ವಿಜಯ ಸೌಹಾರ್ದ ಬ್ಯಾಂಕ್‌ನ ಶಾಖೆ ಉದ್ಘಾಟನೆ

KannadaprabhaNewsNetwork |  
Published : May 09, 2026, 01:30 AM IST
ಪೋಟೋ: 08ಎಸ್‌ಎಂಜಿಕೆಪಿ07ಶಿವಮೊಗ್ಗದ ನಗರದಲ್ಲಿ ನಿರಾಣಿ ಸಮೂಹ ಸಂಸ್ಥೆಯ ವಿಜಯ ಸೌಹಾರ್ದ ಬ್ಯಾಂಕ್‌ನ ಶಾಖೆಯನ್ನು ಸಂಸದ ಬಿ.ವೈ.ರಾಘವೇಂದ್ರ ಚಾಲನೆ ನೀಡಿದರು. | Kannada Prabha

ಸಾರಾಂಶ

ನಿರಾಣಿ ಸಮೂಹ ಸಂಸ್ಥೆಯ ವಿಜಯ ಸೌಹಾರ್ದ ಬ್ಯಾಂಕ್‌ನ 71ನೇ ಶಾಖೆ ಶಿವಮೊಗ್ಗ ನಗರದಲ್ಲಿ ಆರಂಭಗೊಂಡಿದೆ ಎಂದು ಸಂಸ್ಥೆಯ ಮಾಲೀಕ ಹಾಗೂ ಮಾಜಿ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಿರಾಣಿ ಸಮೂಹ ಸಂಸ್ಥೆಯ ವಿಜಯ ಸೌಹಾರ್ದ ಬ್ಯಾಂಕ್‌ನ 71ನೇ ಶಾಖೆ ಶಿವಮೊಗ್ಗ ನಗರದಲ್ಲಿ ಆರಂಭಗೊಂಡಿದೆ ಎಂದು ಸಂಸ್ಥೆಯ ಮಾಲೀಕ ಹಾಗೂ ಮಾಜಿ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

ವಿಜಯ ಸೌಹಾರ್ದ ಬ್ಯಾಂಕ್‌ನ ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ನಮ್ಮ ಸಮೂಹ ಸಂಸ್ಥೆಯ ಶಾಖೆಗಳು ಕಾರ್ಯ ನಿರ್ವಹಿಸುತ್ತಿದ್ದು, ವಿಶಾಲ ಸೌಹಾರ್ದ ಬ್ಯಾಂಕ್ 25 ಶಾಖೆಗಳು ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದರು.

19 ವರ್ಷಗಳ ಹಿಂದೆ ಸ್ಥಾಪಿತವಾದ ನಮ್ಮ ಸೌಹಾರ್ದ ಬ್ಯಾಂಕ್ 48 ಸಾವಿರ ಕೋಟಿ ವಹಿವಾಟನ್ನು ನಡೆಸುತ್ತಿದೆ, ಕಳೆದ ವರ್ಷ 46 ಸಾವಿರ ಕೋಟಿ ವಹಿವಾಟು ನಡೆಸಿತ್ತು. ವರ್ಷದಿಂದ ವರ್ಷಕ್ಕೆ ನಮ್ಮ ವಹಿವಾಟು ಏರಿಕೆಯ ಹಾದಿಯಲ್ಲಿಯೇ ಸಾಗುತ್ತಿದೆ. ಕಳೆದ ವರ್ಷ 60 ಕೋಟಿ ಲಾಭವನ್ನು ಗಳಿಸಿದೆ. ಎನ್‌ಪಿಎ ಶೇ.1 ಕ್ಕಿಂತ ಕಡಿಮೆ ಇದೆ ಎಂದು ತಿಳಿಸಿದರು.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಇರುವಂತಹ ಎಲ್ಲಾ ಸೌಲಭ್ಯಗಳು ನಮ್ಮ ಬ್ಯಾಂಕಿನಲ್ಲೇ ಲಭ್ಯವಿದೆ. ಆದರೆ, ಗ್ರಾಹಕರಿಗೆ ಯಾವುದೇ ಸೇವಾಶುಲ್ಕ ವಿಧಿಸುವುದಿಲ್ಲ. ಜನಸ್ನೇಹಿಯಾಗಿ ನಮ್ಮ ಬ್ಯಾಂಕ್ ಇಲ್ಲಿಯವರೆಗೂ ಹಾಗೂ ಮುಂದೆಯೂ ಸಹ ಕಾರ್ಯ ನಿರ್ವಹಿಸಿಕೊಂಡು ಹೋಗಲಿದೆ. ಕರ್ನಾಟಕದಲ್ಲೇ ನಮ್ಮ ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ಕರ್ನಾಟಕದಲ್ಲೇ ಪ್ರಥಮ ಸ್ಥಾನ ಪಡೆದ ಪ್ರತಿಷ್ಟಿತ ಸಹಕಾರಿ ಸಂಸ್ಥೆಯಾಗಿದೆ. ಮುಂದಿನ ದಿನಗಳಲ್ಲಿ 125 ಶಾಖೆಗಳನ್ನು ತೆರೆಯುವ ಗುರಿ ಹಾಕಿಕೊಳ್ಳಲಾಗಿದ್ದು, ಪ್ರಾರಂಭದಲ್ಲಿ 400 ಸದಸ್ಯರಿಂದ 10 ಲಕ್ಷ ರು. ಬಂಡವಾಳದಿಂದ ಪ್ರಾರಂಭವಾಗಿ ಪ್ರಸ್ತುತ 2 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು, 21.60 ಕೋಟಿ ರು. ಶೇರು ಬಂಡವಾಳ ಹೊಂದಿದೆ. ಪ್ರತಿವರ್ಷ ಸದಸ್ಯರಿಗೆ ಶೇ.೨೫ರಷ್ಟು ಲಾಭಾಂಶ ಹಂಚಿಕೆ ಮಾಡಿದ ಕರ್ನಾಟಕದ ಏಕೈಕ ಸಹಕಾರಿ ಸಂಘವಾಗಿದೆ. ಪ್ರದಾನ ಕಚೇರಿ ಸಹಿತ ಎಲ್ಲಾ ಶಾಖೆಗಳು ಗಣಕೀಕೃತಗೊಂಡು ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಗ್ರಾಹಕರಿಗೆ ಎಸ್‌ಎಂಎಸ್ ಸೌಲಭ್ಯ, ಠೇವುಗಳ ಮೇಲೆ ಆಕರ್ಷಕ ಬಡ್ಡಿದರ, ತ್ವರಿತ ಹಣ ವರ್ಗಾವಣೆಗಾಗಿ ಎನ್‌ಇಎಫ್‌ಟಿ/ಆರ್‍ಟಿಜಿಎಸ್ ಜೊತೆಗೆ ಸೌಹಾರ್ದ ಮಾದರಿಯಲ್ಲಿ ಪ್ರಥಮ ಬಾರಿಗೆ ಎಟಿಎಂ ಸೌಲಭ್ಯ ನೀಡುವುದರ ಜೊತೆಗೆ ಸದಸ್ಯರಿಗೆ ಜೀವವಿಮೆ ಮತ್ತು ಅಪಘಾತವಿಮೆ ಸೌಲಭ್ಯ ಕಲ್ಪಿಸಲಾಗಿದೆ. ಎಸ್ ಬ್ಯಾಂಕ್ ಸಹಯೋಗದೊಂದಿಗೆ ಸ್ವಂತ ಐಎಫ್‌ಎಸ್‌ಸಿ ಕೋಡ್ ಪಡೆದು ಗ್ರಾಹಕರಿಗೆ ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯ ಒದಗಿಸಿದ ಹೆಗ್ಗಳಿಕೆ ನಮ್ಮ ಸಹಕಾರಿಗಿದೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಜ್ಯೋತಿ ಬೆಳಗಿಸಿ ಸಂಸ್ಥೆಗೆ ಚಾಲನೆ ನೀಡಿದರು. ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಸೇರಿದಂತೆ ಅನೇಕ ಗಣ್ಯರು ಶುಭ ಹಾರೈಸಿದರು. ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್, ಎಸ್.ದತ್ತಾತ್ರಿ, ವಡ್ನಾಳ್ ರಾಜಣ್ಣ, ಓಂಕಾರಪ್ಪ, ಬಿಜೆಪಿ ಮಾಧ್ಯಮ ಪ್ರಮುಖ್‌ ಎಸ್. ಚಂದ್ರಶೇಖರ್ , ಹಲವರಿದ್ದರು.

ಬಿಎಸ್‌ವೈ ಅಭಿಮಾನೋತ್ಸವಕ್ಕೆ ಭರದ ಸಿದ್ಧತೆ

ಮೇ 9 ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಬಿಎಸ್‌ವೈ ಅಭಿಮಾನೋತ್ಸವಕ್ಕೆ ಭರದ ಸಿದ್ಧತೆ ನಡೆದಿದ್ದು, 10ಲಕ್ಷಕ್ಕೂ ಹೆಚ್ಚು ಬಿಎಸ್‌ವೈ ಅಭಿಮಾನಿಗಳು ಭಾಗವಹಿಸಲಿದ್ದಾರೆ. ನಾವು ಕೂಡ ಕಳೆದ ಕೆಲವು ದಿನಗಳಿಂದ ಈ ಸಮಾವೇಶದ ಸಿದ್ಧತೆಯಲ್ಲಿ ಪಾಲ್ಗೊಂಡಿದ್ದೇವೆ. ಕರ್ನಾಟಕ ರಾಜ್ಯದ ಐತಿಹಾಸಿಕ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿದ ಬಿಎಸ್‌ವೈ ಅಭಿಮಾನೋತ್ಸವಕ್ಕೆ ರಾಜ್ಯದ ಎಲ್ಲೆಡೆಯಿಂದ ಜನಸಾಗರ ಹರಿದುಬರಲಿದೆ. ದಾವಣಗೆರೆ ಮತ್ತು ಪಂಚರಾಜ್ಯಗಳ ಚುನಾವಣೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಸಾಮಾನ್ಯವಾಗಿ ಉಪಚುನಾವಣೆಗಳಲ್ಲಿ ಅಧಿಕಾರದಲ್ಲಿರುವ ಪಕ್ಷವೇ ಜಯಗಳಿಸುತ್ತದೆ. ಪಂಚರಾಜ್ಯಗಳ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ, ಪುದುಚೆರಿ ಮತ್ತು ಅಸ್ಸಾಂನಲ್ಲಿ ಬಿಜೆಪಿ ಅಧಿಕಾರ ಗಳಿಸಿದೆ. ತನ್ನ ಓಟ್ ಷೇರನ್ನು ಹೆಚ್ಚಳ ಮಾಡಿಕೊಂಡಿದೆ. ಅದೇ ರೀತಿ ಕೇರಳ ಮತ್ತು ತಮಿಳುನಾಡಿನಲ್ಲೂ ಉತ್ತಮ ಸಾಧನೆ ತೋರಿದೆ. ಪಕ್ಷ ಸಂಘಟಿತವಾಗಿದ್ದು, ತನ್ನ ಬಲವನ್ನು ಹೆಚ್ಚಿಸಿ ಕೊಳ್ಳುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಮತ್ತೆ ರಾಜ್ಯದಲ್ಲಿ ಅಧಿಕಾರ ಹಿಡಿಯಲಿದೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳವಾಡಿಯಲ್ಲಿ ಅಂಬೇಡ್ಕರ್‌ ಪುತ್ಥಳಿ ಅನಾವರಣ
ಸಂಬಳ ಹೆಚ್ಚಳಕ್ಕೆ ಒತ್ತಾಯಿಸಿ ಶಾಹಿ ಕಂಪನಿ ಕಾರ್ಮಿಕರ ಪ್ರತಿಭಟನೆ