ವಸಂತಕುಮಾರ್ ಕತಗಾಲಕಾರವಾರ: ಗೋಕರ್ಣದ ಹತ್ತನೇ ತರಗತಿಯ ವಿದ್ಯಾರ್ಥಿ ವಿಘ್ನೇಶ್ವರ ಕೂರ್ಸೆ, ಅಪರೂಪದ ಲೋಹ ತರಂಗ ವಾದನದ ಮೂಲಕ ರಾಜ್ಯದ ವಿವಿಧೆಡೆ ಕಾರ್ಯಕ್ರಮ ನೀಡಿ ಭೇಷ್ ಎನಿಸಿಕೊಂಡು ಹಲವು ಪ್ರಶಸ್ತಿ, ಸನ್ಮಾನಗಳಿಗೆ ಪಾತ್ರನಾಗಿದ್ದಾನೆ. ಕುಮಟಾ ಮೂರೂರು ಪ್ರಗತಿ ವಿದ್ಯಾಲಯದಲ್ಲಿ 10ನೇ ತರಗತಿ ಓದುತ್ತಿರುವ ಈತ ಲೋಹ ತರಂಗದಲ್ಲಿ ಬೆರಗುಗೊಳಿಸುವ ಸಾಧನೆ ಮಾಡಿದ್ದಾನೆ. ತಂದೆ ಗಣಪತಿ ಕೂರ್ಸೆ ವೈದಿಕ ವೃತ್ತಿಯವರಾದರೂ ಹವ್ಯಾಸಿ ಸಂಗೀತ ಕಲಾವಿದರು. ಇವರು ರಾಜು ಹೆಗಡೆ ಹೆಗ್ಗಾರ ಕಂಡುಹಿಡಿದ ಲೋಹತರಂಗದ ವಾದ್ಯವನ್ನು ಆಸಕ್ತಿಯಿಂದ ತಿಳಿದು, ಅದನ್ನೇ ಸ್ವತಃ ಅಳವಡಿಸಿಕೊಂಡು ಕಲಿತರು. ಇವರು ವಿವಿಧ ಸ್ಟೀಲ್ ಲೋಟಗಳಲ್ಲಿ ಸ್ವರವನ್ನು ಆಯ್ಕೆ ಮಾಡಿ ನುಡಿಸುವ ಅಪರೂಪದ ವಿದ್ಯೆ ಅಂದರೆ ಲೋಟಗಳಿಂದ ಮಾಡಿದ ಹೊಸದಾದ ಸಂಗೀತ ವಾದ್ಯವನ್ನು ಕಲಿತರು. ಇದನ್ನು ಒಂದನೇ ತರಗತಿಯಲ್ಲಿ ಓದುತ್ತಿದ್ದ ವಿಘ್ನೇಶ ಆಸಕ್ತಿಯಿಂದ ತಿಳಿದುಕೊಳ್ಳುತ್ತಾ ತಾನು ನುಡಿಸಲು ಪ್ರಯತ್ನಿಸಿ ಯಶಸ್ವಿಯಾದ. ಸತತ ಹತ್ತು ವರ್ಷ ತಂದೆಯಿಂದಲೇ ಈ ವಿದ್ಯೆ ಕಲಿತು ಇಂದು ಪ್ರಸಿದ್ದ ಲೋಹತರಂಗ ವಾದಕನಾಗಿ ಹೊರಹೊಮ್ಮಿದ್ದಾನೆ. ಖಾಸಗಿ ವಾಹಿನಿಯ ಮಜಾ ಟಾಕೀಸ್ ಹಾಗೂ ಉದಯ ಟಿವಿಯ ಕಿಲಾಡಿ ಕಿಡ್ಸ್ ಸೇರಿದಂತೆ ನಾಡಿನ ಹಲವಡೆ ಕಾರ್ಯಕ್ರಮಗಳನ್ನು ನೀಡಿ ಪ್ರಶಂಸೆಗೆ ಪಾತ್ರನಾಗಿ ಸಂಗೀತ ಅಭಿಮಾನಿಗಳಿಂದ ಸೈ ಎನಿಸಿಕೊಂಡಿದ್ದಾನೆ. ಇವನಿಗೆ ಸ್ವರಶ್ರೀ , ಹವ್ಯಕ ಪಲ್ಲವ ಹಾಗೂ ನಮ್ಮನೆ ಕಿಶೋರ ಪ್ರಶಸ್ತಿಗಳು ಲಭಿಸಿದೆ. ಈ ವಾದ್ಯದಿಂದ ಶಾಸ್ತ್ರೀಯ ಸಂಗೀತ, ಭಕ್ತಿ ಸಂಗೀತ ಹಾಗೂ ಸಿನಿಮಾ ಹಾಡುಗಳನ್ನು ನುಡಿಸಿ ಜನಮನ ಗೆದ್ದಿದ್ದಾನೆ. ಇಂದಿನಿಂದ ತ್ರಿ ರಾಜ್ಯಮಟ್ಟದ ಋಗ್ವೇದ ಕಂಠಪಾಠ ಪರೀಕ್ಷೆ