂಧೆ, ಭಗವಾನ ಬಿರಾದಾರ, ಸೂರ್ಯಕಾಂತ, ಮಲ್ಲು ಮಳ್ಳಿ ಸೇರಿದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.