ಗೈರಾದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಿ

KannadaprabhaNewsNetwork | Published : Oct 25, 2024 12:53 AM

ಗ್ರಾಪಂಗೆ ಬರುವ ಅನುದಾನಗಳನ್ನು ಜನರಿಗೆ ಸಮರ್ಪಕವಾಗಿ ವಿತರಣೆ ಮಾಡಬೇಕು

ಕನ್ನಡಪ್ರಭ ವಾರ್ತೆ ಸಾಲಿಗ್ರಾಮ

ಗ್ರಾಮ ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಕಾರ್ಯನಿರ್ವಹಕ ಅಧಿಕಾರಿಗಳಿಗೆ ಗ್ರಾಪಂ ಅಧ್ಯಕ್ಷೆ ರೇಣುಕಾ ವೆಂಕಟೇಶನಾಯಕ ಒತ್ತಾಯಿಸಿದರು.

ತಾಲೂಕಿನ ತಂದ್ರೆ ಗ್ರಾಪಂನಲ್ಲಿ ನಡೆದ ಗ್ರಾಮ ಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಭಾಗದ ಜನರಿಗೆ ತಲುಪಿಸುವ ಕೆಲಸ ಪ್ರತಿ ಇಲಾಖೆಯ ಅಧಿಕಾರಿಗಳು ಮಾಡಬೇಕು. ಆದರೆ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಕೊಟ್ಟಿದ್ದರು. ಅವುಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸಲು ತಾಲೂಕು ಮಟ್ಟದ ಅಧಿಕಾರಿಗಳು ಸ್ಪಂದನೆ ನೀಡುತ್ತಿಲ್ಲ. ಇದರಿಂದ ಗ್ರಾಪಂ ಅಭಿವೃದ್ಧಿಗಳು ಕುಂಠಿತವಾಗುತ್ತಿದೆ. ಗ್ರಾಪಂ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳೊಂದಿಗೆ ತಾಲೂಕು ಮಟ್ಟದ ಅಧಿಕಾರಿಗಳು ಸ್ಪಂದನೆ ನೀಡದಿದ್ದರೆ ಅಭಿವೃದ್ಧಿ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಗ್ರಾಪಂಗೆ ಬರುವ ಅನುದಾನಗಳನ್ನು ಜನರಿಗೆ ಸಮರ್ಪಕವಾಗಿ ವಿತರಣೆ ಮಾಡಬೇಕು ಎಂದರೆ ಗ್ರಾಪಂಗೆ ಸಂಬಂಧಪಟ್ಟ ಎಲ್ಲ ಇಲಾಖೆಯ ಅಧಿಕಾರಿಗಳು ಗ್ರಾಮ ಸಭೆಯಲ್ಲಿ ಭಾಗವಹಿಸಿ ಜನರಿಗೆ ತಿಳಿಸಬೇಕು. ಆದರೆ ಗ್ರಾಪಂ ಪಿಡಿಒ ಮತ್ತು ಆಡಳಿತ ಮಂಡಳಿ ಸದಸ್ಯರು ಗ್ರಾಮ ಸಭೆಯನ್ನು ಮಾಡುವಂತಹ ಅನಿವಾರ್ಯ ಎದುರಾಗಿದೆ, ಯಾವುದೇ ಇಲಾಖೆಯಿಂದ ತಾಲೂಕು ಮಟ್ಟದ ಅಧಿಕಾರಿಗಳಾಗಲಿ ಅಥವಾ ಇಲಾಖೆಯ ಸಿಬ್ಬಂದಿಗಳಾಗಲಿ ಗ್ರಾಮ ಸಭೆಗಳಿಗೆ ಗೈರಾಗುವುದು ಎಷ್ಟು ಸರಿ ? ಇದೆಲ್ಲ ತಿಳಿದಿದ್ದರೂ ಜಿಲ್ಲಾ ಕಾರ್ಯ ನಿರ್ವಾಹಕ ಅಧಿಕಾರಿ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮೇಲಾಧಿಕಾರಿಗಳಿಗೆ ಪ್ರಶ್ನಿಸಿದರು.

ಗ್ರಾಪಂ ಪಿಡಿಒ ಮಹಾದೇವ ಮಾತನಾಡಿ, ಗ್ರಾಮಗಳ ಅಭಿವೃದ್ಧಿಗೆ ಬಂದಿರುವ ಯೋಜನೆಗಳನ್ನು ಗ್ರಾಪಂ ಸದಸ್ಯರು ಸಂಪೂರ್ಣವಾಗಿ ಬಳಕೆ ಮಾಡಬೇಕು. ಮಾಡದಿದ್ದರೆ ಆ ಅನುದಾನಗಳು ಮತ್ತೆ ಸರ್ಕಾರಕ್ಕೆ ವಾಪಸ್ ಹೋಗುತ್ತವೆ. ಹೋದ ನಂತರ ಮತ್ತೆ ಮುಂದಿನ ವರ್ಷ ಅನುದಾನ ಬಿಡುಗಡೆ ಆಗುವ ಸಂದರ್ಭದಲ್ಲಿ ಹೆಚ್ಚು ಅನುದಾನಗಳು ಬರುವುದಿಲ್ಲ ಎಂದರು.

ಗ್ರಾಮ ಸಭೆಯಲ್ಲಿ ರಸ್ತೆ ಚರಂಡಿ ಆಶ್ರಯ ಮನೆ ಕೊಟ್ಟಿಗೆ ನಿರ್ಮಾಣ 15ನೇ ಹಣಕಾಸು ನರೇಗಾ ಯೋಜನೆ ಎಸ್ ಸಿ ಎಸ್ ಟಿ ಸಮುದಾಯದ ಸೌಲಭ್ಯ ಕುಡಿಯುವ ನೀರು ಬಿದ್ದು ದೀಪ ಕೆರೆಗಳ ಅಭಿವೃದ್ಧಿ ಸೇರಿದಂತೆ ಹಲವು ವಿಷಯಗಳನ್ನು ಚರ್ಚಿಸಲಾಗಿತು ಯಾವುದೇ ಯೋಜನೆಗಳಿಗೆ ಫಲಾನುಭವಿಗಳನ್ನು ಗ್ರಾಮಸಭೆಯಲ್ಲೇ ಆಯ್ಕೆ ಮಾಡುವ ಹೆಸರೇ ಅಂತಿಮವಾಗಿರುತ್ತದೆ ಎಂದು ತಿಳಿಸಿದರು.

ಗ್ರಾಮ ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಎಂ.ಕೆ. ಮಾದೇವ್, ಅಭಿವೃದ್ಧಿ ಅಧಿಕಾರಿ ಟಿ.ಎ. ಮಾದೇವ್, ನೋಡಲ್ ಅಧಿಕಾರಿ ಮೇಘನಾ, ಗ್ರಾಪಂ ಸದಸ್ಯ ಸಣ್ಣಸ್ವಾಮಿ, ಲಕ್ಷ್ಮಿಮಹಾದೇವ ಶೆಟ್ಟಿ ಸೌಂದರ್ಯ ಸಂಪತ್, ಪ್ರಮೀಳಾ ರಮೇಶ್, ಕಾರ್ಯದರ್ಶಿ ವಾಮನ್ ರಾವ್, ಬಿಲ್ ಕಲೆಕ್ಟರ್ ಸುಂದರೇಗೌಡ, ತಾಲೂಕು ವಾಲ್ಮೀಕಿ ಸಂಘದ ಉಪಾಧ್ಯಕ್ಷ ವೆಂಕಟೇಶನಾಯಕ, ಮುದುಗುಪ್ಪೆಕುಮಾರ್, ಮಹದೇವ್, ದ್ಯಾವಯ್ಯ, ರೇಷ್ಮೆ ಇಲಾಖೆಯ ರಾಮಚಂದ್ರ, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಮೇಘನಾ, ಎಸ್.ಡಿ.ಎ. ಮುಬಸೀರ್ ತಬಸ್ಸಂ, ಶಿಕ್ಷಕಿ ರೇವತಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಸೇರಿದಂತೆ ಗ್ರಾಪಂ ಸಿಬ್ಬಂದಿ ಇದ್ದರು.